ಕಟ್ಟು ನಿಟ್ಟಿನ ತಪಸ್ಸು, ಬ್ರಾಹ್ಮೀ ಮುಹೂರ್ತಕ್ಕೆ ಏಳುವುದು, ಸೂರ್ಯೋದಯಕ್ಕೆ ಮುನ್ನವೇ ಶುದ್ಧರಾಗಿ ವಜ್ರಾಸನದಲ್ಲಿ ಕುಳಿತು ಪ್ರಾಣಾಯಾಮ ಮೂಲಕ ಕುಂಭಕದಲ್ಲಿದ್ದಾಗ ಧ್ಯಾನ. ಅಭಿಜಿನ್ಮುಹೂರ್ತಕ್ಕೆ ಆಸನ ಬಿಚ್ಚಿ ಅಡವಿಯಲ್ಲಿ ಅಡ್ಡಾಡಿ, ಹಣ್ಣುಗಳನ್ನೆರಡು ಹೆಕ್ಕಿ ತಿಂದು, ಪುಷ್ಕರದ ನೀರು ಕುಡಿದು ವಿಶ್ರಾಂತಿ. ಮತ್ತೆ ಅಪರಾಹ್ನಕ್ಕೆ ಮತ್ತೆ ಸ್ನಾನ, ಆಸನ, ಪ್ರಾಣಾಯಾಮ, ಕುಂಭಕ, ಧ್ಯಾನ. ಮಹಾರಾತ್ರಿಯವರೆಗೆ ಸಮಾಧಿ. ಆನಂತರ ಬಹಿರ್ಮುಖ. ಅನತಿ ದೂರದಲ್ಲಿ ಸಪತ್ನೀಕ ಋಷಿ ಕುಟಿ. ಅವರಲ್ಲಿನ ಹಸುವಿನ ಹಾಲನ್ನು ಅವರ ಅಂತೇ ವಾಸಿಯೊಬ್ಬ ತಂದಿಟ್ಟು ಹೋಗಿರುತ್ತಾನೆ, ಅದನ್ನು ಕುಡಿದು ಮಲಗಿದರೆ ಮತ್ತೆ ಹಕ್ಕಿ ಹಾರುವ ಹೊತ್ತಿಗೆ ಎಚ್ಚರ. ಇದು ಎಂದು ತಾನು ತಪವನ್ನು ಆರಂಭಿಸಿದೆನೋ, ಅಂದು ಗುರುಗಳು ವಾಮದೇವರು ಕಲಿಸಿದ ಪಾಠ. ಇದು ದೈನಂದಿನ ಕರ್ತವ್ಯ. ಅದೀಗ ತೀವ್ರ. ಇಲ್ಲಿವರೆಗೆ ತಾವು ಮಾಡುತ್ತಿದ್ದ ತಪಸ್ಸಿನ ರೀತಿಯೇ ಬೇರೆ. ಈಗಿನ ನೀತಿಯೇ ಬೇರೆ. ಈಗ ಕಣ್ಮುಚ್ಚಿ ಏನನ್ನೂ ಕಾಣದೆ, ಏನನ್ನೂ ಯೋಚಿಸದೇ ಬ್ರಹ್ಮಾನನ್ನು ಕುರಿತ ಚಿಂತನೆ. ಆದರೆ ಬ್ರಹ್ಮನ ಚಿತ್ರ ಮನಸ್ಸಿನಲ್ಲಿ ಮೂಡುವುದಕ್ಕೇ ಅದೆಷ್ಟು ಕಾಲ ತಗೆದುಕೊಂಡಿತೋ ? ಕುಂಭಕದಲ್ಲಿ ಪ್ರಾಣವಾಯು ನಿಂತಾಗ ಅದೇನೋ ಚಲನೆ, ಅದೇನೋ ಸದ್ದು, ಅದೇನೋ ಕಲರವ, ಅದೇನೋ ಅಸ್ಪಷ್ಠ ಚಿತ್ರ. ಆ ಚಿತ್ರಕ್ಕೆ ಸ್ಪಷ್ಟ ಆಕಾರ ಮೂಡಲು ಸರಿಸುಮಾರು ವರ್ಷವೇ ಆಗಿರಬೇಕು. ಇದೀಗ ಉಸಿರನ್ನು 10 ನಿಮಿಷಗಳ ಕಾಲ; ಮತ್ತೂ ಪ್ರಯತ್ನ ಪಟ್ಟರೆ 12-12 ನಿಮಿಷಗಳ ಕಾಲ; ಶ್ವಾಸಕೋಶದಲ್ಲಿ ನಿಲ್ಲಿಸಬಹುದು; ಸುಲಭವಾಗಿ. ಕುಂಭಕದಲ್ಲಿ ಜೀವಾನಿಲ ನಿಂತುಬಿಟ್ಟಾಗ ಕಾಲವೇ ಸ್ಥಗಿತ. ಆಗಲೇ ನಿಜವಾದ ತಪಸ್ಸು. ಇಲ್ಲಿವರೆಗೆ ತಾನು ಮಾಡುತ್ತಿದ್ದುದು ನಚಿಕೇತರು ಹೇಳಿದಂತೆ ಹಠಯೋಗ. ಶರೀರವನ್ನು ವಜ್ರ ಮಾಡುವ ವಿಧಾನ. ಇದೀಗ ತನ್ನ ಗಮನ ಲಯಯೋಗದಲ್ಲಿ. ಒಟ್ಟಿಗೇ, ಬ್ರಹ್ಮಾನುಸಂಧಾನದಲ್ಲಿ. ಈ ತಪಸ್ಸು, ಗಭೀರ ತಪಸ್ಸು, ಅಲ್ಪಾಕರ್ಶಣೆಗಳಿಗೆ ಒಲಿಯದ ತಪಸ್ಸು, ನಿಷ್ಠ ತಪಸ್ಸು ಮಾಡಿದಷ್ಟು ಕಾಲ ವಯಸ್ಸೂ ತಟಸ್ಥ. ಬೇರೆಯವರಿಗೆ ವರ್ಷವಾದರೆ ತನಗೊಂದು ತಿಂಗಳು ! ವಾಮದೇವರು ಹೇಳಿದ್ದು ನೆನಪಾಗುತ್ತಿದೆ. ಉತ್ತರದ ಹಿಮಾಲಯದ ಋಷಿಗಳು ಎರಡು ಘಂಟೆಗೊಮ್ಮೆ ಉಸಿರಾಡುತ್ತಾರಂತೆ !! ಎಂದರೆ, ದಿನಕ್ಕಾರು ಬಾರಿ ಮಾತ್ರ ಉಸಿರೆಳೆದು ಬಿಡುವರು !!! ವರ್ಷಗಳ ಹಿಂದೆ ತನಗೆ ಹತ್ತು ನಿಮಿಷಗಳಷ್ಟು ಕಾಲ ಗಾಳಿಯನ್ನು ಎದೆಯಲ್ಲಿ ಬಂಧಿಸುವುದು ಸಾಧ್ಯವೆಂದರೆ ನಂಬಲಾಗುತ್ತಿರಲಿಲ್ಲ. ಏನೇನು ವಿಚಿತ್ರವಿದೆಯೋ ಈ ಗಾಳಿಯಲ್ಲಿ, ಅದರ ಪೂರಕ, ರೇಚಕ, ಕುಂಭಕಗಳಲ್ಲಿ.