ವಿಶ್ವಮಿತ್ರರ ಯೋಚನೆ ಮುಂದುವರಿಯಿತು. ನಾನಿನ್ನೂ ಋಷಿ ಮಾತ್ರನಾಗಿದ್ದೇನೆ. ನನ್ನ ಗುರಿ ಬ್ರಹ್ಮರ್ಷಿ. ಮಧ್ಯದಲ್ಲೇಕೆ ಪತಿತನಾದೆ? ಅಂತೂ ಈ ಇಂದ್ರ ತನ್ನನ್ನು ಸೋಲಿಸಿದ. ಏಕೆ ಈ ಇಂದ್ರನಿಗೆ ಈ ಕೆಟ್ಟ ಬುದ್ಧಿ? ತನ್ನೊಬ್ಬನನ್ನೇ ಅಲ್ಲ, ಅದೆಷ್ಟು ಋಷಿಗಳನ್ನು ದಾರಿ ತಪ್ಪಿಸಿದ್ದಾನೋ? ಅವೆಷ್ಟು ಯಙ್ಞಗಳನ್ನು ಹಾಳುಗೆಡವಿದ್ದಾನೋ. ಇಂದ್ರನ ವಿಷಯ ಬಿಡೋಣ, ನನಗೇನಾಗಿದೆ? ಎಂದರೆ ಮನುಷ್ಯನಿಗೆ ಕಾಮವೆಂಬುದು, ಸ್ತ್ರೀ ಸಂಗವೆಂಬುದು ಅಷ್ಟೊಂದು ಪ್ರಬಲವೇ? ಅದನ್ನು ಮೀರಲು ಸಾಧ್ಯವೇ ಇಲ್ಲವೇ? ಹೆಣ್ಣೆಂದರೆ ಏಕೆ ಈ ಗಂಡು ಹೀಗೆ ಬಾಯಿ ಬಿಡುತ್ತಾನೆ? ಈ ಪ್ರವೃತ್ತಿ ಅತ್ಯಂತ ನೈಸರ್ಗಿಕವಿರಬಹುದು, ಸಹಜವೂ ಇರಬಹುದು.