ಉಷಃ ಕಿರಣಗಳು. ಸುತ್ತಲ ಕಾಡಿನ ಹಸುರುಕೋಟೆ, ನಳನಳಿಸುತ್ತಿರುವ ಚಿಗುರು, ಇಬ್ಬನಿಗಳ ಮಣಿಗಳು, ಕೇಸರಿ ಗುಂಡು ಸೂರ್ಯನ ಉದಯ. ತಾನು ರಾಜ್ಯ ಬಿಟ್ಟು ಹಿಮಗಿರಿಗೆ ಮೊದಲ ಬಾರಿಗೆ ಹೋದಾಗ ಅರಮನೆ, ಸುಪ್ಪತ್ತಿಗೆ ಇಲ್ಲದೇ; ಬಿಸುಪು ಹೊದಿಕೆ ಇಲ್ಲದೇ; ಬೇಕೆಂದರೆ ಬರುವ ದಾಸ ದಾಸಿಯರಿಲ್ಲದೇ; ಬೆಳಗೆದ್ದರೆ ಬಿಸಿನೀರಿನ ಸ್ವಾಗತವಿಲ್ಲದೇ; ಮಜ್ಜನ, ವಸ್ತ್ರಾಛ್ಛಾದನ, ಉಪಾಹಾರಗಳಿಲ್ಲದೇ.... ಒಟ್ಟಿನಲ್ಲಿ ಯಾವ ಸಹಾಯ ಸಿದ್ಧತೆಗಳೂ ಇಲ್ಲದೇ, ತಾನು ಏಕಾಂಗಿಯಾಗಿ ಮರದ ಬೊಡ್ಡೆಗೆ ತಲೆಯಿಟ್ಟು, ಕೊರೆವ ಛಳಿಯಲ್ಲಿ ನೆಲದ ಮೇಲೋ, ತರೆಗೆಲೆಗಳ ಮೇಲೋ, ಹುಲ್ಲಿನ ಮೇಲೋ, ಮಲಗಿ, ನಿದ್ದೆಯಿರದೆ ಮೊಂಪರು ಮೊಂಪರು ಗತ ಘಟನೆಗಳನ್ನೇ ಮೆಲುಕು ಹಾಕುತ್ತ, ನಿದ್ದೆಯೂ ಬಾರದೆ ಆ ಛಳಿ-ಛಳಿಯಲ್ಲಿ ಥರ ಥರ ನಡುಗುತ್ತ, ಇಡೀ ರಾತ್ರಿ ಕಳೆದು, ಬಿಸಿಲಿಗೇ ಕಾಯುತ್ತಿದ್ದೆ; ಬೇಡುತ್ತಿದ್ದೆ. ಆದರೆ ಆ ಸೂರ್ಯನೋ ಕೇಳಿ ಕೇಳಿ ಘಂಟೆಗಳಾದಮೇಲೆ ದಯಮಾಡಿಸುತ್ತಿದ್ದ!! ಓಹ್ ! ಪ್ರಾರಂಭದ ದಿನಗಳು ತನಗೆ ತುಂಬ ತುಂಬಾ ಕಷ್ಟವಾಗಿತ್ತು.