ಹೌದು. ಅಂದಿಗೆ ಎರಡು ವರ್ಷಗಳ ಹಿಂದೆ ತನ್ನ ತಂದೆ ಗಾಧಿಯ ಆಸ್ಥಾನಕ್ಕೆ ಬೆನ್ನು ಬಾಗಿದ, ಸುಕ್ಕು ಚರ್ಮದ, ಮೂಳೆ ದೇಹದ, ಅದುರುವ ಕಾಲಿನ ವೃದ್ಧರೊಬ್ಬರು; ಸಾಮಾನ್ಯ ಮುದುಕರಲ್ಲ, ಬೆಂಕಿಯ ಕಂಬದಂತೆ ಬರುತ್ತಿದ್ದಾರೆ!!!! ಅವರಿಗೆಷ್ಟೇ ವಯಸ್ಸಾಗಿದ್ದರೂ ಕೇವಲ ಮುಖವಲ್ಲ, ದೇಹ ತುಂಬ ತೇಜಸ್ಸು ಸೂಸುತ್ತಿದ್ದ ಋಷಿ. ಅವರೇ ಋಚೀಕರು. ಅವರ ಬಗ್ಗೆ ತಾನು ತುಂಬ ಕೇಳಿದ್ದಳು. ಅಶ್ವಮೇಧದ ಒಂದು ಕುದುರೆ ಸಿಗುವುದೇ ಕಷ್ಟ. ಅಂತಹದ್ದರಲ್ಲಿ ಅಶ್ವ ತೀರ್ಥದಲ್ಲಿ ಮಿಂದು, ಕುದುರೆ ಮೊಗದ ತುಂಬುರರು ನೀಡಿದ ಮಂತ್ರದಿಂದ, ವರ್ಷಗಟ್ಟಲೆ ತಪಸ್ಸು ಮಾಡಿ ಶತ ಶತ ಕುದುರೆಗಳನ್ನು ಪಡದಿದ್ದರು. ತುಂಬು ಸುಂದರವಾದ, ಮೃದುವಾದ, ದೃಢ ನಡಿಗೆಯ, ಗಟ್ಟಿ ಗೊರಸಿನ ಬಿಳಿ ಕುದುರೆಗಳಂತೆ! ಆಶ್ಚರ್ಯವೆಂದರೆ ಬಾಲ ಮಾತ್ರ ಹಳದಿ!! ಎರಡರಲ್ಲಿ ಒಂದು ಕಿವಿ ಮಾತ್ರ ಕಪ್ಪು!!! ಇಂತಹ ಶಕ್ತ, ಮಹಾ ಸಮರ್ಥ ಮಂತ್ರರ್ಷಿ. ಆದರೆ ಇಷ್ಟೆಲ್ಲ ಸಾಮರ್ಥ್ಯವಿದ್ದವರು ತಮ್ಮ ದೇಹವನ್ನೇಕೆ ಈ ದುರವಸ್ಥೆಯಲ್ಲಿ ಇಟ್ಟುಕೊಂಡಿದ್ದಾರೆ?