ನೆನಪಲ್ಲಿ ಆ ದಿನ ಮೂಡುವ ಹೊತ್ತಿಗೆ, ಶತಾನಂದರು ಬಂದು ಅಭಿವಾದನ ಮಾಡಿದರು; ಪ್ರವರ ಹೇಳಿಕೊಂಡು. ಅಲ್ಲಿಗೆ ಬಂದ ರಾಮ-ಲಕ್ಷ್ಮಣರೂ ಶತಾನಂದರಿಗೆ ವಂದಿಸಿದರು. ಸಭೆಯಲ್ಲಿ ಶ್ರೀರಾಮರು ಮೆರೆದ ಅದ್ಭುತವನ್ನು ಕಂಡು ರೋಮಾಂಚಿತರಾಗಿದ್ದ ಶತಾನಂದರು, " ಶ್ರೀರಾಮ, ಆ ಧನುಸ್ಸನ್ನು ಎತ್ತಲೇ ಯಾರಿಗೂ ಸಾಧ್ಯವಾಗಿರಲಿಲ್ಲ. ಎಷ್ಟೋ ವರ್ಷಗಳಿಂದ ಅದನ್ನು ನೋಡುತ್ತಿದ್ದೇವೆ. ಚಪಲಕ್ಕೆ ನಾನೇ ಒಮ್ಮೆ ಅದನ್ನು ಯಾರಿಗೂ ಗೊತ್ತಿಲ್ಲದಂತೆ ಎತ್ತಲು ಪ್ರಯತ್ನಿಸಿದ್ದೂ ನಿಜ. ಎರಡು ಕೈಗಳಿಂದ ಅಲ್ಲಾಡಿಸಿದರೂ ಅದು ಮುಳ್ಳುಮೊನೆಯಷ್ಟೂ ಅಲುಗಲಿಲ್ಲ. ಅದೆಂತು ಅಷ್ಟು ಸುಲಭವಾಗಿ ಎತ್ತಿಬಿಟ್ಟೆ? ಅಷ್ಟೇ ಅಲ್ಲ, ಹೆದೆ ಏರಿಸಿಬಿಟ್ಟೆ? "ಏನು ಹೇಳುವುದೆಂದು ಶ್ರೀರಾಮರಿಗೆ ಗೊತ್ತಾಗಲಿಲ್ಲ. ಈಶ್ವರನಿಗೂ ತನಗೂ ನಡೆದ ಸಂಭಾಷಣೆ ಹೇಳೋಣವೇ? ಅದು ದೈವರಹಸ್ಯ. ಹೇಳದಿದ್ದರೆ ಸುಳ್ಳು ಹೇಳಿದಂತಾಗುತ್ತದೆ. ಯೋಚಿಸುತ್ತಿದ್ದಾಗಲೇ ಶತಾನಂದರು ಮತ್ತೊಂದು ವಿಷಯಕ್ಕೆ ಹೊರಳಿದರು. "ಶ್ರೀರಾಮ, ನಿನ್ನ ದಯೆಯಿಂದ ನನ್ನ ತಾಯಿಗೆ ಪುನರ್ಜನ್ಮ ಬಂದಂತಾಯಿತು. ನನ್ನ ತಂದೆ-ತಾಯಿಗಳನ್ನು ಒಂದಾಗಿಸಿದ ಪುಣ್ಯ ನಿನಗೆ ಬಂದಿದೆ. "ಕತ್ತು ಹೊರಳಿಸಿ, ವಿಶ್ವಮಿತ್ರರ ಕಡೆ ನೋಡುತ್ತಾ ಶತಾನಂದರು ಮುಂದುವರಿಸಿದರು. ವಿಶ್ವಮಿತ್ರರೇ, ಯಾರು ಯಾರದೋ ಬಾಯಿಂದ ಈ ಕಥೆ ಕೇಳಿದ್ದೇನೆ. ನೀವು ಪ್ರತ್ಯಕ್ಷ ಸಾಕ್ಷಿ. ದಯವಿಟ್ಟು ಏನಾಯಿತೆಂದು ಹೇಳುವಿರಾ? ಸಂಪೂರ್ಣ ವಿಷಯ ತಿಳಿದು ತಂದೆ-ತಾಯಿಗಳನ್ನು ನೋಡಲು ಹೋಗಬೇಕೆಂದಿರುವೆ.