ರಾಮಾಗಮನ, ದರ್ಶನವಾಗುತ್ತಿದ್ದಂತೆಯೇ, ತನಗೆ ದೇಹ ಪ್ರಾಪ್ತಿಯಾಗುತ್ತಿದ್ದಂತೆಯೇ, ಯಜಮಾನರ ಆದೇಶ ನೆನಪಾಯಿತು. ಮನದಲ್ಲಿ ಯೋಚಿಸುತ್ತಿದ್ದಂತೆಯೇ ಅರ್ಘ್ಯ, ಜಲ, ಅರಿಶಿನ, ಕುಂಕುಮ, ವಸ್ತ್ರ, ಹೂವು... ಎಲ್ಲ ಕೈ ಚಾಚುತ್ತಿದ್ದಂತೆಯೇ, ಪ್ರತ್ಯಕ್ಷವಾಗ ತೊಡಗಿದವು. ಮನಸ್ಸಿನಲ್ಲಿ ಸಂಕಲ್ಪಿಸುತ್ತಿದ್ದಂತೆಯೇ ಸಿಂಹಾಸನವೊ೦ದು ಸಿದ್ಧವಾಯಿತು. "ರಾಮ, ದಯವಿಟ್ಟು ಕೂಡು. ನೀನು ಕೇವಲ ಮನುಷ್ಯನಲ್ಲ, ನೀನು ಅವತಾರ ಪುರುಷ; ನಿನ್ನನ್ನು ಪೂಜಿಸಬೇಕೀಗ. ನೀನು ಸಾಮಾನ್ಯ ಅತಿಥಿಯಲ್ಲ, ನನ್ನ ಉದ್ಧಾರಕ್ಕೆ ಆಗಮಿಸಿದ ಮಹಾ ಅತಿಥಿ. "ಶ್ರೀರಾಮರಿಗೆ ತುಂಬ ಸಂಕೋಚವಾಯಿತು. ಹೇಗೆ ತಾನು ಆಸನದಲ್ಲಿ ಕುಳಿತು ಆ ಅಜ್ಜಿಯಿಂದ ಉಪಚರಿಕೊಳ್ಳುವುದು? ವಿಶ್ವಮಿತ್ರರು ನೆರವಿಗೆ ಬಂದರು. "ರಾಮ, ನಿನ್ನನ್ನು ಪೂಜಿಸಿದರೆ ಮಾತ್ರವೇ ಗೌತಮರು ಬರುವುದು. ಆ ದಿವ್ಯ ಸಮಾಗಮಕ್ಕಾಗಿ ನೀನು ಈಗ ನೆಪ. ನಿನ್ನಿಂದ ಇಂತಹುದೊಂದು ಅಭೂತ ಕಾರ್ಯವಾಗಲಿ. ತಪ್ಪು ಮಾಡುವುದು ಸಹಜ, ಎಲ್ಲರೂ ಮಾಡುತ್ತಾರೆ. ಆದರೆ ಅದನ್ನು ತಿದ್ದಿಕೊಳ್ಳುವುದರಲಿಯೇ ವ್ಯಕ್ತಿಯ ಯೋಗ್ಯತೆ ಇರುವುದು. ತಪಸ್ಸಿನ ಬೆಂಕಿಯಲ್ಲಿ ಎಂತಹ ಕೊಳೆಯೂ ತೊಳೆದು ಹೋಗುತ್ತದೆ ಎಂದು, ಅದಕ್ಕೆ ರಾಮರ ಒಪ್ಪಿತವೂ ಇದೆ ಎಂದು ಲೋಕಕ್ಕೆ ಗೊತ್ತಾಗಲಿ; ಕೂಡು. " .ಮುದುರಿ ಕುಳಿತ ರಾಮ ಪಾದಕ್ಕೆ ನೀರು ಹನಿಸುತ್ತಿದ್ದಂತೆಯೇ ಹಿಮಾಲಯದಲ್ಲಿದ್ದ ಗೌತಮರ ಕಣ್ಣು ಮುಂದೆ ಈ ಚಿತ್ರ. ಮರುಕ್ಷಣದಲ್ಲವರು ಆಶ್ರಮದಲ್ಲಿ. ಗೌತಮರನ್ನು ಕಂಡು ರಾಮ, ಲಕ್ಷ್ಮಣ, ವಿಶ್ವಮಿತ್ರರೆಲ್ಲರಿಗೂ ಸಂಭ್ರಮ. ಕಾಲಿಗೆ ಬಿದ್ದ ಅಹಲ್ಯೆಯನ್ನೆತ್ತಿ ಅಪ್ಪಿಕೊಂಡರು ಗೌತಮರು.