ದಕ್ಷ ಪ್ರಜಾಪತಿ; ಪ್ರಜೆಗಳಿಗೆ ಅಧಿಪತಿ. ಪ್ರಜೆಗಳ ಸೃಷ್ಟಿಗೆ ಆತನೇ ಕಾರಣ. ಅವನಿಗೊಬ್ಬ ಮಗಳು, ದಾಕ್ಷಾಯಣಿ. ದಾಕ್ಷಾಯಣಿ ಒಬ್ಬಳೇ ಮಗಳಲ್ಲ, ಹಲವು ಮಂದಿ. ಎಲ್ಲರಿಗೂ ಮದುವೆಯಾಗಿದೆ, ದಾಕ್ಷಾಯಣಿಯನ್ನು ಕೈಹಿಡಿದಾತ ಈಶ್ವರ. ಕೈಲಾಸದೊಡೆಯ.
ಒಮ್ಮೆ ದಕ್ಷ ಪ್ರಜಾಪತಿ ದೇವತೆಗಳ ಸಮಾರಂಭಕ್ಕೆ ಹೋದ. ಕಾರ್ಯಕರ್ತರು ಆತನನ್ನು ಮುಂದು-ಮುಂದಕ್ಕೆ ಕರೆದೊಯ್ದರು. ಎಲ್ಲರೂ ಆತ ಬರುತ್ತಿದ್ದಂತೆಯೇ ಎದ್ದು ನಿಂತರು. ಆದರೆ ಶಂಕರ ಎದ್ದು ನಿಲ್ಲಲಿಲ್ಲ. ನಿಲ್ಲ ಬೇಕಿತ್ತು; ಮಾವನನ್ನು ಮಾತನಾಡಿಸಬಹುದಿತ್ತು; ಕುಶಲೋಪರಿ ಕೇಳಬೇಕಿತ್ತು. ಇಲ್ಲ. ಕಾರಣ ಗೊತ್ತಿಲ್ಲ. ಅಂತೂ, ಅಳಿಯ-ಮಾವನ ಮಧ್ಯೆ ಮಾತಾಗಲಿಲ್ಲ. ಅಭಿಮುಖವೂ ಇಲ್ಲ; ಸುಮುಖವೂ ಆಗಲಿಲ್ಲ.
ಯಙ್ಞದಿಂದ ವಾಪಸಾದ ಮೇಲೆ ದಕ್ಷನ ತಲೆ ಕೆಟ್ಟು ಹೋಯಿತು. ಅಳಿಯ ಮಾಡಿದ ಅವಮಾನ ಸಹಿಸಲಾಗಲಿಲ್ಲ. ತನಗಿನ್ನ ಚಿಕ್ಕವ, ಅಳಿಯ, ಮಗಳ ಕೈ ಹಿಡಿದಾತ, ಮಾವನಿಗೆ ಬೆಲೆ ಕೊಡುವುದಿಲ್ಲ ಎಂದರೆ ಏನರ್ಥ? ಕೋಪದ ಕೈಗೆ ಬುದ್ದಿ ಕೊಡಬಾರದು. ಒಮ್ಮೆ ಕೋಪದಲ್ಲಿ ತೀರ್ಮಾನ ತೆಗೆದುಕೊಂಡರೆ ಆಯಿತು.
ಅನಂತ ಪರಂಪರೆಯೇ. ದಕ್ಷ ತೀರ್ಮಾನಿಸಿದ, ತಾನು ಹೇಗಾದರೂ ಈಶ್ವರನಿಗೆ ಅವಮಾನ ಮಾಡಬೇಕು!!! ಸನ್ಮಾನ ಮಾಡುವುದರಲ್ಲಾದರೂ ಒಂದು ಅರ್ಥವಿದೆ. ಆದರೆ ಅವಮಾನ? ಕೆಡುಕು ಮಾಡಬೇಕೆಂದು ಯಾರೇ ನಿರ್ಣಯಿಸಲಿ, ಅದರ ತತ್ಕ್ಷಣದ ಫಲ ಏನೇ ಆಗಿರಲಿ, ಕೊನೆಗೂ ಯಾರು ಕೆಟ್ಟದ್ದನ್ನು ಮಾಡುವರೋ, ಯಾರು ಯಾರನ್ನಾದರೂ ನೋಯಿಸುವರೋ, ಅವರಿಗೆ ಆ ಕೆಡಕು, ನೋವು ಖಂಡಿತ ವಾಪಸಾಗುತ್ತದೆ; ಬಡ್ಡಿ ಸಹಿತ. ಇದನ್ನು ಹಿರಿಯರು ಎಷ್ಟೇ ಹೇಳಿದರೂ ನಾವು ಕೇಳುವುದಿಲ್ಲ. ಕೊನೆಗೆ ಅನುಭವಿಸುತ್ತೇವೆ. ಹಿರಿಯರಿಗೇ ಹಿರಿಯರಾದ ಪ್ರಜಾಪತಿ. ಪ್ರಜೆಗಳಿಗೇ ಪತಿ. ಈತನೇ ಹೀಗೆ ಈಶ್ವರನಿಗೆ ಅವಮಾನ ಮಾಡಬೇಕು ಎಂದು ತೀರ್ಮಾನಿಸಿದರೇನು ಮಾಡೋಣ?