ಅಪ್ರಯತ್ನವಾಗಿ ಶ್ರೀರಾಮರು ಶಿವನಿಗೆ ಬಾಗಿದರು; ನಮಿಸಿದರು. " ಶ್ರೀರಾಮ, ನಿನಗಾಗಿ ಅದೆಷ್ಟೋ ಕಾಲದಿಂದ ಧನುವಿನಲ್ಲಿದ್ದೇನೆ, ಈ ಧನುವನ್ನು ರಕ್ಷಿಸುತ್ತಿದ್ದೇನೆ. ಯಾರೂ ಇದನ್ನು ಮುಟ್ಟಲೂ ಬಿಡದಂತೆ ಕಾವಲು ಕಾಯುತ್ತಿದ್ದೇನೆ. ನಿನಗೆ ಪತ್ನಿಯಾಗಬೇಕಿರುವ ಸೀತೆಯನ್ನು ಯಾರು ಯಾರೋ ಬಯಸಿ ಬಂದರು. ಈ ಜನಕ ಘೋಷ ಮಾಡಿಬಿಟ್ಟನಲ್ಲ, "ಯಾರು ಈ ಬಿಲ್ಲಿಗೆ ಹೆದೆ ಏರಿಸುವರೋ ಅವರಿಗೆ ಸೀತೆಯನ್ನು ಕೊಡುವೆನು" ಎಂದು; ಯಾರಾದರೂ ಏರಿಸಿಬಿಟ್ಟರೆ? ಏನು ಗತಿ?! ಹೀಗಾಗಿ ಯಾರಿಗೂ ಇದನ್ನು ಅಲುಗಾಡಿಸಲೂ ಆಗದಂತೆ ನಾನೇ ಹಿಡಿದುಬಿಟ್ಟಿದ್ದೆ. ಇದೀಗ ನಿಜವಾದ ಯಜಮಾನ ಬಂದಿದ್ದೀ, ಇನ್ನು ನನಗೆ ಈ ಧನುಸ್ಸನ್ನು ರಕ್ಷಿಸುವ ಅವಶ್ಯಕತೆ ಇಲ್ಲ. ನಾನು ಹೋಗಿ ಬರಲೇ? "ಮುಖದ ತುಂಬ ನಗು ತುಂಬಿ ನುಡಿದ ಶಂಕರ. ಶ್ರೀರಾಮರು ಮೃದುವಾಗಿ ಕೃತಙ್ಞತೆಯಿಂದ ನುಡಿದರು; "ಮಹೇಶ್ವರ, ನಿಮ್ಮ ಪ್ರೀತಿಗೆ ವಂದನೆ. ಅಪ್ರಾರ್ಥಿತವಾಗಿ ಧನು ರಕ್ಷಣೆಯನ್ನು ಮಾಡಿದ್ದಕ್ಕೆ ಅತ್ಯಂತ ಕೃತಙ್ಞ. ಆದಿ ದೇವರಾದ ತಾವೇ ಸೀತೆ ನನ್ನ ಪತ್ನಿಯೆಂದು ತೀರ್ಮಾನ ಮಾಡಿದ ಮೇಲೆ ಮತ್ತಾವ ಮಾತಿದೆ? ತಾವು ಹೋದ ಮೇಲೆ ಈ ಧನುಸ್ಸಿಗೆ ಹೆದೆ ಏರಿಸಲೆ?". ಪೆಟ್ಟಿಗೆಯಿಂದ ಮೇಲೇಳುತ್ತ ಶಿವ ನುಡಿದ; "ರಾಮ, ಈಗ ಅದು ಹುಲು ಧನು, ನಾನೀಗ ಅಲ್ಲಿಲ್ಲ. ಶಿವ ಶಕ್ತಿ ರಹಿತ ಬಿಲ್ಲದು. ಏನಾದರೂ ಮಾಡು! ಶುಭವಾಗಲಿ." ಶಂಕರ ಕರಗಿಹೋದ. ಕೇವಲ ಶ್ರೀರಾಮ-ವಿಶ್ವಮಿತ್ರರಿಗೆ ಮಾತ್ರ ಈ ದೃಶ್ಯ ಕಂಡಿತು. ಶ್ರೀರಾಮರು ಗುರುಗಳೆಡೆ ತಿರುಗಿ ಕೇಳಿದರು; "ಗುರುಗಳೇ? ಈ ಬಿಲ್ಲನ್ನು ಅಲ್ಲಡಿಸಲಾಗುವುದೋ, ಅಥವ ಬಗ್ಗಿಸಲಾಗುವುದೋ ಎಂದು ಪ್ರಯತ್ನಿಸಲೇ?"