ದಶರಥ ಮಹಾರಾಜನ ಒಡ್ಡೋಲಗ. ಮಂತ್ರಿಗಳು ರಾಜನ ಅನುಮತಿಯ ಮೇಲೆ ರಾಯಸದವರನ್ನು ಒಳಗೆ ಕಳಿಸಲು ಹೇಳಿದರು. ಬಂದಾತ ಬಾಗಿ ವಂದಿಸಿ, ಉಡುಗೊರೆಗಳನ್ನೊಪ್ಪಿಸಿ, ಓಲೆ ಬಿಚ್ಚಿ ಓದಲು ಅನುಮತಿ ಕೇಳಿದ. ರಾಜರ ಗೋಣು ಅಲ್ಲಾಡುತ್ತಿದ್ದಂತೆಯೇ, " ಸ್ವಸ್ತಿ ಶ್ರೀ ಕೋಸಲ ರಾಜ್ಯಾಧೀಶ, ಮಹರ್ಷಿತುಲ್ಯ, ದೇವ ಸಖ, ವಸಿಷ್ಠ ಬ್ರಹ್ಮರ್ಷಿ ಶಿಷ್ಯ.... "ಪ್ರಾರಂಭದ ಒಕ್ಕಣೆ, ಪರಾಕು, ಬಹುಪರಾಕು, ಕುಶಲೋಪರಿ, ಎಲ್ಲ ಮುಗಿದ ಮೇಲೆ ನಿಜವಾದ ವಿಷಯ ಆರಂಭವಾಯಿತು. ವಿಶ್ವಮಿತ್ರರ ಅನುಮತಿಯಂತೆ ನಮ್ಮನ್ನು ಕಳಿಸಿದ್ದಾರೆ ಮಹಾರಾಜರು; ಹಾಗೂ ಮುಂದಿನದನ್ನು ತಮ್ಮ ಮುಂದೆ ಅರುಹಲು ಆದೇಶಿಸಿದ್ದಾರೆ.