ಮಂಥರೆ ಎಗರೆಗರಿ ಬೀಳುತ್ತಿದ್ದರೂ ಕೈಕೆಗೆ ಅದರ ಬಿಸಿ ತಟ್ಟಲೇ ಇಲ್ಲ. ತಟ್ಟುವುದಕ್ಕೆ ಕಾರಣಗಳೂ ಇಲ್ಲ. ಅವಳಿಗೆ ರಾಮರ ಬಗ್ಗೆ ಅಷ್ಟು ಅಕ್ಕರೆ, ಪ್ರೀತಿ. ರಾಮ ತನ್ನನ್ನೆಷ್ಟು ಗೌರವಿಸುತ್ತಾನೆಂದು ಅವಳ ಹೃದಯಕ್ಕೆ ತಿಳಿದಿತ್ತು. ಮಂಥರೆಯ ಕಲ್ಪನಾ ಬಡಬಡಿಕೆಯನ್ನು ಖಂಡಿಸುತ್ತ ಹೇಳಿದಳು; "ಅಯ್ಯೋ ಮಂಥರೆ, ನನ್ನ ಮೇಲಿನ ಪ್ರೀತಿಯಿಂದ ನೀನು ಏನೇನೋ ಕಲ್ಪನೆ ಮಾಡಿಕೊಳ್ಳುತ್ತಿರುವೆ. ರಾಮನೆಂದರೆ ಧರ್ಮಙ್ಞ, ದೊಡ್ಡವರಿಂದ ಪಾಠ ಕಲಿತ ವಿನೀತ, ಕೃತಙ್ಞ, ಸತ್ಯವಾದಿ, ಶುದ್ಧ. ಅಲ್ಲದೇ ರಾಮನೇ ಹಿರಿಯ ಮಗನಾದ್ದರಿಂದ, ಅವನಿಗೆ ಸಹಜವಾಗಿಯೇ ರಾಜನಾಗುವ ಅರ್ಹತೆಯಿದೆ. ಕೇವಲ ಸಹೋದರರನ್ನಷ್ಟೇ ಅಲ್ಲ ತನ್ನನ್ನು ಯಾರು ಆಶ್ರಯಿಸಿದ್ದಾರೋ, ಅವರನ್ನೆಲ್ಲ ಚೆನ್ನಾಗಿ ನೋಡಿಕೊಳ್ಳುವನು. ರಾಮ ರಾಜನಾದರೆ ಭರತ ರಾಜನಾದಂತೇ!! ಅಕಸ್ಮಾತ್ ನೂರು ವರ್ಷಗಳ ನಂತರ ಭರತ ಬೇಕೆಂದರೆ, ತನ್ನ ಪಿತೃ ಪಿತಾಮಹ ಪರಂಪರೆಯ ರಾಜ್ಯವನ್ನು ಭರತನಿಗೆ ಕೊಡುವುದರಲ್ಲಿ ಯಾವ ಸಂದೇಹವೂ ಇಲ್ಲ.