ಇದೀಗ ಶ್ರೀರಾಮರಿಗೆ ಸಮಸ್ಯೆ. ಹೆದೆ ಏರಿಸಿಬಿಟ್ಟಿದ್ದಾರೆ. ಬಾಣ ಪ್ರಯೋಗ ಆಗಲೇ ಬೇಕು. ಅದು ಧನುಃ ಶಾಸ್ತ್ರ. ಪರಶುರಾಮರ ಮೇಲೆ ಬಿಡಲೆ? ಗುರು ಸಂಬಂಧಿಯ ಮೇಲೆ ಬಾಣ ಪ್ರಯೋಗವೆ? ಅದರಲ್ಲಿಯೂ ಈಗಿನ ಪರಶುರಾಮರನ್ನು ನೋಡಿದರೇ ಕರುಣೆಯುಕ್ಕುತ್ತಿದೆ. ಬಿಲ್ಲು ಕೊಟ್ಟು ಯುದ್ಧ ಮಾಡುವುದಾಗಿ ಹೇಳಿದ್ದರು. ಈಗ ನೋಡಿದರೆ ಕೈಕಟ್ಟಿ ಅಂತರ್ಮುಖಿಯಾಗಿದ್ದಾರೆ. ಏನು ಯೋಚಿಸುತ್ತಿದ್ದಾರೋ? ನಾನೀಗ ಏನು ಮಾಡಬೇಕು? "ಸ್ವಾಮಿನ್, ತಾವೇ ಹೇಳಿದಂತೆ ಈಗ ಹೆದೆ ಏರಿಸಿದ್ದೇನೆ. ಬಾಣವನ್ನು ಹೂಡಿಬಿಟ್ಟಿದ್ದೇನೆ. ಆ ಕ್ಷಣದಲ್ಲಿ, ಆ ದುರ್ಬಲ ಮುಹೂರ್ತದಲ್ಲಿ ನನಗೂ ಕ್ಷಣಕಾಲ ಕೋಪ ಬಂದುಬಿಟ್ಟಿತು. ನೀವೇ ಆಹ್ವಾನಿಸಿದಮೇಲೆ, ನಿಮ್ಮನ್ನು ಸೋಲಿಸಲೇ ಸಿದ್ಧನಾಗಿಬಿಟ್ಟೆ! ಶರಸಂಧಾನ ಮಾಡಿಯೂ ಬಿಟ್ಟೆ!! ಕೋಪವೆಂಬುದು ಬಹಳ ಕೆಟ್ಟದ್ದು. ಪ್ರಥಮ ಗುರುಗಳು ಮತ್ತೆ ಮತ್ತೆ ಹೇಳುತ್ತಿದ್ದರು. "ರಾಮ ನೀನು ಕಲಿಯಬೇಕಾದ ಮೊದಲ ಪಾಠವೆಂದರೆ ಸಿಟ್ಟನ್ನು ನಿಗ್ರಹಿಸುವುದು. ಜನಸಾಮಾನ್ಯ ಸಿಟ್ಟುಗೊಂಡರೆ ಆಗುವ ಅನಾಹುತ ಅತ್ಯಲ್ಪ! ಸೈನಿಕ ಸಿಟ್ಟಾದರೆ, ಖಂಡಿತ ಹಿಂಸೆ! ಸೇನಾ ಪ್ರಮುಖ ಕೋಪ ಮಾಡಿಕೊಂಡರೆ ಅನೇಕ ಬಲಿ. ಅದರಲ್ಲಿಯೂ ರಾಜನಾದವನು ಸಿಟ್ಟುಗೊಂಡರೆ ಮಹಾ ಹಾನಿ. ಯುದ್ಧವೂ ಆಗಿ ಸಾವಿರಾರು ಮಂದಿ ಸಾಯಬಹುದು. ಆಸ್ತಿ ಹಾನಿಯಾಗುತ್ತದೆ. ದೇಶದಲ್ಲಿ ಆತಂಕ ಮೂಡಿ ಜನರ ಶಾಂತಿ ಭಂಗವಾಗುತ್ತದೆ. ಅದು ಕಾರಣ ನಿನ್ನ ಕೋಪ ಅತ್ಯಂತ ವಿರಳವಾಗಿರಬೇಕು. ಯುದ್ಧ ಸಂದರ್ಭ ವಿನಃ, ರಾಜನೆಂಬ ಕಾರಣಕ್ಕೆ ಕೋಪಗೊಂಡು ಅನ್ಯರಿಗೆ ಧಕ್ಕೆ ಮಾಡಬೇಡ " .ವಸಿಷ್ಠರ ಮಾತನ್ನು ಇಲ್ಲಿಯವರೆಗೆ ಚಚಾತಪ್ಪದೇ ಪಾಲಿಸುತ್ತಿದ್ದೇನೆ. ವಿನಾಕಾರಣ ಮೇಲೆ ಬಿದ್ದ ತಾಟಕೆಯ ಸಂಹಾರ ಮಾಡಲೂ ನಿಧಾನಿಸಿದ್ದೆ. ಗುರುಗಳ ಬೆಂಬಲ; ಒತ್ತಾಯ ಹಾಗೂ ಅವರ ರಕ್ಷಣೆಗಾಗಿ ಸುಬಾಹುವನ್ನು ಸಾಯಿಸಬೇಕಾಯಿತು. ಅಷ್ಟೇ! "ಕೊಂಚ ಕಾಲ ತಡೆದು ಹೇಳಿದರು, "ಇದೀಗ ತಾವು ನಮಗೆಲ್ಲ ಪೂಜ್ಯರು. ತಮ್ಮ ಮೇಲೆ ಕೈ ಎತ್ತಬಾರದಿತ್ತು! ಬಿಲ್ಲು ಎತ್ತಿಯೇ ಬಿಟ್ಟೆ. ಈಗ ಅದಕ್ಕೆ ಗ್ರಾಸ ಕೊಡದೇ ಇಳಿಸುವಂತಿಲ್ಲ! ಒಂದೇ ಸಾಧ್ಯತೆ ಇದೆ. ನೀವು ಕ್ಷಮೆ ಕೇಳಿದರೆ ಮಾತ್ರ ಹಿಂತೆಗೆದುಕೊಳ್ಳಬಹುದು."