ಪರಶುರಾಮರು ಕೈ ಮುಗಿದು ಕೇಳಿದರು, "ತಂದೆ, ಇನ್ನು ಮುಂದೆ ನೀವು ಕೋಪ ಮಾಡಿಕೊಳ್ಳುವುದೇ ಇಲ್ಲವೆಂದು ವರ ಕೊಡಿ. "ಮರುಕ್ಷಣವೇ ಜಮದಗ್ನಿಗಳು ತಮ್ಮ ಮನಸ್ಸಿಗೆ ಆದೇಶ ಮಾಡಿದರು, "ಎಲೈ ಚಿತ್ತವೇ. ಇನ್ನು ಮುಂದೆ ನಿನ್ನಲ್ಲಿ ಕ್ರೋಧಕ್ಕೆ ಜಾಗವಿಲ್ಲ. ನಿನ್ನಲ್ಲಿರುವ ಕೋಪವೆಲ್ಲ ಸುಟ್ಟು ಹೋಗಲಿ!! "ನೋಡ ನೋಡುತ್ತಿದ್ದಂತೆಯೇ ಜಮದಗ್ನಿಗಳ ಮುಖ ಗೌರವರ್ಣವಾಯಿತು. ಅಲ್ಲಿದ್ದ ನಸು ಗುಲಾಬಿಯ ಬಣ್ಣ ಮಾಯವಾಯಿತು. ಮುಂದೆ ಇದರಿಂದಾಗುವ ಅನಾಹುತದ ಅರಿವಿದ್ದರೆ ಮಗ ಕೋಪ ಬಿಡೆಂದು ಹೇಳುತ್ತಿರಲಿಲ್ಲ, ಅಪ್ಪ ಶಾಂತ , ಪರಮಶಾಂತರಾಗಿ ಪರಿವರ್ತಿತರೂ ಆಗುತ್ತಿರಲಿಲ್ಲ. ಮುಖದಲ್ಲಿ ನಗು ತುಂಬಿ ಹೇಳಿದರು, "ನಿನಗೆ ಬೇಕಾದದ್ದೇನನ್ನೂ ಕೇಳಲಿಲ್ಲ , ಇನ್ನೊಂದು ವರ ಕೇಳು. "ಮಗ ಹಿಂದು-ಮುಂದು ನೋಡುತ್ತ ಕೇಳಿದ, "ನಾನೊಂದು ಕೇಳುವೆ , ನೀವು ಸಿಟ್ಟು ಮಾಡಿಕೊಳ್ಳೊಲ್ಲ ತಾನೆ? "ಜಮದಗ್ನಿಗಳೀಗ ಕೋಪವೆಂದರೇನೆಂದೇ ಕಲ್ಪಿಸಿಕೊಳ್ಳಲಾಗದಷ್ಟು ತಣ್ಣಗಾಗಿಬಿಟ್ಟಿದ್ದಾರೆ! "ಎಲ್ಲಿದೆ ನನಗೆ ಸಿಟ್ಟು? ಆಗಲೇ ಸತ್ತು ಹೋಗಿದೆ ಅದು. ಚಿಂತೆಯಿಲ್ಲ ಕೇಳು. ನಿನ್ನಮ್ಮನನ್ನು ಸಾಯಿಸಿದ್ದಕ್ಕೆ ನಾನು ಶಿಕ್ಷೆ ಮಾಡಿಕೊಳ್ಳಬೇಕೆಂದು ನೀನು ಹೇಳಿದರೆ ಅದಕ್ಕೂ ‘ಅಸ್ತು’ ಎನ್ನುವೆ. "