ಅಪ್ಪನನ್ನು ಸಾಯಿಸಿದವರನ್ನು ಸಾಯಿಸಿದ್ದಾಯಿತು. ಆದರೆ ಅಪ್ಪ ಮತ್ತೆ ಬರೊಲ್ಲವಲ್ಲ! ಪ್ರಯೋಜನವೇನು? ದುಃಖ, ಉದ್ವಿಗ್ನತೆ, ಏನೂ ಮಾಡಲಾಗದ ಹಪಹಪಿಕೆ, ಮೃತ್ಯುವಿನ ಮುಂದೆ ನಾವೆಷ್ಟು ಅಲ್ಪರೆಂಬ ಸತ್ಯದ ತೀಕ್ಷ್ಣತೆ... ಈ ಎಲ್ಲ ಮಿಶ್ರವಾಗಿ ಸುಸ್ತಾಗಿ ಕಾಲೆಳೆದುಕೊಂಡು ಆಶ್ರಮಕ್ಕೆ ವಾಪಸಾಗುತ್ತಿದ್ದಾರೆ. ತುಂಬಾ ಬಳಲಿಕೆ, ನಿಃಶಕ್ತಿ, ಸಂಕಟ... ಮರದ ಕೆಳಗೆ ಕುಳಿತುಬಿಟ್ಟರು. ಅತ್ತ ಏನಾಗಿದೆಯೋ, ಅಪ್ಪನ ಕಳೇವರ ಸುಟ್ಟು ಹೋಗಿದೆಯೇನೋ, ಅಮ್ಮನ ಶೋಕಕ್ಕೆ ಪಾರ ಉಂಟೆ? ನಮಗೆ ಮುಂದೇನು ಗತಿ?..... ಈ ಯೋಚನೆಗಳಲ್ಲಿದ್ದಾಗಲೇ ದೂರದಲ್ಲಿ ಎದ್ದ ಧೂಳು, ಕುದುರೆಗಳ ಕೆನೆತ, ಆಯುಧಗಳ ಹೊಳೆತ, ಸೈನಿಕರ ಅಸ್ಪಷ್ಟ ಮಾತುಗಳು.