"ಅಂದಿನಿಂದ ವರ್ಷ ಪರ್ಯಂತ ಪರಶುರಾಮ ಸುತ್ತಿದ. ಕಂಡ ಕಂಡ ರಾಜರನ್ನು ಕಡಿದ. ಮತ್ತೊಂದು ಬಾರಿ ಸುತ್ತು ಹಾಕಿದ. ಮೊದಲ ಸುತ್ತಿನಲ್ಲಿ ಸಿಗದವರು ಎರಡನೆಯ ಬಾರಿ ಬಂದಾಗ ಸಿಕ್ಕಿ ಹಾಕಿಕೊಂಡರು. ಪರಶುವಿಗೆ ಸಿಗದೆಯೇ ಹೋದವರು ಅಯೋಧ್ಯೆಯ ದಶರಥ, ಮಿಥಿಲೆಯ ಜನಕ, ಕಾಶಿಯ ವಿಶ್ವನಾಥ ವರ್ಮ, ಕೇಕಯ ರಾಜ, ಅಂಗದೇಶದ ರೋಮಪಾದ, ಸೌವೀರದ ಶೌರಿ, ಸೌರಾಷ್ಟ್ರದ ಮಹಾಬಲ, ಸಿಂಧು ದೇಶದ ಬೃಹದ್ಬಲ... ಇತ್ಯಾದಿ ಹದಿನೆಂಟು ಮಹಾರಾಜರು. ಕಾರಣ ಇವರೆಲ್ಲ ಸೇರಿ ಒಂದು ಯೋಜನೆ ಮಾಡಿದ್ದರು. ಪರಶುರಾಮರ ಪ್ರತಿಙ್ಞೆ , ಅದಕ್ಕಿರುವ ವಿನಾಯಿತಿಗಳನ್ನೆಲ್ಲ ಅರಿತು ಮಾಡಿಕೊಂಡ ಏರ್ಪಾಡೆಂದರೆ, ಸದಾ ಯಾಗ ವಾಟಿಕೆಯಲ್ಲಿ ಯಙ್ಞಕುಂಡ ಪ್ರಜ್ವಲಿಸುತ್ತಿರಬೇಕು! ಪರಶುರಾಮರು ಬರುವ ಸುದ್ದಿ ತಿಳಿದೊಡನೇ ಪತ್ನೀ ಸಮೇತರಾಗಿ ಯಾವುದೋ ಯಙ್ಞ ಮಾಡುವುದು. ಎಷ್ಟು ಬಾರಿ ಬಂದರೂ ದಶರಥ ಕೌಸಲ್ಯೆಯೊಡನೆ ಯಙ್ಞ ಕುಂಡದ ಮುಂದೇ ಇರುತ್ತಿದ್ದ.... ಹೀಗಾಗಿ ನಿನ್ನ ತಂದೆ ಪರಶುರಾಮರಿಗೆ ಸಿಗಲೇ ಇಲ್ಲ!! "ವಿಶ್ವಮಿತ್ರರು ಕಥೆ ಹೇಳಿ ಮುಗಿಸಿದ್ದರು.