ಪರಶುರಾಮರು ಹೇಳುತ್ತಿರುವುದನ್ನು ಶ್ರೀರಾಮರು ತದೇಕಚಿತ್ತರಾಗಿ ಆಲಿಸಿದರು. "ರಾಮ, ನೀನು ಕ್ಷತ್ರಿಯ. ಕ್ಷಾತ್ರ ಧರ್ಮಾನುಸಾರ ಯುದ್ಧಕ್ಕೆ ಕರೆದರೆ ಹಿಂದಕ್ಕೆ ಹೋಗುವಂತಿಲ್ಲ. ನನ್ನ ಸವಾಲು ಇಷ್ಟೆ. ಈ ವೈಷ್ಣವ ಧನುಸ್ಸನ್ನು ನೀನು ಧರಿಸುವುದಾದರೆ, ಎಂದರೆ ಹೆದೆ ಏರಿಸಿದೆಯಾದರೆ, ಅದು ನಿನಗೆ ಸಾಧ್ಯವಾದರೆ, ನಿಜಕ್ಕೂ ನೀನು ಈ ಬಿಲ್ಲು ಹಿಡಿದು ನಿಂತರೆ, ನಿನ್ನೊಡನೆ ದ್ವಂದ್ವ ಯುದ್ಧ ಮಾಡುವುದು ಯೋಗ್ಯವೆಂದು ನಿರ್ಧರಿಸುತ್ತೇನೆ. ನಿನ್ನೊಡನೆ ಯುದ್ಧ ಮಾಡುವೆ.