ಗುಡಿಗಳಿಗೆ ಪ್ರದಕ್ಷಿಣೆ ಮಾಡುತ್ತ, ಸುಮಂಗಲಿಯರು ಆರತಿ ಎತ್ತಲು ಬಂದಾಗ ನಿಲ್ಲುತ್ತ, ಪಟ್ಟಾಭಿಷೇಕಕ್ಕಾಗಿ ಸಿದ್ಧವಾಗಿದ್ದ ಬಿಳಿಯ ಹೋರಿ ಹಾಗೂ ಕುದುರೆಯನ್ನು ನೋಡುತ್ತ ಮುಂದುವರಿಯುತ್ತಿದ್ದಾರೆ. ಯೌವರಾಜ್ಯಾಭಿಷೇಕದ ಸ್ಥಳ. ಒಡ್ಡೋಲಗದ ಮಧ್ಯಭಾಗ. ದೇದಿಪ್ಯಮಾನವಾದ ಸಿಂಹಾಸನ. ಅದರಲ್ಲಿ ಹಾಸಿರುವ ವ್ಯಾಘ್ರಚರ್ಮ. ನೂರೆಂಟು ಮಂದಿ ಋತ್ವಿಜರು ಋಗ್ಮಂತ್ರಗಳನ್ನುಚ್ಛರಿಸುತ್ತ ಬೆಳ್ಳಿಯ ಬಿಂದಿಗೆಗಳಲ್ಲಿ ಗಂಗೆ, ಯಮುನೆ, ಗೋದಾವರಿ, ಅಘನಾಶಿನಿ, ಕಾವೇರಿ, ಸಿಂಧು, ಮಲಪ್ರಭಾ, ಘಟಪ್ರಭಾ, ಗೋದಾವರಿ, ನರ್ಮದಾ, ತಪತಿ, ಗೋಮತಿ, ರವಿ, ದಾಮೋದರ, ಮಾಹಿ, ಭಾಗೀರಥಿ, ಅಲಕನಂದಾ, ತುಂಗಭದ್ರಾ, ಪದ್ಮಾ, ಇಂದ್ರಾವತಿ, ಕಬಿನೀ, ಹೇಮವತಿ, ಕೊಯ್ನ, ಬ್ರಾಮ್ಹೀ, ಲೋಹಿತಾ, ಅರ್ಕಾವತಿ, ಶರಾವತಿ, ನೇತ್ರಾವತಿ, ವೇದವತಿ, ಪಯಸ್ವಿನಿ, ದಂಡವತಿ, ಪದ್ಮಾ, ಜಾಲಂಗಿ, ಆಜ್ಯ, ಇಚಮತಿ, ಚೂರ್ಣಿ.... ಇತ್ಯಾದಿ ಇತ್ಯಾದಿ ನದಿಗಳಿಂದ ಸಂಗ್ರಹಿಸಿರುವ ಮಂತ್ರಜಲವನ್ನು ಬೆಳ್ಳಿಯ ಬಿಂದಿಗೆಗಳಲ್ಲಿ ಧರಿಸಿದ್ದಾರೆ.