ತಾನು ಸತ್ಯದ ಪ್ರತಿರೂಪವೆಂಬಂತೆ ಕೈಕೆ ಆರಂಭಿಸಿದಳು; "ರಾಮ, ನೀನೇ ಹೇಳು, ಯಾರದು ತಪ್ಪು ಅಂತ. ಹಿಂದೆ ಶಂಬರಾಸುರನ ಜೊತೆಗೆ ಯುದ್ಧ ಮಾಡುತ್ತಾ ಇದ್ದಾಗ ನಿನ್ನ ತಂದೆಗೆ ತುಂಬಾ ಗಾಯ ಅಗಿತ್ತು. ನಿಂತುಕೊಳ್ಳಕ್ಕಾಗದೇ ರಥದಲ್ಲೇ ಕುಸಿದು ಬಿದ್ದರು. ತಕ್ಷಣಾ ನಾನು ರಥ ಓಡಿಸಿಕೊಂಡು ಸುರಕ್ಷಿತವಾದ ಸ್ಥಳಕ್ಕೆ ಕರೆದುಕೊಂಡು ಹೋದೆ. ಔಷಧಿ, ಆಹಾರ, ಸೇವೆ ಎಲ್ಲ ಮಾಡಿದೆ. ನಾಲಕ್ಕೈದು ದಿವಸಗಳಲ್ಲಿ ಗುಣ ಆಯ್ತು. ಪೂರ್ಣ ಗುಣ ಆದಮೇಲೆ ಹಿಂದಿನದೆಲ್ಲ ನೆನಪಾಗಿ ನನ್ನ ಕೈ ಹಿಡಿದುಕೊಂಡು, ನಿಮ್ಮಪ್ಪ, "ನಿನ್ನ ಕರ್ತವ್ಯಕ್ಕೆ ಮೆಚ್ಚಿದ್ದೀನಿ, ನಿನ್ನ ದಕ್ಷತೆಗೆ ಸೋತು ಹೋಗಿದೀನಿ, ಕಾಲಕ್ಕೆ ಸರಿಯಾಗಿ ನೀನು ಎಚ್ಚರ ವಹಿಸದೇ ಇದ್ದಿದ್ದರೇ, ನಾವಿಬ್ಬರೂ ಸತ್ತು ಇಷ್ಟುಹೊತ್ತಿಗೆ ನಾಲಕ್ಕು ದಿವಸಗಳಾಗ್ತಾ ಇತ್ತು. ನಿನ್ನ ಪ್ರೀತಿ, ಸೇವೆ ನನಗೆ ತುಂಬ ಮೆಚ್ಚುಗೆಯಾಗಿದೆ. ಕೇಳು, ಯಾವ ವರ ಕೇಳತೀಯೋ ಕೇಳಿಕೊ. ಒಂದಲ್ಲ, ಎರಡು ವರ ಕೇಳೂ" ಎಂದರು. ಆ ಅಸ್ತವ್ಯಸ್ತ ಸ್ಥಿತೀಲೇ, ಆ ಕ್ಷಣದಲ್ಲೇ ಯಾಕೆ ಸಾಧಾರಣವಾದ್ದು ಕೇಳಬೇಕು ಅಂತ, ನಿಧಾನವಾಗಿ ಯೋಚಿಸಿ ಒಳ್ಳೆ, ದೊಡ್ಡದೇ ಕೇಳೋಣ ಅಂತ ನಿಮ್ಮಪ್ಪನಿಗೆ ಕೇಳಿದೆ, "ಈಗ ಬೇಡಿ ಮಹಾಸ್ವಾಮಿ, ನನಗೆ ಬೇಕಾದಾಗ ಕೇಳ್ತೀನಿ, ಆವಾಗ್ ಕೊಡ್ತೀರಂತೆ" ಅದಕ್ಕೆ ಮಹಾರಾಜರು ತಮ್ಮ ಕೈಯ್ಯ ಕಂಕಣವನ್ನು ನನ್ನ ಕೈಗೆ ತೊಡಿಸುತ್ತ, "ಒಪ್ಪಿದೆ, ಯಾವಾಗಲಾದರೂ ಕೇಳು. ಏನನ್ನಾದರೂ ಕೇಳು. ಎಷ್ಟು ಬೆಲೆ ಇರೋದನ್ನಾದರೂ ಕೇಳು. ಎಷ್ಟು ಕಷ್ಟವಾದ್ದನ್ನಾದರೂ ಕೇಳು. ಮರುಮಾತಿಲ್ಲದೇ ಈಡೇರಿಸುತ್ತೀನಿ. ಇದಕ್ಕೆ ಸೂರ್ಯ ಚಂದ್ರರೇ ಸಾಕ್ಷಿ. ಅಗ್ನಿ-ವಾಯುಗಳೇ ಸಾಕ್ಷಿ. "ಅಂತ ದೊಡ್ಡದಾಗಿ ಪ್ರತಿಙ್ಞೆ ಮಾಡಿ, ಈಗ ನಾನೇನೋ ಕೇಳಿದರೆ ಹಿಂಜರೀತಾ ಇದ್ದಾರೆ, ಕೊಡೋಕೆ ಕಷ್ಟ ಅಂತ ಪೂಸಿ ಮಾಡ್ತಾ ಇದ್ದಾರೆ. ಅಳೋ ನಾಟಕ ಆಡ್ತಾ ಇದ್ದಾರೆ. ಇದು ಸರಿನಾ ರಾಮ? ನಾನು ಹೇಳಿದ್ದರಲ್ಲಿ ಒಂದು ಅಕ್ಷರ ಸುಳ್ಳಿದೆಯೋ ಕೇಳು ನಿಮ್ಮಪ್ಪನ್ನೇ."