ದಶರಥನಿಗೆ ಸಂತೋಷಾಧಿಕ್ಯ ಹಿಡಿದಿಡಲಾಗುತ್ತಿಲ್ಲ. ದುಃಖವನ್ನಾದರೂ ಮುಚ್ಚಿಡಬಹುದು; ಸುಖದ ಹಣೆಯ ಬರಹವೇ ಅದು. ಹಂಚಿಕೊಳ್ಳಲೇ ಬೇಕು. ಲಗುಬಗೆಯಿಂದ ಎದ್ದ. ರಾಣಿಗೆ ಹೇಳಬೇಕಲ್ಲ? ಹೊರಟ ರಾಣೀ ವಾಸದತ್ತ! ಮನಸ್ಸು ರಾಮ ಮಾತೆಗೆ ವಿಷಯ ಹೇಳಬೇಕೆಂದುಕೊಳ್ಳುತ್ತಿತ್ತೇನೋ ಆದರೆ ಇತ್ತೀಚಿನ ವರ್ಷಗಳಲ್ಲಿ ನಡೆದು ನಡೆದು ಅಭ್ಯಾಸ. ಕೈಕೆಯ ಗೃಹದ ಹಾದಿ ಹಿಡಿದ. (ಕ್ರಮಭಂಗ ಮಾಡಿದ್ದರ ಅಡ್ಡ ಪರಿಣಾಮ ಇದು. ಪದವಿಯೋ, ವಯಸ್ಸೋ, ಅರ್ಹತೆಯೋ... ಈ ಯಾವುದೋ ಕಾರಣಗಳಿಗೆ ಅನುಗುಣವಾಗಿ ನಾವು ಮರ್ಯಾದೆ ಮಾಡಬೇಕು. ಕೇಂದ್ರ ಮಂತ್ರಿ ಇದ್ದಾಗ, ರಾಜ್ಯದ ಮುಖ್ಯಮಂತ್ರಿಯನ್ನು ಮೊದಲು ಸ್ವಾಗತಿಸುವುದು ಸಭಾ ಮರ್ಯಾದೆಯಲ್ಲ! ಆಯಾ ಹುದ್ದೆಗನುಗುಣವಾಗಿ ಗೌರವ ಸಂದಾಯ. ಇದನ್ನರಿಯದವನೇ ದಶರಥ? ಮಹರ್ಷಿ ತುಲ್ಯನೆಂದು ಬೇರೆ ವಾಲ್ಮೀಕಿಗಳ ಪರಾಕು! ಇಲ್ಲಿಯವರೆಗೂ ಏನೇ ಇದ್ದಿರಲಿ, ಈಗ ರಾಮ ಪಟ್ಟಾಭಿಷೇಕ ಸಂದರ್ಭದಲ್ಲಿಯಾದರೂ ರಾಮ ತಾಯಿಗೆ, ಪಟ್ಟ ಮಹಿಷಿಗೆ ಪ್ರಥಮ ಪೂಜೆ ಬೇಡವೆ? ಇಲ್ಲ! ಮೋಹಿತ ರಾಜ ಬಂದೇ ಬಿಟ್ಟ ಕೈಕಾ ಸದನಕ್ಕೆ!! ಹಾಗೊಮ್ಮೆ ಕೈಕೆ ಬಳಿ ಬಾರದೇ ರಾಮಮಾತೆಗೆ, ಪಟ್ಟ ಮಹಿಷಿಗೆ, ಪ್ರಥಮ ಪತ್ನಿಗೆ ವಿಷಯ ತಿಳಿಸಲು ಬಂದಿದ್ದಿದ್ದರೆ, ಮುಂದಿನ ರಾದ್ಧಾಂತವೇ ನಡೆಯುತ್ತಿರಲಿಲ್ಲವೇನೋ!! ಪ್ರೀತಿ ಇರುವುದು ಬೇರೆ, ಅದನ್ನು ಅನುಭವಿಸುವುದೋ ಪ್ರಶಂಸಿಸುವುದೋ ಬೇರೆ; ಆದರೆ ಮೋಹಿತನಾಗುವುದೇ ಬೇರೆ! ಹೊಸ ಮನೆ ಕಟ್ಟುವುದು, ಸುಖಿಸುವುದೂ, ಯಾವುದೋ ಕಾರಣದಿಂದ ಬಾಡಿಗೆಗೆ ಕೊಡುವುದೂ ಬೇರೆ; ಆದರೆ ಬಾಡಿಗೆದಾರರು ಅವರಿಗೆ ತಕ್ಕಂತೆ ಗೋಡೆಯ ಮೇಲೆ ಮೊಳೆ ಹೊಡೆದರೆ ತನ್ನ ಎದೆಯಮೇಲೇ ಗೂಟ ನಟ್ಟಂತೆ ಒದ್ದಾಡುವುದು ಬೇರೆ. ನಾವು ಮೋಹಿತರಾದಾಗಲೇ ನಮಗೆ ದುಃಖ, ಸಂಕಟಗಳ ಸರದಿ -ಲೇಖಕರು)