ಮಲಗಿದ್ದ ರಾಮರು ಎದ್ದು ಕುಳಿತರು. ಅವರ ನೋಟ ಗಂಭೀರವಾಯಿತು. ಮಾತು ಖಚಿತವಾಯಿತು. "ಜನಕ್ಕೆ ಒಳಿತಾಗಬೇಕಿದ್ದರೆ ಮೊದಲು ಙ್ಞಾನದ ಮಟ್ಟ ಹೆಚ್ಚಬೇಕು. ಅಧ್ಯಯನದಲ್ಲಿಯೂ ಇಲ್ಲಿಯ ತನಕ ಕೇವಲ ಗುರುಪ್ರಭಾವಕ್ಕೆ ಒಳಗಾದ ಶಿಷ್ಯನ ವಿದ್ವತ್ತು ವಿಕಸಿಸುತ್ತಿದೆಯೇ ವಿನಃ ಹೆಚ್ಚು ಹೆಚ್ಚು ಚಿಂತನೆಗಳು, ಹೊಸ ಹೊಸ ಆವಿಷ್ಕಾರಗಳೂ ಆಗುತ್ತಿಲ್ಲ. ವೇದಾಧ್ಯಯನವನ್ನು ಹಲವಾರು ವರ್ಷಗಳು ನಡೆಸುತ್ತಿದ್ದಾರಾಗಲೀ, ವೇದಾಂತದ ಬಗ್ಗೆ ಕುತೂಹಲವಾಗಲೀ ಉತ್ಸಾಹವಾಗಲೀ ಇಲ್ಲ. ಎಲ್ಲಾ ಮುದುಕರಾದಮೇಲೆ, ಸಂಸಾರ ಬಿಟ್ಟಮೇಲೆ, ಸನ್ಯಾಸಿಗಳಿಗೆ ಎಂಬ ಭಾವನೆ ಬೆಳೆದುಬಿಟ್ಟಿದೆ. ನಿಜವಾದ ವಿದ್ಯೆಯೆಂದರೆ ವೇದಾಂತವೇ ಎಂಬ ಅರಿವನ್ನು ಹೆಚ್ಚಿಸಬೇಕಿದೆ. ಲೌಕಿಕ, ಸಾಮಾಜಿಕ, ವೃತ್ತಿ, ಸಂಸಾರ, ಆಸ್ತಿ, ಅಭಿವೃದ್ಧಿ.... ಎಲ್ಲ ಸರಿ, ಇವೆಲ್ಲ ಜೀವನದಲ್ಲಿನ ಕುತೂಹಲ ಘಟ್ಟಗಳೇ; ರಸಾಧ್ಯಾಯಗಳೇ ಸರಿ. ಇಲ್ಲವೆನ್ನುವುದಿಲ್ಲ. ಆದರೆ ಇವಿಷ್ಟೇ ಜೀವನ ಅಲ್ಲ. ಇದರಾಚೆಗೂ ಏನೋ ಇದೆ. ಜೀವಿಯ ಹುಟ್ಟಿನ ಹಿಂದಿನ ಹಗರಣಗಳೇನು? ಹೇಗಿದ್ದ, ಎಲ್ಲಿದ್ದ, ಏನೇನು ಮಾಡಿದ.... ಇವಾವುವೂ ನಮಗೆ ಗೊತ್ತಿಲ್ಲ. ಸತ್ತ ಮೇಲೆ ಏನು? ಅಲ್ಲಿಗೇ ಮುಕ್ತಾಯವೆ? ಮುಂದೇನಾದರೂ ಇದ್ದರೆ ಅದೇನು? ಭವಿಷ್ಯದ ಬೆಳಕೇನು? ... ಇವೂ ಗೊತ್ತಿಲ್ಲ.