ಸುಧಾಕರ್ ಗೆ ನೀತಿ ಪಾಠ, ಬಿಎಲ್ ಸಂತೋಷ್ ರಿಂದ ಮೈತ್ರಿಗೆ ಕೊನೆಯ ಆಟ, ಪ್ರಶಾಂತ್ ಕಿಶೋರ್'ರಿಂದ ಭೋಜನ ಕೂಟ (ಅಂತಃಪುರದ ಸುದ್ದಿಗಳು)

-ಸ್ವಾತಿ ಚಂದ್ರಶೇಖರ್ಅಂತೂ ಇಂತೂ ಮೈತ್ರಿ ಬಿಕ್ಕಟ್ಟನ್ನು ಬಿಡಿಸಲು ರಾಜ್ಯಕ್ಕೆ ಮತ್ತೆ ಬಿಎಲ್ ಸಂತೋಷ್ ರವರ ಆಗಮನ ಆಗಬೇಕಾಯಿತು, ಮೋದಿ ದೇವೇಗೌಡರ ನಡುವೆ ಮಾತುಕತೆ ಏನೋ ಆಯಿತು, ಆದರೆ ವಾಸ್ತವಾದಲ್ಲಿ ಸಿಕ್ಕಿದ್ದಾದರು ಏನು..?
ಮೋದಿ-ದೇವೇಗೌಡ ಭೇಟಿ, ಬಿಎಲ್ ಸಂತೋಷ್, ಪ್ರಶಾಂತ್ ಕಿಶೋರ್ (ಸಂಗ್ರಹ ಚಿತ್ರ)
ಮೋದಿ-ದೇವೇಗೌಡ ಭೇಟಿ, ಬಿಎಲ್ ಸಂತೋಷ್, ಪ್ರಶಾಂತ್ ಕಿಶೋರ್ (ಸಂಗ್ರಹ ಚಿತ್ರ)
Updated on

ಅಂತೂ ಇಂತೂ ಮೈತ್ರಿ ಬಿಕ್ಕಟ್ಟನ್ನು ಬಿಡಿಸಲು ಮತ್ತೆ ರಾಜ್ಯ ರಾಜಕಾರಣಕ್ಕೆ ಬಿ.ಎಲ್ ಸಂತೋಷ್ ರವರ ಆಗಮನ ಆಗಬೇಕಾಯಿತು, ಮೋದಿ ದೇವೇಗೌಡರ ನಡುವೆ ಮಾತುಕತೆ ಏನೋ ಆಯಿತು, ಆದರೆ ವಾಸ್ತವಾದಲ್ಲಿ ಸಿಕ್ಕಿದ್ದಾದರು ಏನು..?

ಬನ್ನಿ ಸ್ವಲ್ಪ ಗಡಿಯಾರದ ಮುಳ್ಳನ್ನು ಹಿಂದಿರುಗಿಸಿ ಹಿನ್ನಡೆಯೋಣ.

25 ಕ್ಷೇತ್ರಗಳಲ್ಲಿ ಐದರಂತೆ ಹತ್ತು ಕ್ಷೇತ್ರಗಳನ್ನ ಸಮನಾಗಿ ಹಂಚಿಕೊಂಡ ಬಿಜೆಪಿ, ಕಾಂಗ್ರೆಸ್ ಈಗ ಯೋಚಿಸುತ್ತಿರುವುದು ಹಂಚಿ ಉಳಿದ 15 ಕ್ಷೇತ್ರಗಳನ್ನ ಮಾತ್ರ. ಅದರಲ್ಲಿ 6 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿರುವ ಜೆಡಿಎಸ್ ಗೆ 3 ಕ್ಷೇತ್ರಗಳಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವ ಇರಾದೆ. 

ಇನ್ನು ಕಳೆದ ವಾರ ನವ ಜೋಡಿಗಳ ಹಾಗೆ ಮೋದಿ ದೇವೇಗೌಡರು ಸಂಸತ್ತಿನಲ್ಲಿ ಜೊತೆಯಾಗಿ ಹೆಜ್ಜೆ ಹಾಕಿದ್ದನ್ನು ನಾವೆಲ್ಲರೂ ನೋಡಿಯೇ ಇದ್ದೀವಿ. ಭೇಟಿ ವೇಳೆ, ವಿಧಾನ ಪರಿಷತ್ ಚುನಾವಣೆ ಬಗ್ಗೆ ಶುರುವಿನಲ್ಲಿ ಪ್ರಸ್ತಾಪ ಮಾಡದೆ ಹಾಸನ ಐಐಟಿ, ಕೃಷಿ ಬಿಲ್ ಬಗ್ಗೆ ಮಾತಾಡುತ್ತಾ ಮುಂದಿನ ವಿಧಾನಸಭೆ ಚುನಾವಣೆ ಬೆಗ್ಗೆ ಮಾತಾಡುತ್ತಾ ಇವತ್ತಿನ ಮೈತ್ರಿಯೇ ಅದಕ್ಕೆ ಬುನಾದಿ ಆಗಬಹುದು ಎನ್ನುವ ವಿಚಾರ ಇಟ್ಟರಂತೆ, ಇದಕ್ಕೆ ಪ್ರಧಾನಿ ಸಿಎಂ ಮನೆ ದಾರಿ ತೋರಿಸಿ  ಸುಮ್ಮನಾದರಂತೆ. 

ಆದರೆ ನಂತರದ ಬೆಳವಣಿಗೆಗಳೇ ಸ್ವಾರಸ್ಯಕರವಾದದ್ದು, ಪ್ರಧಾನಿ ನಂತರ ಅಮಿತ್ ಶಾ, ನಂತರ ನಡ್ಡಾ, ಪ್ರಹ್ಲಾದ್ ಜೋಷಿ ಎಲ್ಲರನ್ನೂ ಭೇಟಿ ಮಾಡಿ ದೇವೇಗೌಡರು ಬಂದರು. ಆದರೆ ಬೊಮ್ಮಾಯಿ ಜೊತೆ ಮಾತಾಡಿ ಜೋಶಿಯವರು ನಡೀಲಿ ಮೈತ್ರಿ ಎಂದರು, ಆದರೆ ಇಲ್ಲಿ ಕಸಿ-ವಿಸಿ ಆಗಿದ್ದು, ಮೂರು ಕ್ಷೇತ್ರಗಳಲ್ಲಿ. 

ದೇವೇಗೌಡರ ಮಾನಸ ಪುತ್ರ ಎಂದೇ ಕರೆಸಿಕೊಳ್ಳುವ ರಮೇಶ ಗೌಡರ ಬೆಂಗಳೂರು ಗ್ರಾಮಾಂತರ ಕ್ಷೇತ್ರ, ಕೋಲಾರ, ತುಮಕೂರು. ಈ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಮತಗಳನ್ನು ಜೆಡಿಎಸ್ ಗೆ ಹಾಕಿಸಿ, ಮಿಕ್ಕ ಕ್ಷೇತ್ರಗಲ್ಲಿ ನಾವು ನಿಮಗೆ ಮತ ಹಾಕಿಸುತ್ತೇವೆ ಎನ್ನುವ ದೇವೇಗೌಡರ ಪ್ರಸ್ತಾಪ ದೆಹಲಿಯಲ್ಲಿ ಸರಿ ಕಂಡರೂ, ಸ್ಥಳೀಯ ಅಭ್ಯರ್ಥಿಗಳಿಗೆ ನಿದ್ದೆ ಕೆಡಿಸಿತು. 

ದೆಹಲಿಯಿಂದ ಜೋಶಿ ಮತ್ತು ಕಟೀಲ್ ಈ ಮೂರು ಕ್ಷೇತ್ರಗಳನ್ನ ಬಿಟ್ಟು ಕೊಡುವುದೋ ಬೇಡವೋ ಎಂದು ಬೊಮ್ಮಾಯಿ ಅವರ ಜೊತೆ ಚರ್ಚಿಸಿ, ಕೊನೆಗೂ ಎರಡು ಕ್ಷೇತ್ರಗಳು, ಅಂದರೆ ಬೆಂಗಳೂರು ಗ್ರಾಮಾಂತರ ಮತ್ತು ತುಮಕೂರನ್ನು ಜೆಡಿಎಸ್ ಗೆ ಕೊಡೋಣ, ಅಲ್ಲಿ ಮೈತ್ರಿ ಆದರೆ ಕುಮಾರಸ್ವಾಮಿ ಜೊತೆ ಮಾತಾಡಿ ಕೋಲಾರ ಚಿಕ್ಕಬಳ್ಳಾಪುರ ಬಿಟ್ಟು ಕೊಡೋಣ ಎಂದು ಸುಧಾಕರ್ ಮೈತ್ರಿ ಮಾಡಿಕೊಂಡರಂತೆ.

ವಿಷಕಾರುವವರ ಮುಂದೆ ವಿಷ ಕುಡಿಯುತ್ತೇವೇ ಎಂದ ಅಭ್ಯರ್ಥಿಗಳು

ಒಂದು ವೇಳೆ ಮೈತ್ರಿ ಆದರೆ ವಿಷ ಸೇವಿಸಿ ಬಿಜೆಪಿ ನಾಯಕರ ಮನೆ ಮುಂದೆ ಪ್ರಾಣ ಬಿಡುತ್ತೇವೆ ಎಂದು ಪಣ ತೊಟ್ಟ ಅಭ್ಯರ್ಥಿಗಳ ವರ್ತನೆ ನೋಡಿ ಮನಸ್ಸು ಬದಲಾಯಿಸಿದ ಸಿಎಂ, ಮೈತ್ರಿ ವಿಚಾರವನ್ನ ಮತ್ತೆ ದೆಹಲಿ ಅಂಗಳಕ್ಕೆ ಕಳುಹಿಸಿದರು. ಹೀಗೆ ಮ್ಯೂಸಿಕಲ್ ಚೇರ್ ಆಟವನ್ನ ಅಂತ್ಯ ಗೊಳಿಸಲು ಬಿ ಎಲ್ ಸಂತೋಷರೇ ಬರಬೇಕಾಯಿತು. 

ಸುಧಾಕರ್ ಗೆ ಕ್ಲಾಸು, ಮುನಿರತ್ನಂ ಗೆ ಫೀಸು

ಕೋಲಾರ, ಚಿಕ್ಕಬಳ್ಳಾಪುರ ಸ್ಥಳೀಯ ಚುನಾವಣೆಗಳಲ್ಲಿ ಜೆಡಿಎಸ್ ಜೊತೆ ಹೋಗುತ್ತೇವೆ ಎಂದು ನಿಂತ ಸಚಿವರಿಗೆ ಖುದ್ದು ಬಿಎಲ್ ಸಂತೋಷ್ ಕರೆ ಮಾಡಿ ನೀತಿ ಪಾಠ ಮಾಡಿದರಂತೆ. ಪಕ್ಷ ಸಂಘಟನೆ ಬಿಜೆಪಿಯ ಮೊದಲ ಆಧ್ಯತೆ, ಗೆಲ್ಲುವ ಮುಂಚೆಯೇ ಸೋಲು ಉಪ್ಪಿಕೊಳ್ಳುವ ಪ್ರಮೇಯ ಇನ್ನು ಬಂದಿಲ್ಲ ರಣಭೂಮಿಯಲ್ಲಿ ನುಗ್ಗಿ ಸೋಲೊಣ, ಆದರೆ ಒಪ್ಪಂದದಲ್ಲಿ ಬಿದ್ದು ಗೆಲ್ಲೋದು ಬೇಡ ಎಂದು ಬುದ್ಧಿವಾದ ಹೇಳಿದರಂತೆ. 

ಇನ್ನು ಇಷ್ಟು ದಿನ ಮೈತ್ರಿ ಆಗುತ್ತೆ ಎಂದು ಕೆಲಸ ಮಾಡದೆ ಇದ್ದಿದ್ದಕ್ಕೆ ಇಂತಿಷ್ಟು ಚುನಾವಣೆ ಖರ್ಚು ವಹಿಸಿಕೊಳ್ಳಬೇಕು ಎಂದು ಪೆನಾಲ್ಟಿ ಕೂಡ ಹಾಕಿದರಂತೆ! 

ಒಟ್ಟಿನಲ್ಲಿ ಈ ಚುನಾವಣೆಯಿಂದ ಎರಡು ವರ್ಷದ ಸಚಿವರ ಅಟ್ಟಹಾಸಕ್ಕೆ ಕೊಂಚ ಮುಕ್ತಿ ದೊರಕಿತು ಎಂದು ಚಿಕ್ಕಬಳ್ಳಾಪುರದಲ್ಲಿ ಕಾರ್ಯಕರ್ತರ ಹರ್ಷದ ಮಾತು ಕಿವಿಗೆ ಬೀಳುತ್ತಿದೆ. ಕಾಂಗ್ರೆಸ್ ಮುಕ್ತ ಭಾರತ ಶೀರ್ಷಿಕೆ ಬಿಟ್ಟು, ಟಿಎಂಸಿ ಮುಕ್ತ ಭಾರತ ಎಂದು ಶುರು ಮಾಡಬೇಕಿದೆ.

2013 ರಿಂದ ಕಾಂಗ್ರೆಸ್ ಮುಕ್ತ ಭಾರತ ನಿರ್ಮಿಸೋಣ ಎನ್ನುತ್ತಾ ಕಾಂಗ್ರೆಸ್ ಯುಕ್ತ ಬಿಜೆಪಿಯನ್ನ ನಿರ್ಮಿಸುತ್ತ ಬಂದಿರುವ ಬಿಜೆಪಿಗೆ ಈಗ ಕಾಂಗ್ರೆಸ್ ಯುಕ್ತ ಟಿಎಂಸಿಯನ್ನ ಎದುರಿಸುವ ಸ್ಥಿತಿ ಇದೆ. 

ಸದ್ಯ ಕಾಂಗ್ರೆಸ್ ತನ್ನ ಬೇರನ್ನು ಎಷ್ಟೋ ಸ್ಥಳೀಯ ಪಕ್ಷಗಳಿಗೆ ನೀಡುತ್ತಾ ಬಂದಿದ್ದು ಅದೆಲ್ಲವೂ ಈಗ ಮರವಾಗಿ ಗಟ್ಟಿಯಾಗಿ ನಿಂತಿದೆ. ಅಂತಹ ಮರಗಳನ್ನು ಒಗ್ಗೂಡಿಸುವ ಕೆಲಸಕ್ಕೆ ಟಿಎಂಸಿ ಇಳಿದಿದೆ.

ದಕ್ಷಿಣ ರಾಜ್ಯದ ಬಿಜೆಪಿಯೇತರ ಮುಖ್ಯಮಂತ್ರಿಗಳ ಜೊತೆ ಪ್ರಶಾಂತ್ ಕಿಶೋರ್ ಔತಣ ಕೂಟ 

ಬಿಜೆಪಿ ವಿರುದ್ಧ ಅಭೂತಪೂರ್ವ ಗೆಲುವು ಸಾಧಿಸುವಲ್ಲಿ ಯಶಸ್ವಿಯಾದ ಮಮತ ಮತ್ತು ಆಕೆಯ ಹಿಂದೆ ನಿಂತ ಪ್ರಶಾಂತ್ ಕಿಶೋರ್ ಈಗ ದಕ್ಷಿಣಕ್ಕೆ ಮುಖ ಮಾಡಿದ್ದಾರೆ. ಎಲ್ಲಾ ಸ್ಥಳೀಯ ಪಕ್ಷಗಳನ್ನು ಒಗ್ಗೂಡಿಸಿ ಮಮತಾ ಗೆ ಬೆಂಬಲ ಸೂಚಿಸುವಂತೆ ಕೋರುತ್ತಿದ್ದಾರೆ. ಮಮತಾರನ್ನು ಪ್ರಧಾನಿ ಮಾಡಿಯೇ ತೀರುತ್ತೇನೆ ಎಂದು ವಚನ ನೀಡಿರುವ ಪ್ರಶಾಂತ್ ಕರ್ನಾಟಕವನ್ನು ಬಿಟ್ಟಿಲ್ಲ. 

ಕರ್ನಾಟಕದ ಕಾಂಗ್ರೆಸ್ ಅಸಮಾಧಾನಿತರ ಜೊತೆ ಪ್ರಶಾಂತ್ ಚರ್ಚೆ

ಕಾಂಗ್ರೆಸ್ ಪಕ್ಷದ ನಿಷ್ಠಾವಂತರೂ, ಟಿಕೆಟ್ ತಪ್ಪಿದವರು, ಮೂಲೆಗೆ ಸರಿದವರನ್ನು ಹೆಕ್ಕಿ ತೆಗೆದು ಈಗ ಟಿಎಂಸಿಗೆ ಕೆರೆಸಿಕೊಳ್ಳುತ್ತಿರುವ ಪ್ರಶಾಂತ್ ಕಿಶೋರ್, ಮುಂಬರುವ ಸ್ಥಳೀಯ ಚುನಾವಣೆಯಿಂದ ಸಂಸತ್ ಚುನಾವಣೆವರೆಗೂ ನಕ್ಷೆ ಬರೆದಂತಿದೆ. ಕಾಂಗ್ರೆಸ್ ನಾಯಕರನ್ನು ದೇಶದಾದ್ಯಂತ ತನ್ನತ್ತ ಸೆಳೆಯುತ್ತಿರುವ ಟಿಎಂಸಿ, ಕಾಂಗ್ರೆಸ್ ನ್ನು ಒಪ್ಪದ ಬಿಜೆಪಿಯನ್ನು ಅಪ್ಪದ ನಾಯಕರ ಪಕ್ಷಗಳಿಗೆ ಒಂದು ವೇದಿಕೆಯಾಗಿ ನಿಲ್ಲಲ್ಲು ಯತ್ನಿಸುತ್ತಿದೆ.

ಸ್ವಾತಿ ಚಂದ್ರಶೇಖರ್

swathichandrashekar92@gmail.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com