social_icon

ಜಾಂಡಿಸ್ ಅಥವಾ ಕಾಮಾಲೆ ರೋಗ (ಕುಶಲವೇ ಕ್ಷೇಮವೇ)

ಜಾಂಡಿಸ್ ಮೂಲತ: ಯಕೃತ್ತಿಗೆ ಅಂದರೆ ಲಿವರ್ ಗೆ ನೇರವಾಗಿ ಸಂಬಂಧಿಸಿದ ಕಾಯಿಲೆಯಾಗಿದೆ. ಅಷ್ಟೊಂದು ಅಪಾಯಕಾರಿ ಕಾಯಿಲೆ ಅಲ್ಲದೇ ಇದ್ದರೂ ಸರಿಯಾಗಿ ಚಿಕಿತ್ಸೆ ಮಾಡಿಸಿಕೊಳ್ಳದಿದ್ದರೆ ಅರೋಗ್ಯದ ಮೇಲೆ ಗಂಭೀರ ಪರಿಣಾಮಗಳನ್ನು ಉಂಟಾಗಬಹುದು.

Published: 11th November 2023 08:52 AM  |   Last Updated: 11th November 2023 01:45 PM   |  A+A-


File photo

ಸಂಗ್ರಹ ಚಿತ್ರ

Posted By : Manjula VN
Source :

ಜಾಂಡಿಸ್ ಅಥವಾ ಕಾಮಾಲೆ ಹಸುಗೂಸುಗಳು, ಮಕ್ಕಳನ್ನು ಮತ್ತು ವಯಸ್ಕರನ್ನು ಕಾಡುವ ಸಾಮಾನ್ಯ ಕಾಯಿಲೆಗಳಲ್ಲಿ ಒಂದು. ಹದಿಹರೆಯದವರು ಮತ್ತು ವಯಸ್ಕರಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇದ್ದರೆ ಜಾಂಡಿಸ್ ಹೆಚ್ಚಾಗಿ ಕಂಡುಬರುತ್ತದೆ. ಜಾಂಡಿಸ್ ಬಂದಾಗ ಕಣ್ಣಿನ ಒಳಭಾಗ ಮತ್ತು ಚರ್ಮದಲ್ಲಿ ಹಳದಿ ಬಣ್ಣಕ್ಕೆ ತಿರುಗುತ್ತದೆ. ಜೊತೆಗೆ ಮೂತ್ರ ಕೂಡ ಅರಿಷಿಣ ಬಣ್ಣದಲ್ಲಿ ಹೋಗುತ್ತದೆ. ಕ್ರಮೇಣ ದೇಹದ ಒಳಭಾಗದ ಅಂಗಗಳು ಕೂಡ ತೆಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ಆದ್ದರಿಂದಲೇ ಕಾಮಾಲೆ ಕಣ್ಣಿಗೆ ಕಾಣುವುದೆಲ್ಲಾ ಹಳದಿ ಎಂಬ ಜನಜನಿತ ಗಾದೆ ಹುಟ್ಟಿದೆ.

ಜಾಂಡಿಸ್ ಎಂದರೇನು?
ಜಾಂಡಿಸ್ ಮೂಲತ: ಯಕೃತ್ತಿಗೆ ಅಂದರೆ ಲಿವರ್ ಗೆ ನೇರವಾಗಿ ಸಂಬಂಧಿಸಿದ ಕಾಯಿಲೆಯಾಗಿದೆ. ಅಷ್ಟೊಂದು ಅಪಾಯಕಾರಿ ಕಾಯಿಲೆ ಅಲ್ಲದೇ ಇದ್ದರೂ ಸರಿಯಾಗಿ ಚಿಕಿತ್ಸೆ ಮಾಡಿಸಿಕೊಳ್ಳದಿದ್ದರೆ ಅರೋಗ್ಯದ ಮೇಲೆ ಗಂಭೀರ ಪರಿಣಾಮಗಳನ್ನು ಉಂಟಾಗಬಹುದು. ಹೀಗಾಗಿಯೇ ಜಾಂಡಿಸ್ ಆದಾಗ ಆಹಾರದ ಕಡೆ ವಿಶೇಷವಾಗಿ ಗಮನಕೊಡುವಂತೆ ವೈದ್ಯರು ಸಲಹೆ ಮಾಡುತ್ತಾರೆ. ವೈಜ್ಞಾನಿಕವಾಗಿ ಹೇಳುವುದಾದರೆ ಲಿವರ್‌ನಲ್ಲಿ ಉತ್ಪತ್ತಿಯಾಗುವ ಬಿಲುರುಬಿನ್ ಅಥವಾ ಪಿತ್ತದ ಪ್ರಮಾಣವು ರಕ್ತದಲ್ಲಿ ಹೆಚ್ಚಾದರೆ ಆ ಪರಿಸ್ಥಿತಿಯನ್ನು ಜಾಂಡೀಸ್ ಎಂದು ಕರೆಯುತ್ತಾರೆ. ಆರೋಗ್ಯವಂತ ಜನರಲ್ಲಿ ಬಿಲುರುಬಿನ್ 100 ಮಿಲಿ ಲೀಟರ್ ರಕ್ತದಲ್ಲಿ 0.2 ಮಿಲಿಗ್ರಾಂ ನಿಂದ 0.8 ಮಿಲಿಗ್ರಾಂನವರೆಗೆ ಇರುತ್ತದೆ. ಇದರ ಮಟ್ಟ 2 ಮಿಲಿಗ್ರಾಂಗಿಂತ ಜಾಸ್ತಿಯಾದಲ್ಲಿ ಮೂತ್ರ, ಕಣ್ಣು, ಚರ್ಮ, ಉಗುರು ಮುಂತಾದವುಗಳು ಹಳದಿ ಬಣ್ಣವನ್ನು ತಳೆದು ಜಾಂಡಿಸ್ ಕಾಣಿಸಿಕೊಳ್ಳುತ್ತದೆ.

ಜಾಂಡಿಸ್ ಕಾಯಿಲಯ ಲಕ್ಷಣಗಳೇನು?
ಬಿಲುರುಬಿನ್ ಆಹಾರದ ಜೀರ್ಣಕ್ರಿಯೆಗೆ ಬಹಳ ಅವಶ್ಯಕ. ಈ ಅಂಶವು ಲಿವರ್‌ನ ಸೋಂಕು ಅಥವಾ ಇತರೆ ಕಾರಣಗಳಿಂದಾಗಿ ಕರುಳಿಗೆ ಸೇರದೆ ರಕ್ತದಲ್ಲೇ ಉಳಿಯುತ್ತದೆ. ಇದರಿಂದ ಜೀರ್ಣಶಕ್ತಿ ತುಂಬಾ ಕಡಿಮೆಯಾಗಿ ದೇಹದ ಬಲ ಕುಂದುತ್ತದೆ. ಸುಲಭವಾಗಿ ಜೀರ್ಣವಾಗದ ಆಹಾರವನ್ನು ಸೇವಿಸಿದಾಗ ಅಜೀರ್ಣವಾಗಿ ಹೊಟ್ಟೆನೋವು ಬಂದು ಸಾಕಷ್ಟು ತೊಂದರೆಯಾಗುತ್ತದೆ. ಜೊತೆಗೆ ವಾಂತಿ, ವಿಪರೀತ ಜ್ವರ, ಸುಸ್ತು ಮತ್ತು ನಿಶ್ಯಕ್ತಿ ಕಾಣಿಸಿಕೊಳ್ಳುತ್ತದೆ. ನಾಲಿಗೆ ಬಣ್ಣ ಕೂಡ ಹಳದಿಯಾಗುತ್ತದೆ. ಹಸಿವೆಯಾಗದೇ ಇರುವುದು ಜಾಂಡಿಸ್ ರೋಗದ ಒಂದು ಲಕ್ಷಣವಾಗಿದೆ.

ಇದನ್ನೂ ಓದಿ: ಹೆಪಟೈಟಿಸ್ ಬಿ ಎಂಬ ಸಾಂಕ್ರಾಮಿಕ ರೋಗ (ಕುಶಲವೇ ಕ್ಷೇಮವೇ)

ಈ ರೋಗದ ಪತ್ತೆಗೆ ಮೂತ್ರದ ಪರೀಕ್ಷೆ ಮಾಡಿ ಮೂತ್ರದಲ್ಲಿನ ಬಿಲುರುಬಿನ್ ಪ್ರಮಾಣವನ್ನು ಕಂಡುಹಿಡಿಯುತ್ತಾರೆ. ಸಂಪೂರ್ಣ ರಕ್ತ ಪರೀಕ್ಷೆ ಕೂಡ ಮಾಡುತ್ತಾರೆ. ಹೆಚ್ಚಿನ ಪರೀಕ್ಷೆ ಅಗತ್ಯವಿದ್ದಲ್ಲಿ ಹೊಟ್ಟೆಯ ಭಾಗದ ಅಲ್ಟ್ರಾ ಸೌಂಡ್, ಸಿಟಿ ಸ್ಕ್ಯಾನ್ ಮತ್ತು ಲಿವರ್ ಬಯಾಪ್ಸಿ ಕೂಡಾ ಮಾಡಲಾಗುತ್ತದೆ.

ಜಾಂಡಿಸ್ ರೋಗಿಗೆ ಪಥ್ಯದ ಆಹಾರ ಏಕೆ ಮುಖ್ಯ?
ಜಾಂಡಿಸ್ ಬಂದಾಗ ಲಿವರಿನ ಮೇಲೆ ಗಂಭೀರ ಪರಿಣಾಮ ಉಂಟಾಗುವುದರಿಂದ ಆಹಾರವನ್ನು ಜೀರ್ಣಶಕ್ತಿ ಕಡಿಮೆಯಾಗುತ್ತದೆ. ಆದ್ದರಿಂದ ಇಂತಹ ಪರಿಸ್ಥಿತಿಯಲ್ಲಿ ತಕ್ಷಣ ಲಘು ಆಹಾರಗಳ ಸೇವನೆಯನ್ನು ಮಾಡಬೇಕು. ಕೊಬ್ಬುರಹಿತ ಕಡಿಮೆ ಖಾರವುಳ್ಳ ಮತ್ತು ಸುಲಭಜೀರ್ಣ ಆಹಾರದ ಸೇವನೆ ಅತ್ಯಗತ್ಯ. ನೀರು, ಎಳನೀರು, ಹಣ್ಣಿನ ರಸ ಮತ್ತು ಗ್ಲುಕೋಸ್ ಸೇವನೆ ಮಾಡುವುದು ಮುಖ್ಯ. ಜೀರ್ಣಕ್ರಿಯೆಯು ಇದರಿಂದ ಕ್ರಮೇಣ ಸುಧಾರಿಸುತ್ತದೆ.

ನೀರು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಅಲ್ಲದೇ ದೇಹದಿಂದ ತ್ಯಾಜ್ಯ ಪದಾರ್ಥ/ವಿಷವನ್ನು ಹೊರಹಾಕುವ ಮೂಲಕ ಯಕೃತ್ತಿನ ಕೆಲಸವನ್ನು ಸುಲಭಗೊಳಿಸುತ್ತದೆ. ಶೀಘ್ರವಾಗಿ ಚೇತರಿಸಿಕೊಳ್ಳಲು ಜಾಂಡಿಸ್ ರೋಗಿಗಳು ಪ್ರತಿದಿನ ಕನಿಷ್ಠ 2 ಲೀಟರ್ ನೀರನ್ನು ಕುಡಿಯಬೇಕು. ಕ್ರಮೇಣ ಕಬ್ಬಿನ ಹಾಲು, ತೆಳು ಮಜ್ಜಿಗೆ ಹಾಗೆಯೇ ಕೆಲವು ದಿನಗಳ ನಂತರ ಅಕ್ಕಿ ಅಥವಾ ರಾಗಿ ಗಂಜಿ ಮಾಡಿ ಸೇವನೆ ಮಾಡುವುದು ಒಳ್ಳೆಯದು. ಒಂದು ಲೋಟ ಮಜ್ಜಿಗೆಗೆ ಸ್ವಲ್ಪ ಉಪ್ಪು, ಕಾಳುಮೆಣಸಿನ ಪುಡಿ ಮತ್ತು ಜೀರಿಗೆಯನ್ನು ಬೆರೆಸಿ ಊಟವಾದ ನಂತರ ಸೇವಿಸುವ ಮೂಲಕ ಕಾಮಾಲೆ ರೋಗ ಶೀಘ್ರವೇ ಗುಣವಾಗುತ್ತದೆ. ತಾಜಾ ತರಕಾರಿಗಳನ್ನು ಮೃದುವಾಗಿ ಬೇಯಿಸಿ ಅನ್ನದ ಜೊತೆಗೆ ಸೇವಿಸಬೇಕು. ಮೂಲಂಗಿಯನ್ನು ಬೇಯಿಸಿ ಅದರ ರಸ ಮತ್ತು ಸೊಪ್ಪನ್ನು ಬಳಸುವುದು ಉತ್ತಮ. ತರಕಾರಿಗಳ ಮೃದುವಾಗಿ ಹಿಸುಕಿ ಸೂಪನ್ನು ತಯಾರಿಸಿ ಸೇವಿಸಿದರೂ ಲಿವರಿನ ಕಾರ್ಯಕ್ಷಮತೆ ನಿಧಾನವಾಗಿ ಸುಧಾರಿಸುತ್ತದೆ. ಟೊಮ್ಯಾಟೋ, ಬೆಳ್ಳುಳ್ಳಿ ಮತ್ತು ನೆಲ್ಲಿಕಾಯಿಗಳ ಸೇವನೆ ಹಿತಕಾರಿ. ಅಂತೆಯೇ ಲಿವರಿನ ಆರೋಗ್ಯ ಸರಿಪಡಿಸಿಕೊಳ್ಳಲು ಪ್ರತಿ ದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನಾಲ್ಕು ಚಮಚ ನೆಲನೆಲ್ಲಿ ಸೊಪ್ಪಿನ ರಸ ಮತ್ತು ಭೃಂಗರಾಜ/ದರುಗದ ಸೊಪ್ಪಿನ ರಸ ಬೆರೆಸಿ ಸೇವಿಸಬೇಕು.

ಇದನ್ನೂ ಓದಿ: ಚಳಿಗಾಲದಲ್ಲಿ ನವಜಾತ ಶಿಶುಗಳ ಆರೈಕೆ ಹೇಗೆ? ಅಮ್ಮಂದಿರಿಗೆ ಇಲ್ಲಿದೆ ಉಪಯುಕ್ತ ಟಿಪ್ಸ್!

ಈ ರೋಗದಿಂದ ಬೇಗನೆ ಚೇತರಿಸಿಕೊಳ್ಳಲು ಜೀರಿಗೆ ನೀರು ಮತ್ತು ಬಾರ್ಲಿ ಗಂಜಿಯ ನೀರು ಕುಡಿಯಬೇಕು. ದೇಹದಲ್ಲಿ ನೀರಿನ ಅಂಶ ಸಾಕಷ್ಟು ಉಳಿಯಲು ನಿಂಬೆಹಣ್ಣು ಮತ್ತು ಮೂಸಂಬಿ ರಸವನ್ನು ಸೇವಿಸಬೇಕು. ನಿಧಾನವಾಗಿ ಪೊಂಗಲ್, ಕಿಚಡಿ, ಅನ್ನದೊಂದಿಗೆ ಹೆಸರುಬೇಳೆ ಕಟ್ಟು, ಹುರುಳಿ ಕಟ್ಟು, ಬೇಯಿಸಿದ ಸೋರೆಕಾಯಿ, ಪಡುವಲ ಕಾಯಿ, ಸೌತೆಕಾಯಿ ಸೇವಿಸಬೇಕು. ಅಲ್ಲದೆ ಕೆಂಪು ಅಕ್ಕಿ, ಗೋಧಿ, ಹೆಸರುಕಾಳು, ಕಬ್ಬಿನಹಾಲು, ಮತ್ತು ದ್ರಾಕ್ಷಿರಸದ ಸೇವನೆ ಉತ್ತಮ ಪಥ್ಯ. ಅತಿಯಾದ ಖಾರ, ಕರಿದ ಪದಾರ್ಥ, ಮಸಾಲೆ ಪದಾರ್ಥ, ಮಾಂಸಾಹಾರ, ಉದ್ದಿನಪದಾರ್ಥ, ಜಂಕ್‌ಫುಡ್, ಮದ್ಯಪಾನ, ಧೂಮಪಾನ, ಮೊಸರು, ಚಹಾ, ಕಾಫಿಯ ಮತ್ತು ಸಾಸಿವೆ ಎಣ್ಣೆಯ ಸೇವನೆ ನಿಲ್ಲಿಸಬೇಕು. ಮಾನಸಿಕ ಒತ್ತಡದಿಂದ ದೂರವಿರಬೇಕು. ಅನವಶ್ಯಕವಾಗಿ ವ್ಯಾಯಾಮಗಳನ್ನು ಮಾಡಬಾರದು ಮತ್ತು ಬಿಸಿಲಿನಲ್ಲಿ ಓಡಾಡುವುದನ್ನು ನಿಲ್ಲಿಸಬೇಕು.


Dr Vasundhara Bhupathi

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com


Stay up to date on all the latest ಅಂಕಣಗಳು news
Poll
N R narayana Murty

ಯಾವುದನ್ನೂ ಫ್ರೀಯಾಗಿ ಕೊಡಬಾರದು ಎಂದು ಎನ್ ಆರ್ ನಾರಾಯಣ ಮೂರ್ತಿ ಹೇಳಿದ್ದಾರೆ.


Result
ಸರಿ
ತಪ್ಪು

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp