ನವದೆಹಲಿ: ಮುಖ್ಯ ಕೋಚ್ ಹುದ್ದೆಯಿಂದ ವಂಚಿತವಾಗಿರುವ ಟೀಂ ಇಂಡಿಯಾ ಮಾಜಿ ನಿರ್ದೇಶಕ ರವಿ ಶಾಸ್ತ್ರಿ ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ವಿರುದ್ಧ ಹರಿಹಾಯ್ದಿದ್ದಾರೆ.
ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹುದ್ದೆಯ ಪ್ರಮುಖ ಆಕಾಂಕ್ಷಿಯಾಗಿದ್ದ ಮಾಜಿ ಆಟಗಾರ ರವಿಶಾಸ್ತ್ರಿ ಅವರು ಬಿಸಿಸಿಐ ಸಲಹಾ ಸಮಿತಿಯ ಸೌರವ್ ಗಂಗೂಲಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ನಾನು ಸಲಹಾ ಸಮಿತಿಯ ಮುಂದೆ ಸಂದರ್ಶನಕ್ಕೆ ಹಾಜರಾದಾಗ ಸೌರವ್ ಗಂಗೂಲಿ ಅವರು ಅಲ್ಲಿರಲಿಲ್ಲ. ಸಮಿತಿಯ ಇನ್ನುಳಿದ ಸದಸ್ಯರಾದ ವಿ.ವಿ. ಎಸ್. ಲಕ್ಷ್ಮಣ್, ಸಚಿನ್ ತೆಂಡೂಲ್ಕರ್ ಮತ್ತು ಸಂಯೋಜಕ ಸಂಜಯ್ ಜಗದಾಳೆ ಮಾತ್ರ ಹಾಜರಿದ್ದರು. ಸೌರವ್ ನನ್ನ ಬಗ್ಗೆ ಅಗೌರವ ತೋರಿಸಿದ್ದಾರೆ. ನನಗೆ ಇದರಿಂದ ಬೇಸರವಾಗಿದೆ ಎಂದು ರವಿಶಾಸ್ತ್ರಿ ಹೇಳಿದ್ದಾರೆ.
ನನಗೆ ಸೌರವ್ ಬಗ್ಗೆ ವೈಯಕ್ತಿಕವಾಗಿ ಯಾವುದೆ ಭಿನ್ನಾಭಿಪ್ರಾಯ ಇಲ್ಲ. ಅದರೆ ಸಂದರ್ಶನ ನೀಡುವ ಅಭ್ಯರ್ಥಿಯ ಬಗ್ಗೆ ಅವರಿಗೆ ಗೌರವ ಇಲ್ಲದಿರುವುದು ಬೇಸರದ ಸಂಗತಿ. ಇದರಿಂದ ಅವರು ತಮ್ಮ ಕರ್ತವ್ಯಕ್ಕೂ ಅಗೌರವ ತೋರಿದ್ದಾರೆ ಎಂದು ಹೇಳಿದ್ದಾರೆ. ಮುಂದಿನ ಬಾರಿ ಇಂತಹ ಮಹತ್ವದ ಹುದ್ದೆಗಳಿಗೆ ಸಂದರ್ಶನ ಪ್ರಕ್ರಿಯೆ ನಡೆಸುವಾಗ ಹಾಜರಾಗಿರಿ ಎಂದು ಅವರು ಗಂಗೂಲಿಗೆ ಸಲಹೆ ನೀಡಿದ್ದಾರೆ.
ಕೋಚ್ ಹುದ್ದೆಗೆ ಆಯ್ಕೆಯಾದ ಅನಿಲ್ ಕುಂಬ್ಳೆ ಅವರಿಗೆ ಶುಭ ಕೋರಿದ ಅವರು, ಹದಿನೆಂಟು ತಿಂಗಳುಗಳ ಕಾಲ ಭಾರತ ತಂಡದ ನಿರ್ದೇಶಕನಾಗಿ ಕಾರ್ಯನಿರ್ವಹಿಸಿದ್ದೆ ಆಗ ಮಾಡಿದ್ದ ಕೆಲವು ಉತ್ತಮ ಯೋಜನೆಗಳನ್ನು ಮುಂದಿನ ದಿನದಲ್ಲಿ ಯಶಸ್ವಿಯಾಗಿ ಅನುಷ್ಠಾನ ಮಾಡುವ ಕನಸು ಕಂಡಿದ್ದೆ ಎಂದಿದ್ದಾರೆ.
ಭಾರತ ತಂಡದ ಮುಖ್ಯ ಕೋಚ್ ಹುದ್ದೆಯ ನೇಮಕಕ್ಕಾಗಿ ಬಿಸಿಸಿಐ ಅರ್ಜಿ ಆಹ್ವಾನಿಸಿತ್ತು. ಡಂಕೆನ್ ಫ್ಲೆಚರ್ ನಿರ್ಗಮನದ ನಂತರ ಭಾರತ ತಂಡಕ್ಕೆ ನಿರ್ದೇಶಕರಾಗಿ ಒಂದೂವರೆ ವರ್ಷ ಕಾರ್ಯನಿರ್ವಹಿಸಿದ್ದ ರವಿಶಾಸ್ತ್ರಿ ಕೂಡ ಅರ್ಜಿ ಸಲ್ಲಿಸಿದ್ದರು. ಅವರೇ ಕೋಚ್ ಆಗುವ ನಿರೀಕ್ಷೆಯೂ ಹೆಚ್ಚಿತ್ತು.
Advertisement