ನವದೆಹಲಿ: ಟೀಂ ಇಂಡಿಯಾದ ಮಾಜಿ ಸ್ಫೋಟಕ ಬ್ಯಾಟ್ಸ್ ಮನ್ ವೀರೇಂದ್ರ ಸೆಹ್ವಾಗ್ ಅವರು ದೆಹಲಿ ಕ್ರಿಕೆಟ್ ಸಮಿತಿ ಸದಸ್ಯತ್ವಕ್ಕೆ ದಿಢೀರ್ ರಾಜಿನಾಮೆ ನೀಡಿದ್ದಾರೆ.
ವೀರೇಂದ್ರ ಸೆಹ್ವಾಗ್ ಜೊತೆಗೆ ಆಕಾಶ್ ಚೋಪ್ರಾ ಹಾಗೂ ಸಾಹುಲ್ ಸಾಂಗ್ವಿ ಸಹ ದೆಹಲಿ ಕ್ರಿಕೆಟ್ ಸಮಿತಿಗೆ ದಿಢೀರ್ ರಾಜಿನಾಮೆ ನೀಡಿದ್ದಾರೆ.
ದೆಹಲಿ ಕ್ರಿಕೆಟ್ ತಂಡಕ್ಕೆ ಮನೋಜ್ ಪ್ರಭಾಕರ್ ಅವರನ್ನು ಬೌಲಿಂಗ್ ಕೋಚ್ ಆಗಿ ಆಯ್ಕೆ ಮಾಡುವಂತೆ ಸೆಹ್ವಾಗ್, ಚೋಪ್ರಾ ಹಾಗೂ ಸಾಂಗ್ವಿ ಶಿಫಾರಸ್ಸು ಮಾಡಿತ್ತು. ಆದರೆ ಇದನ್ನು ದೆಹಲಿ ಕ್ರಿಕೆಟ್ ಸಂಸ್ಥೆ ತಿರಸ್ಕರಿಸಿತ್ತು.
2000ನೇ ಇಸವಿಯ ಮ್ಯಾಚ್ ಫಿಕ್ಸಿಂಗ್ ಪ್ರಕರಣದಲ್ಲಿ ಮನೋಜ್ ಪ್ರಭಾಕರ್ ಹೆಸರು ಕೇಳಿಬಂದಿತ್ತು. ಇದರಿಂದಾಗಿ ಗೌತಮ್ ಗಂಭೀರ್ ಬೌಲಿಂಗ್ ಕೋಚ್ ಆಗಿ ಮನೋಜ್ ರ ಆಯ್ಕೆಯನ್ನು ತೀವ್ರವಾಗಿ ವಿರೋಧಿಸಿದ್ದರು.
ಮನೋಜ್ ಪ್ರಭಾಕರ್ ಆಯ್ಕೆ ವಿಚಾರದಲ್ಲಿ ಸೆಹ್ವಾಗ್ ಹಾಗೂ ಗಂಭೀರ್ ನಡುವೆ ವೈಮನಸ್ಸು ಶುರುವಾಗಿದೆ. ಇದರ ಜೊತೆಗೆ ವಿಜಯ್ ಹಜಾರೆ ಟೂರ್ನಿಗೆ ದೆಹಲಿ ಕ್ರಿಕೆಟ್ ತಂಡದ ನಾಯಕತ್ವವನ್ನೂ ಗಂಭೀರ್ ಗೆ ನೀಡಲಾಗಿದೆ. ಹೀಗಾಗಿ ಸೆಹ್ವಾಗ್ ರಾಜಿನಾಮೆ ನೀಡಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿವೆ.
ಇನ್ನು ಸೆಹ್ವಾಗ್ ತಮ್ಮ ರಾಜಿನಾಮೆ ಕುರಿತಂತೆ ದೆಹಲಿ ಕ್ರಿಕೆಟ್ ಹಿತದೃಷ್ಟಿಯಿಂದ ಕ್ರಿಕೆಟ್ ಸಮಿತಿಗೆ ರಾಜಿನಾಮೆ ನೀಡುತ್ತಿರುವುದಾಗಿ ಹೇಳಿದ್ದಾರೆ.