ಧರ್ಮಶಾಲಾ: ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತದ ಗೆಲುವಿನ ಓಟ ಮುಂದುವರೆದಿದೆ. ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ಭಾನುವಾರ ನಡೆದ 21ನೇ ಪಂದ್ಯದಲ್ಲಿ ಮೊಹಮ್ಮದ್ ಶಮಿಯ ಮಾರಕ ಬೌಲಿಂಗ್ ಹಾಗೂ ವಿರಾಟ್ ಕೊಹ್ಲಿಯ ಬ್ಯಾಟಿಂಗ್ ಅಬ್ಬರದ ನೆರವಿನಿಂದ ಭಾರತ 4 ವಿಕೆಟ್ ಗಳಿಂದ ನ್ಯೂಜಿಲೆಂಡ್ ತಂಡವನ್ನು ಸೋಲಿಸಿತು. ಈ ಮೂಲಕ ಸತತ ಐದನೇ ಗೆಲುವು ದಾಖಲಿಸಿತು.
ಹೌದು. ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಮಾಡಿದ ಭಾರತ ತಂಡ ವೇಗಿ ಮೊಹಮ್ಮದ್ ಶಮಿಯ ಮಾರಕ ಬೌಲಿಂಗ್ ನೆರವಿನಿಂದ 273 ರನ್ ಗಳಿಗೆ ಕಿವೀಸ್ ತಂಡವನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾಯಿತು. ಕಿವೀಸ್ ಪರ ಮಿಚ್ಚೆಲ್ 130 ರಚಿನ್ ರವೀಂದ್ರ 75, ಗ್ಲೆನ್ ಫಿಲಿಪ್ಸ್ 23 ರನ್ ಗಳಿಸಿದದ್ದು ಹೊರತುಪಡಿಸಿದರೆ ಬೇರೆ ಯಾವುದೇ ಆಟಗಾರರು ಕ್ರೀಸ್ ನಲ್ಲಿ ನಿಲ್ಲಲಿಲ್ಲ. ಭಾರತ ತಂಡದ ಪರ ಶಮಿ 5 ವಿಕೆಟ್ ಪಡೆದರೆ ಕುಲದೀಪ್ ಯಾದವ್ 2, ಬೂಮ್ರಾ ಹಾಗೂ ಮೊಹಮ್ಮದ್ ಸಿರಾಜ್ ತಲಾ ಒಂದೊಂದು ವಿಕೆಟ್ ಪಡೆದರು.
ನಂತರ ನ್ಯೂಜಿಲೆಂಡ್ ನೀಡಿದ 274 ರನ್ ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ಭಾರತ ತಂಡದ ಪರ ನಾಯಕ ರೋಹಿತ್ ಶರ್ಮಾ 46, ಶುಭ್ ಮನ್ ಗಿಲ್ 26, ಶ್ರೇಯಸ್ ಅಯ್ಯರ್ 33, ಕೆಎಲ್ ರಾಹುಲ್ 27, ಸೂರ್ಯಕುಮಾರ್ ಯಾದವ್ ಕೇವಲ 2 ರನ್ ಗಳಿಸಿ ಔಟಾದರು. ಆದರೆ, ವಿರಾಟ್ ಕೊಹ್ಲಿ 104 ಎಸೆತಗಳಲ್ಲಿ 95 ರನ್ ಸಿಡಿಸುವ ಮೂಲಕ ಟೀಂ ಇಂಡಿಯಾವನ್ನು ಗೆಲುವಿನ ದಡ ಸೇರಿಸಿದರು.
ಶತಕದ ಹೊಸ್ತಿಲಲ್ಲಿ ಗ್ಲೇನ್ ಫಿಲಿಪ್ಸ್ ಅವರಿಗೆ ಕ್ಯಾಚ್ ನೀಡಿ ಫೆವಿಲಿಯನ್ ಸೇರಿದರು. ನಂತರ ಜೊತೆಯಾದ ರವೀಂದ್ರ ಜಡೇಜಾ (39) ಮೊಹಮ್ಮದ್ ಶಮಿ (1) ರನ್ ಮೂಲಕ 48 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 274 ರನ್ ಗಳಿಸುವ ಮೂಲಕ ಭಾರತ ಗೆಲುವು ಸಾಧಿಸಿತು. ಮೊಹಮ್ಮದ್ ಶಮಿ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.
Advertisement