ಬೆಂಗಳೂರು: ಕರ್ನಾಟಕದ 19 ವರ್ಷದೊಳಗಿನವರ ತಂಡವು 79 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಕೂಚ್ ಬಿಹಾರ್ ಟ್ರೋಫಿ ಗೆದ್ದುಕೊಂಡಿದೆ.
ಶಿವಮೊಗ್ಗದ ಕೆಎಸ್ ಸಿಎ ಕ್ರೀಡಾಂಗಣದಲ್ಲಿ ಸೋಮವಾರ ಮುಂಬೈ ಎದುರು ನಡೆದ ಫೈನಲ್ ಪಂದ್ಯದಲ್ಲಿ ಆರಂಭಿಕ ಬ್ಯಾಟರ್ ಪ್ರಖರ್ ಚತುರ್ವೇದಿ ಅವರ ಅಜೇಯ 404 ರನ್ ಗಳ ನೆರವಿನಿಂದ ಕರ್ನಾಟಕ ಚಾಂಪಿಯನ್ ಆಯಿತು.
ವಿಜೇತ ಕರ್ನಾಟಕ ತಂಡಕ್ಕೆ ಕೆಎಸ್ ಸಿಎ ಅಧ್ಯಕ್ಷ ರಘುರಾಮ್ ಭಟ್ ಹಾಗೂ ಮಾಜಿ ಸಚಿವ ಡಿ.ಹೆಚ್. ಶಂಕರ್ ಮೂರ್ತಿ ರೂ.30 ಲಕ್ಷ ಚೆಕ್ ಹಾಗೂ ಟ್ರೋಫಿ ವಿತರಿಸಿದರು. ರನ್ನರ್ ಅಪ್ ಮುಂಬೈ ತಂಡ ರೂ. 15 ಲಕ್ಷ ಪಡೆಯಿತು.
79 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಕೂಚ್ ಬಿಹಾರ್ ಟ್ರೋಫಿ ಗೆದ್ದ ಕರ್ನಾಟಕ ತಂಡಕ್ಕೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅಭಿನಂದನೆ ಸಲ್ಲಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಕರ್ನಾಟಕ ತಂಡ 890 ರನ್ಗಳ ದಾಖಲೆಯ ಮೊತ್ತ ಪೇರಿಸುವ ಮೂಲಕ ಹೊಸ ಮೈಲಿಗಲ್ಲು ಸಾಧಿಸಿದೆ. ಯುವ ಆಟಗಾರರು ಮುಂದಿನ ದಿನಗಳಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲಿ ಎಂದು ಹಾರೈಸಿದ್ದಾರೆ.
Advertisement