ಕೇಂದ್ರ ಸಮ್ಮತಿಸಿದರೆ ನನಗೇನು ಅಭ್ಯಂತರ ಇಲ್ಲ: ಭಾರತ-ಪಾಕ್ ಪಂದ್ಯ ಬೆಂಬಲಿಸಿದ ಸೌರವ್ ಗಂಗೂಲಿ, ಭುಗಿಲೆದ್ದ ಆಕ್ರೋಶ!
ನವದೆಹಲಿ: ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲಿನ ಭಯೋತ್ಪಾದಕ ದಾಳಿ ಇನ್ನೂ ಮಾಸುವ ಮುನ್ನವೇ ಭಾರತೀಯ ಕ್ರಿಕೆಟ್ ತಂಡ ಪಾಕಿಸ್ತಾನದೊಂದಿಗೆ ಕ್ರಿಕೆಟ್ ಪಂದ್ಯ ಆಡಲು ಸಿದ್ಧವಾಗಿದೆ. ಸೆಪ್ಟೆಂಬರ್ 14ರಂದು ಯುಎಇಯಲ್ಲಿ ನಡೆಯಲಿರುವ ಏಷ್ಯಾ ಕಪ್ನಲ್ಲಿ ಭಾರತ-ಪಾಕಿಸ್ತಾನ ಸೆಣೆಸಲಿವೆ. ಭಾರತ-ಪಾಕಿಸ್ತಾನ ಪಂದ್ಯದ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಜನರು ತಮ್ಮ ಆಕ್ರೋಶ ಹೊರಹಾಕುತ್ತಿದ್ದಾರೆ. ಏತನ್ಮಧ್ಯೆ, ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಅವರ ಇತ್ತೀಚಿನ ಹೇಳಿಕೆ ಬೆಂಕಿಗೆ ತುಪ್ಪ ಸುರಿದಂತಾಗಿದೆ.
ಏಷ್ಯಾ ಕಪ್ ನಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಆಡುವುದಕ್ಕೆ ನನಗೆ ಯಾವುದೇ ಆಕ್ಷೇಪವಿಲ್ಲ. ಆಟ ಮುಂದುವರಿಯಬೇಕು ಎಂದು ಸೌರವ್ ಗಂಗೂಲಿ ಹೇಳಿದ್ದಾರೆ. ಪಹಲ್ಗಾಮ್ನಂತಹ ಘಟನೆ ನಡೆಯಬಾರದಿತ್ತು. ಆದರೆ ಆಟವೂ ನಿಲ್ಲಬಾರದು. ಭಯೋತ್ಪಾದನೆ ಇರಬಾರದು. ಅದನ್ನು ನಿರ್ಮೂಲನೆ ಮಾಡಬೇಕು. ಭಾರತ ಭಯೋತ್ಪಾದನೆಯ ವಿರುದ್ಧ ಬಲವಾದ ನಿಲುವು ತೆಗೆದುಕೊಂಡಿದೆ. ಆದರೆ ಆಟ ಮುಂದುವರಿಯಬೇಕು ಎಂದು ಹೇಳಿದರು.
ಗಂಗೂಲಿ ಹೇಳಿಕೆ ಈಗ ತೀವ್ರ ಟೀಕೆಗೆ ಗುರಿಯಾಗಿದೆ. ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆ ಭಾರತೀಯರ ಜೀವ ತೆಗೆಯುತ್ತಿರುವಾಗ. ಆಟವನ್ನು ಮುಂದುವರಿಸಬೇಕು ಎಂದು ಹೇಳುವುದು ಸರಿಯೇ ಎಂಬ ಪ್ರಶ್ನೆಗಳು ಏಳುತ್ತಿವೆ. ಹಲವು ಮಾಜಿ ಆಟಗಾರರು ಮತ್ತು ಸಾಮಾನ್ಯ ಜನರು ಸಾಮಾಜಿಕ ಮಾಧ್ಯಮದಲ್ಲಿ ಗಂಗೂಲಿ ಅವರನ್ನು ಕೇಳುತ್ತಿದ್ದಾರೆ. ರಕ್ತಸಿಕ್ತ ಹೋಳಿ ಆಡುತ್ತಿರುವಾಗ ಕ್ರಿಕೆಟ್ ಪಾಕಿಸ್ತಾನದೊಂದಿಗಿನ ಸಂಬಂಧವನ್ನು ಸಾಮಾನ್ಯಗೊಳಿಸುವ ಒಂದು ಮಾರ್ಗವಾಗಬೇಕೇ?
ಭಾರತ ಸೆಪ್ಟೆಂಬರ್ 10ರಂದು ಯುಎಇ ವಿರುದ್ಧ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ. ಹೆಚ್ಚಿನ ಪಂದ್ಯಗಳು ದುಬೈನಲ್ಲಿ ನಡೆಯಲಿವೆ. ಈ 19 ಪಂದ್ಯಗಳ ಟೂರ್ನಿಯಲ್ಲಿ ತಂಡಗಳಿಗೆ 17 ಸದಸ್ಯರ ತಂಡವನ್ನು ಹೊಂದಲು ಅವಕಾಶ ನೀಡಲಾಗಿದ್ದು ಪಂದ್ಯಗಳನ್ನು ದುಬೈ ಮತ್ತು ಅಬುಧಾಬಿಯಲ್ಲಿ ಆಡಲಾಗುತ್ತದೆ.
ಗುಂಪು ಎ: ಭಾರತ, ಪಾಕಿಸ್ತಾನ, ಯುಎಇ, ಓಮನ್
ಗುಂಪು ಬಿ: ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ, ಹಾಂಗ್ ಕಾಂಗ್

