

ನವದೆಹಲಿ: ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಬುಧವಾರ ರಾತ್ರಿ ನಡೆದ ರೋಚಕ ಐಪಿಎಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಕೇವಲ ಒಂದು ರನ್ನಿಂದ ಸೋಲಿಗೆ ಶರಣಾಯಿತು.
ಬಳಿಕ ಡ್ರೆಸ್ಸಿಂಗ್ ರೂಮ್ ನಲ್ಲಿ ಸ್ಟಾರ್ ಬ್ಯಾಟ್ಸ್ಮನ್ ಡೇವಿಡ್ ಮಿಲ್ಲರ್ ಒಬ್ಬರೇ ಕುಳಿತು ತಲೆ ಮೇಲೆ ಕೈ ಹಾಕಿ ಕಣ್ಣೀರಿಟ್ಟಿದ್ದಾರೆ. ಈ ವಿಡಿಯೋವನ್ನು ಫ್ರಾಂಚೈಸಿ ಬಿಡುಗಡೆ ಮಾಡಿದೆ. ಪಂದ್ಯ ಸೋಲಲು ನಾನೇ ಕಾರಣ ಎಂಬ ಹತಾಶೆಯಿಂದ ಅತ್ತಿದ್ದಾರೆ.
ಅಂದಹಾಗೆ, 17ನೇ ಓವರ್ನ ಕೊನೆಯ ಎಸೆತದಲ್ಲಿ ಕೆ.ಎಲ್.ರಾಹುಲ್ ಔಟಾದ ನಂತರ ಗಾಯದಿಂದ ರಿಟೈರ್ಡ್ ಹರ್ಟ್ ಆಗಿದ್ದ ಡೇವಿಡ್ ಮಿಲ್ಲರ್, ಮತ್ತೆ ಕ್ರೀಸ್ಗೆ ಬಂದರು. ಕೊನೇ ಹಂತದಲ್ಲಿ 20 ಎಸೆತಗಳಲ್ಲಿ 3 ಬೌಂಡರಿ ಮತ್ತು 3 ಸಿಕ್ಸರ್ಗಳ ಸಹಾಯದಿಂದ 41 ರನ್ ಗಳಿಸಿ ಅಜೇಯರಾಗಿ ಉಳಿದರು. ಆದರೂ ಪಂದ್ಯವನ್ನು ಗೆಲ್ಲಿಸಿಕೊಡಲು ಸಾಧ್ಯವಾಗಲಿಲ್ಲ.
ಪಂದ್ಯದ ಸೋಲಿಗೆ ಇದೇ ಕಾರಣ!
ಕೊನೆಯ ಓವರ್ನಲ್ಲಿ ಗೆಲುವಿಗೆ 13 ರನ್ಗಳು ಬೇಕಾಗಿದ್ದಾಗ, ಪ್ರಸಿದ್ಧ ಕ್ರಿಷ್ಣ ಎಸೆದ ಮೊದಲ ಎಸೆತವನ್ನು ಬೌಂಡರಿಗೆ ಅಟ್ಟಿದ ವಿಪ್ರಜ್ ಎರಡನೇ ಎಸೆತದಲ್ಲಿ ಔಟಾದರು. ಈ ವೇಳೆ ಕ್ರೀಸ್ಗೆ ಬಂದ ಕುಲದೀಪ್ ಯಾದವ್ ಮೂರನೇ ಎಸೆತದಲ್ಲಿ ಸಿಂಗಲ್ ತೆಗೆದುಕೊಂಡು ಮಿಲ್ಲರ್ಗೆ ಸ್ಟ್ರೈಕ್ ನೀಡಿದರು. ಬಳಿಕ ಮಿಲ್ಲರ್ ನಾಲ್ಕನೇ ಎಸೆತದಲ್ಲಿ ಸಿಕ್ಸರ್ ಬಾರಿಸಿದರು. ಇದರೊಂದಿಗೆ, ಡೆಲ್ಲಿ ತಂಡಕ್ಕೆ ಗೆಲುವಿಗಾಗಿ ಎರಡು ಎಸೆತಗಳಲ್ಲಿ ಎರಡು ರನ್ಗಳು ಬೇಕಾಯಿತು.
ಈ ವೇಳೆ ಮಿಲ್ಲರ್, ಸ್ಟ್ರೈಕ್ನಲ್ಲಿರುವುದನ್ನು ನೋಡಿ, ಡೆಲ್ಲಿ ಗೆದ್ದೇ ಗೆಲ್ಲುತ್ತದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಅದು ಆಗಲಿಲ್ಲ. ಐದನೇ ಎಸೆತದಲ್ಲಿ ಮಿಲ್ಲರ್, ಸುಲಭವಾಗಿ ಸಿಂಗಲ್ ತೆಗೆದುಕೊಳ್ಳುವ ಅವಕಾಶವಿದ್ದರೂ, ಮಿಲ್ಲರ್ ಅದನ್ನು ನಿರಾಕರಿಸಿದರು. ಮಿಲ್ಲರ್ ಮಾಡಿದ ಈ ತಪ್ಪು ಪಂದ್ಯದ ಸೋಲಿಗೆ ಕಾರಣವಾಯಿತು.
ಕೊನೆಯ ಎಸೆತದಲ್ಲಿ ಮಿಲ್ಲರ್ ಚೆಂಡನ್ನು ಮುಟ್ಟಲೇ ಇಲ್ಲ. ಬೈ ರನ್ ಪಡೆಯಲು ಪ್ರಯತ್ನಿಸುವಾಗ ಕುಲದೀಪ್ ಯಾದವ್ ರನೌಟ್ ಆದರು ಮತ್ತು ಡೆಲ್ಲಿ ಒಂದು ರನ್ನಿಂದ ಸೋಲಿಗೆ ಶರಣಾಯಿತು. ಮಿಲ್ಲರ್ ಐದನೇ ಎಸೆತದಲ್ಲಿ ಸಿಂಗಲ್ ಪಡೆದಿದ್ದರೆ ಪಂದ್ಯ ಟೈ ಆಗುತ್ತಿತ್ತು. ಕುಲದೀಪ್ ಯಾದವ್ ಕೊನೆಯ ಎಸೆತದಲ್ಲಿ ಶಾಟ್ ತೆಗೆದುಕೊಂಡಿದ್ದರೂ ಅಥವಾ ಬೈನಲ್ಲಿ ಸಿಂಗಲ್ ಪಡೆದಿದ್ದರೂ ಡೆಲ್ಲಿ ಗೆಲ್ಲುತ್ತಿತ್ತು. ಒಂದು ವೇಳೆ ಔಟ್ ಆಗಿದ್ದರೂ ಪಂದ್ಯ ಸೂಪರ್ ಓವರ್ಗೆ ಹೋಗುತ್ತಿತ್ತು. ಆದರೆ, ಅದು ನಡೆಯಲಿಲ್ಲ.
ತಮ್ಮ ತಂಡವು ಒಂದು ರನ್ನಿಂದ ಸೋತ ನಂತರ ಮಿಲ್ಲರ್ ಭಾವುಕರಾದರು. ಈ ಸೋಲಿಗೆ ನಾನು ಮಾಡಿದ ತಪ್ಪೇ ಕಾರಣ ಎಂದು ಮಿಲ್ಲರ್ ಕಣ್ಣೀರು ಹಾಕಿದರು. ಇದನ್ನು ಗಮನಿಸಿದ ದೆಹಲಿ ನಾಯಕ ಅಕ್ಷರ್ ಪಟೇಲ್, ಡೇವಿಡ್ ಮಿಲ್ಲರ್ ಅವರನ್ನು ಸಮಾಧಾನಪಡಿಸಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದು, ಅಕ್ಷರ್ ಪಟೇಲ್ ನಡೆಗೆ ಪ್ರಶಂಸೆಯ ಮಹಾಪೂರವೇ ಹರಿದು ಬರುತ್ತಿದೆ. ನಾಯಕನ ಗುಣ ಈ ರೀತಿ ಇರಬೇಕು ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.
Advertisement