ಆಳಂದ: ತಾಲೂಕಿನ ಮೊರಾರ್ಜಿ ವಸತಿ ಶಾಲೆಯಲ್ಲಿ ಸೋಮವಾರ ಮಧ್ಯಾಹ್ನದ ಊಟದಲ್ಲಿ ಸತ್ತ ಕಪ್ಪೆ ಕಾಲುಗಳು ದೊರೆತ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಊಟವನ್ನು ಬಹಿಷ್ಕರಿಸಿದ್ದಾರೆ.
ಊಟಕ್ಕೆ ಕುಳಿತಿದ್ದ ವಿದ್ಯಾರ್ಥಿಗಳಿಗೆ ಅನ್ನ ಬಡಿಸಿದ ಮೇಲೆ ಕಪ್ಪೆಯ ಕಾಲುಗಳು ದೊರೆತಿವೆ. ಅನ್ನದ ಪಾತ್ರೆಯಲ್ಲೇ ಕಪ್ಪೆ ಸತ್ತಿದೆ ಎಂದು ಗೊತ್ತಾದ ಮೇಲೆ ವಿದ್ಯಾರ್ಥಿಗಳು ವಾಂತಿ ಮಾಡಿಕೊಂಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಅಸ್ವಸ್ಥಗೊಂಡ 15 ವಿದ್ಯಾರ್ಥಿಗಳಿಗೆ ಗ್ರಾಮದ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ.
ಸುದ್ದಿ ಅರಿತು ಜಿಲ್ಲಾ ಬಿಸಿಎಂ ಅಧಿಕಾರಿ ಕೆ.ಟಿ. ರಾಠೋಡ್ ಭೇಟಿ ನೀಡಿದ್ದರು. ಇದೇ ಸಂದರ್ಭದಲ್ಲಿ ಆಗಮಿಸಿದ್ದ ಜಿಪಂ ಸದಸ್ಯ ಹರ್ಷಾನಂದ ಗುತ್ತೇದಾರ, ತಾಪಂ ಸದಸ್ಯ ಮಲ್ಲಿನಾಥ ಜಮಾದಾರ ಅಲ್ಲದೆ, ಗ್ರಾಪಂ ಸದಸ್ಯರು ಭೇಟಿ ನೀಡಿ ಅಡುಗೆ ಸಿಬ್ಬಂದಿ ಮತ್ತು ಶಾಲೆಯ ಮುಖ್ಯಸ್ಥರ ನಿಷ್ಕಾಳಜಿಯೇ ಇದಕ್ಕೆ ಕಾರಣವಾಗಿದೆ. ಮುಂದೆ ಇಂತಹ ಘಟನೆ ಆಗದಂತೆ ಎಚ್ಚರ ವಹಿಸಬೇಕೆಂದು ಅವರು ತಾಕೀತು ಮಾಡಿದ್ದಾರೆ.
ಕ್ರಮಕ್ಕೆ ಒತ್ತಾಯ: ವಸತಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಬಗ್ಗೆ ನಿರ್ಲಕ್ಷ್ಯ ವಹಿಸುವುದು ಸರಿಯಲ್ಲ. ಆಗಾಗ ಇಂಥ ಪ್ರಕರಣ ನಡೆಯುತ್ತಿವೆ. ಮೇಲಾಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಈ ಕುರಿತು ಗಮನ ಹರಿಸಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಮತ್ತು ಸ್ವಚ್ಛ ಊಟ ನೀಡಬೇಕೆಂದು ಸಾವಯವ ಕೃಷಿ ಪರಿವಾರದ ತಾಲೂಕು ಅಧ್ಯಕ್ಷ ಬಸವರಾಜ ಪವಾಡಶೆಟ್ಟಿ ಒತ್ತಾಯಿಸಿದ್ದಾರೆ.
Advertisement