ಚಿಕ್ಕಮಗಳೂರು: ಬೇಸಿಗೆ ಆರಂಭವಾಗುವ ಮೊದಲೇ ರಾಜ್ಯದಲ್ಲಿ ವಿದ್ಯುತ್ ಅಭಾವ ತಲೆದೋರಿದೆ. ಒಂದೇ ದಿನದಲ್ಲಿ ವಿದ್ಯುತ್ ಉತ್ಪಾದನೆ ಸುಮಾರು 2 ಸಾವಿರ ಮೆಗಾವಾಟ್ ಕುಸಿದಿದೆ.
ರಾಜ್ಯದಲ್ಲಿ ಕಲ್ಲಿದ್ದಲು ಹಾಗೂ ಜಲವಿದ್ಯುತ್ ಉತ್ಪಾದನಾ ಘಟಕಗಳಿಂದ ಪ್ರತಿದಿನ 7,800 ಮೆಗಾವಾಟ್ ವಿದ್ಯುತ್ ಉತ್ಪಾದನೆ ಆಗುತ್ತಿದೆ. ಆದರೆ, ಮಂಗಳವಾರ ಬೆಳಗ್ಗೆ 8 ರಿಂದ ವಿದ್ಯುತ್ ಉತ್ಪಾದನಾ ಘಟಕಗಳಲ್ಲಿ ಉತ್ಪಾದನೆಯಲ್ಲಿ ಏರುಪೇರು ಉಂಟಾಗಿದ್ದರಿಂದ ಸುಮಾರು 2 ಸಾವಿರ ಮೆಗಾವಾಟ್ ವಿದ್ಯುತ್ ಉತ್ಪಾದನೆ ಕಡಿಮೆಯಾಗಿದೆ. ಇದರಿಂದಾಗಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ.
ಉಡುಪಿ, ಬಳ್ಳಾರಿ ಹಾಗೂ ರಾಯಚೂರುಗಳಲ್ಲಿ ಕಲ್ಲಿದ್ದಲು ವಿದ್ಯುತ್ ಉತ್ಪಾದನೆ ಕೇಂದ್ರಗಳಿದ್ದು, ಇಲ್ಲಿ ಕಲ್ಲಿದ್ದಲು ಕೊರತೆಯಿಂದಾಗಿ ನಿರೀಕ್ಷಿತ ಪ್ರಮಾಣದಲ್ಲಿ ಉತ್ಪಾದನೆಯನ್ನು ಮಾಡಲು ಸಾಧ್ಯವಾಗುತ್ತಿಲ್ಲ.
ಏಕಕಾಲದಲ್ಲಿ ಈ ಮೂರು ಕೇಂದ್ರಗಳಲ್ಲಿ ಕಲ್ಲಿದ್ದಲಿನ ಕೊರತೆ ಕಂಡುಬಂದಿದೆ. ಒಳ್ಳಾರಿ ಬಿಟಿಪಿಎಸ್ನಲ್ಲಿ 100, ರಾಯಚೂರಿನ ಆರ್ಟಿಪಿಎಸ್ನಲ್ಲಿ 350, ಉಡುಪಿಯಲ್ಲಿ ಕೇಂದ್ರದಲ್ಲಿ 100 ಮೆಗಾವಾಟ್ ಉತ್ಪಾದನೆಯಾಗುತ್ತಿದೆ. ಅಂದರೆ ಬಳ್ಳಾರಿಯಲ್ಲಿ 450 ಮೆಗಾವಾಟ್, ರಾಯಚೂರಿನಲ್ಲಿ 1330, ಉಡುಪಿಯಲ್ಲಿ 550 ಮೆಗಾವಾಟ್ ವಿದ್ಯುತ್ ಉತ್ಪಾದನೆ ಕಡಿಮೆಯಾಗಿದೆ.
ವಿದ್ಯುತ್ ಕೊರತೆಯಿಂದಾಗಿ ಲೋಡ್ ಶೆಡ್ಡಿಂಗ್ ಆರಂಭವಾಗಿದೆ. ಸದ್ಯ ನಗರ ಪ್ರದೇಶಗಳಲ್ಲಿ 3 ರಿಂದ 4 ಗಂಟೆ, ಗ್ರಾಮಾಂತರ ಪ್ರದೇಶಗಳಲ್ಲಿ 9 ಗಂಟೆ ಕಾಲ ಅನಿಯಮಿತ ವಿದ್ಯುತ್ ಕಡಿತಗೊಳಿಸಲಾಗುತ್ತಿದೆ. ಬಹಳಷ್ಟು ಗ್ರಾಮ ಪಂಚಾಯಿತಿಗಳಲ್ಲಿ ಕಂಪ್ಯೂಟರ್ಗಳು ಪವರ್ ಕೊರತೆಯಿಂದಾಗಿ ಸ್ಧಗಿತಗೊಂಡಿವೆ. ಇದು, ಅಭಿವೃದ್ಧಿ ಕೆಲಸಗಳ ಮೇಲೆ ದುಷ್ಪರಿಣಾಮ ಬೀರಿದೆ.
-ಆರ್. ತಾರಾನಾಥ್
Advertisement