ಭದ್ರಾವತಿ: ಮಾಲಿನ್ಯ ನಿಯಂತ್ರಣದ ನಿರ್ದಿಷ್ಟ ಮಾನ ಉಲ್ಲಂಘನೆಗಾಗಿ ಮೈಸೂರು ಕಾಗದ ಕಾರ್ಖಾನೆಗೆ ಮಾಲಿನ್ಯ ನಿಯಂತ್ರಣ ಮಂಡಳಿ ಡಿ.15ರಿಂದ ವಿದ್ಯುತ್ ನಿಲುಗಡೆ ಮಾಡಲಾಗಿದೆ ಎಂದು ತಿಳಿದು ಬಂದಿದ್ದು, ಇದನ್ನು ವ್ಯವಸ್ಥಾಪಕ ನಿರ್ದೇಶಕ ನವಿನ್ರಾಜ್ ಸಿಂಗ್ ಅವರೂ ಖಚಿತಪಡಿಸಿದ್ದಾರೆ.
ಇನ್ನು ಮೂರು ದಿನಗಳಲ್ಲಿ ಕಾರ್ಖಾನೆಯ ಯಂತ್ರೋಪಕರಣ ಮತ್ತು ಚಿಮಣಿಯನ್ನು ಸ್ವಚ್ಛಗೊಳಿಸಿ ನಿರ್ದಿಷ್ಟಮಾನ ಕಾಪಾಡಿಕೊಳ್ಳಲು ಅವಶ್ಯವಿರುವ ಎಲ್ಲ ಕ್ರಮ ಕೈಗೊಳ್ಳುತ್ತೇವೆ ಎಂದು ನವೀನ್ರಾಜ್ ಸಿಂಗ್ ತಿಳಿಸಿದ್ದಾರೆ.
ಕಾರ್ಖಾನೆಯ ಹೊಗೆ ನಳಿಗೆಯಿಂದ ಧೂಳು ಮತ್ತು ಹೊಗೆಯಿಂದ ಪರಿಸರ ಮಾಲಿನ್ಯ ಉಂಟಾಗುತ್ತಿದೆ. ಇದು ನಿರ್ದಿಷ್ಟ ಪ್ರಮಾಣಕ್ಕಿಂತ ಹೆಚ್ಚಾಗಿದ್ದುದ್ದರಿಂದ ಮಾಲಿನ್ಯ ನಿಯಂತ್ರಣ ಮಂಡಳಿ ಹಲವಾರು ಬಾರಿ ನೊಟೀಸ್ ನೀಡಿತ್ತು. ಆದರೂ ಕಾರ್ಖಾನೆ ಈ ಬಗ್ಗೆ ಗಮನ ನೀಡಿರಲಿಲ್ಲ. ಆದ ಕಾರಣ ಪ್ರಥಮ ಹಂತದ ಕ್ರಮವಾಗಿ ಮೆಸ್ಕಾಂ ಮೂಲಕ ವಿದ್ಯುತ್ ಪೂರೈಕೆಯನ್ನು ಸೋಮವಾರದಿಂದ ಸ್ಥಗಿತಗೊಳಿಸುವ ತೀರ್ಮಾನವನ್ನು ಮಂಡಳಿ ತೆಗೆದುಕೊಂಡಿದೆ. ಹೀಗಾಗಿ ಇಂದು ಸಂಜೆಯಿಂದ ಕಾಗದ ಉತ್ಪಾದನಾ ಘಟಕ ಸ್ಧಗಿತಗೊಳ್ಳಲಿವೆ.
ಡಿಸಿ ಕಚೇರಿಗೆ ಬೀಗ: ಏತನ್ಮಧ್ಯೆ ಕಾರ್ಖಾನೆಗೆ ವಿದ್ಯುತ್ ನಿಲುಗಡೆ ಮಾಡಿದರೆ ಶಿವಮೊಗ್ಗದಲ್ಲಿರುವ ಜಿಲ್ಲಾಧಿಕಾರಿ ಕಚೇರಿಗೆ ಬೀಗ ಜಡಿಯುತ್ತೇವೆ ಎಂದು ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಕೆ.ಟಿ.ಗಂಗಾಧರ ಭಾನುವಾರ ಸಂಜೆ ಕಾರ್ಖಾನೆಗೆ ಭೇಟಿ ನೀಡಿ ಕಾರ್ಮಿಕ ಸಂಘಗಳ ಮುಖಂಡರನ್ನು ಭೇಟಿ ಮಾಡಿ ತಿಳಿಸಿದ್ದಾರೆ. ಅಲ್ಲದೆ ಈ ಬಗ್ಗೆ ಕಾರ್ಖಾನೆ ಆಡಳಿತ ಮಂಡಳಿಯೊಂದಿಗೂ ಮಾತುಕತೆ ನಡೆಸಿದರು.
Advertisement