ಬೆಂಗಳೂರು: ರಾಜ್ಯ ನ್ಯಾಯಾಂಗ ಇತಿಹಾಸದಲ್ಲೇ ಮೊದಲ ಬಾರಿಗೆ ನ್ಯಾಯಾಧೀಶರೊಬ್ಬರು ಲಂಚಾವತಾರದಲ್ಲಿ ಸಿಕ್ಕಿ ಬಿದ್ದಿದ್ದಾರೆ.
ಕಕ್ಷಿದಾರರಿಂದ ಲಂಚ ಸ್ವೀಕರಿಸುತ್ತಿದ್ದಾಗ ಬೀದರ್ನ ಬಸವ ಕಲ್ಯಾಣದ ಸಿವಿಲ್ ಕೋರ್ಟ್ ನ್ಯಾಯಾಧೀಶ ಶರಣಪ್ಪ ಸಜ್ಜನ ಹೈಕೋರ್ಟ್ ವಿಚಕ್ಷಣಾ ವಿಭಾಗದ ರಿಜಿಸ್ಟ್ರಾರ್ ಬಲೆಗೆ ಬಿಬಿದ್ದಿದ್ದಾರೆ. ಆಸ್ತಿ ವಿವಾದಕ್ಕೆ ಸಂಬಂಧಿಸಿ ತಮ್ಮ ಪರ ತೀರ್ಪು ಬರೆಯವು ನ್ಯಾಯಾಧೀಶ ಸಜ್ಜನ ರು. 5 ಲಕ್ಷ ಲಂಚ ಕೇಳಿದ್ದಾರೆಂದು ಕಕ್ಷಿದಾರ ಕೀರ್ತಿರಾಜ್ ಅಂಜೆ ಮೂಲಕ ರಿಜಿಸ್ಟ್ರಾರ್ಗೆ ದೂರು ನೀಡಿದ್ದರು,
ವಿಚಕ್ಷಣಾ ವಿಭಾದ ಸೂಚನೆಯಂತೆ ನ್ಯಾಯಾಧೀಶರಿಗೆ ಮೊದಲ ಕಂತಿನ ರೂಪದಲ್ಲಿ ರು. 1 ಲಕ್ಷ ನೀಡಲು ಮುಂದಾದಾಗ ನ್ಯಾಯಮೂರ್ತಿ ಮೈಕಲ್ ಡಿ ಕುನ್ಹ ಅವರ ನೇತೃತ್ವದ ತಂಡ ನ್ಯಾಯಾಧೀಶರನ್ನು ಸಾಕ್ಷಿ ಸಮೇತ ಹಿಡಿಯುವಲ್ಲಿ ಯಶಸ್ವಿಯಾಗಿದೆ. ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ವಿರುದ್ಧದ ಅಕ್ರಮ ಆಸ್ತಿ ಪ್ರಕರಣದಲ್ಲಿ ತೀರ್ಪು ನೀಡಿ ಜನರ ಮೆಚ್ಚುಗೆಗೆ ಇದೇ ನ್ಯಾ. ಮೈಕಲ್ ಡಿ ಕುನ್ಹ ಪಾತ್ರರಾಗಿದ್ದರು.
ಈಗ ನ್ಯಾಯಾಧೀಶರೊಬ್ಬರನ್ನು ಭ್ರಷ್ಟಾಚಾರ ಪ್ರಕರಣದಲ್ಲಿ ಸಿಲುಕಿಸುವುದರೊಂದಿಗೆ ಹೊಸ ಸಂಚಲನ ಮೂಡಿಸಿದ್ದಾರೆ. ನ್ಯಾಯಾಂಗದಲ್ಲೂ ಭ್ರಷ್ಟಾಚಾರ ನಡೆಯುತ್ತದೆ ಎಂಬುದಕ್ಕೆ ಶರಣಪ್ಪ ಸಜ್ಜಮ ಪ್ರಕರಣ ಪುಷ್ಟಿ ನೀಡಿದೆ. ಈ ಕುರಿತು ಹೈಕೋರ್ಟ್ನ ರಿಜಿಸ್ಟ್ರಾರ್ (ಜನರಲ್) ಬಿ.ಎ ಪಾಟೀಲ್ ಅವರನ್ನು ಕನ್ನಡಪ್ರಭ ಸಂಪರ್ಕಿಸಿದಾಗ, ಲಂಚ ಆರೋಪದಲ್ಲಿ ನ್ಯಾಯಾಧೀಶರು ಸಿಕ್ಕಿ ಬಿದ್ದಿರುವುದು ಖಚಿತವಾಗಿದ್ದು, ವಿಚಕ್ಷಣಾ ವಿಭಾಗದವರಿಗೆ ಕಾಯುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ದೂರುದಾರ ಹೇಳಿದ್ದೇನು?: ಗುರುಬಸವೇಶ್ವರ ಮಠದ ಹಿಂದಿನ ಸ್ವಾಮಿಗಳು ಗುರುಬಸವೇಶ್ವರ ಶಿಕ್ಷಣ ಸಂಸ್ಥೆಗೆ ಸುಮಾರು 15 ಎಕರೆ ಜಾಗ ನೀಡಿದ್ದರು. ಆದರೆ ಹೊಸದಾಗೀ ಪೀಠ ಅಲಂಕರಿಸಿದ ಶಿವಾನಂದ ಸ್ವಾಮಿ ಆ ಜಾಗವನ್ನು ತಮಗೆ ನೀಡುವಂತೆ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಿಗೆ ಮನವಿ ಮಾಡಿದರು. ಆದರೆ ಅದನ್ನು ನೀಡಲು ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ನಿರಾಕರಿಸಿದ್ದರು. ಆಗ ಬಲವಂತವಾಗಿ ಛಾಪಾ ಕಾಗದದ ಮೇಲೆ ತಮ್ಮ ಸಹಿ ಹಾಕಿಕೊಂಡಿದ್ದಾರೆಂದು ಆರೋಪಿಸಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಕೋರ್ಟ್ನಲ್ಲಿ ಪ್ರಕರಣ ವಿಚಾರಣೆ ಹಂತದಲ್ಲಿರುವಾಗ ನ್ಯಾ. ಶರಣಪ್ಪ ಸಜ್ಜನ್, ನಿಮ್ಮ ಪರ ತೀರ್ಪು ನೀಡಬೇಕಾದರೆ ರು. 5 ಲಕ್ಷ ನೀಡುವಂತೆ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಿಗೆ ಬೇಡಿಕೆ ಇಟ್ಟಿದ್ದರು. ವಿಜಿಲೆನ್ಸ್ ರಿಜಿಸ್ಚ್ರಾರ್ ಹಾಗೂ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಗೆ ಪ್ರಕರಣ ಸಂಬಂಧಿಸಿ ಅಧ್ಯಕ್ಷರು ಪತ್ರ ಬರೆದರು . ಆ ಬಳಿಕ ಹೈಕೋರ್ಟ್ ವಿಚಕ್ಷಣಾ ವಿಭಾಗದ ರಿಜಿಸ್ಟ್ರಾರ್ ಸೂಚನೆಯಂತೆ ದೂರುದಾರರು ನಡೆದುಕೊಂಡರು. ಆ ಪ್ರಕಾರ ಶಿಕ್ಷಣ ಸಂಸ್ಥೆ ಅಧ್ಯಕ್ಷರ ಮಗ ಕೀರ್ತಿ ರಾಜ್ ಮುಂಗಡವಾಗಿ ರು. 1 ಲಕ್ಷ ಹಣ ನೀಡಿದರು. ಇದಾದ ಕೆಲವೇ ನಿಮಿಷದಲ್ಲಿ ವಿಜಿಲೆನ್ಸ್ನ 10 ಜನರ ತಂಡ ಆ ನ್ಯಾಯಾಧೀಶನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದೆ.
Advertisement