ಮೈಸೂರು: ಕರ್ನಾಟಕ ಲೋಕಸೇವಾ ಆಯೋಗಕ್ಕೆ ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್. ಸುದರ್ಶನ ಅವರನ್ನು ನೇಮಿಸುವಂತೆ ರಾಜ್ಯಪಾಲರಿಗೆ ಶಿಫಾರಸು ಮಾಡಿರುವುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮರ್ಥಿಸಿಕೊಂಡಿದ್ದಾರೆ.
ಇಲ್ಲಿ ಮಾತನಾಡಿದ ಅವರು, ದುರ್ಗಪ್ಪ, ಬಿ.ಎಲ್.ಗೌಡ, ದೊಡ್ಡೇಗೌಡ, ಡಾ.ಕೃಷ್ಣ ಅವರನ್ನು ಈ ಹಿಂದೆ ಅಧ್ಯಕ್ಷರಾಗಿ ನೇಮಿಸಲಾಗಿದೆ. ಅಧಿಕಾರೇತರರನ್ನು ಕೆಪಿಎಸ್ಸಿಗೆ ಅಧ್ಯಕ್ಷರನ್ನಾಗಿ ನೇಮಿಸಲು ಅವಕಾಶ ಇರುವಾಗ ನೇಮಿಸಿದರೆ ತಪ್ಪೇನು? ಎಂದು ಕೇಳಿದರು.
ಕೆಪಿಎಸ್ಸಿ ಸದಸ್ಯ ಸ್ಥಾನಕ್ಕೆ ಶಿಫಾರಸು ಮಾಡಿರುವ ಇಬ್ಬರ ಬಗ್ಗೆ ಕೇಳಿ ಬಂದಿರುವ ಆರೋಪಗಳ ಬಗ್ಗೆ ಅವರ ಗಮನ ಸೆಳೆದಾಗ, ಪ್ರತಿಕ್ರಿಯಿಸಲಿಲ್ಲ. ಪಂಜಾಬ್ನಲ್ಲಿ ಮಾಜಿ ಶಾಸಕರೊಬ್ಬರನ್ನು ಲೋಕಸೇವಾ ಆಯೋಗದ ಅಧ್ಯಕ್ಷರಾಗಿ ನೇಮಕ ಮಾಡಿದ್ದನ್ನು ನ್ಯಾಯಾಲಯ ರದ್ದು ಪಡಿಸಿರುವ ಪ್ರಕರಣವನ್ನು ಅವರ ಗಮನಕ್ಕೆ ತಂದಾಗ, ಯಾವ ಸಂದರ್ಭದಲ್ಲಿ ನೇಮಕ ರದ್ದಾಗಿದೆ ಎಂಬುದನ್ನು ಪರಿಶೀಲಿಸುತ್ತೇನೆ ಎಂದು ಉತ್ತರಿಸಿದರು.
ಬಹಿರಂಗ ಚರ್ಚೆ ಇಲ್ಲ: ಸಂಪುಟ ಪುನಾರಚನೆ ಬಗ್ಗೆ ಬಹಿರಂಗ ಚರ್ಚೆ ಇಲ್ಲ ಎಂದ ಅವರು ನಿಗಮ-ಮಂಡಳಿಗಳಿಗೆ ಅಧ್ಯಕ್ಷರ ನೇಮಕ ಮುಗಿದಿದೆ. ನಿರ್ದೇಶಕರು ಹಾಗೂ ಸದಸ್ಯರ ನಾಮಕರಣ ಬಾಕಿ ಇದ್ದು, ಮುಂದಿನ ತಿಂಗಳ ಮೊದಲ ವಾರ ಪಟ್ಟಿ ಪ್ರಕಟಿಸಲಾಗುವುದು ಎಂದರು.
ಮೇಕೆದಾಟು ಅಣೆಕಟ್ಟೆ ನಿರ್ಮಾಣ
ಕಾವೇರಿ ನದಿಗೆ ಅಡ್ಡಲಾಗಿ ಮೇಕೆದಾಟು ಬಳಿ ಅಣೆಕಟ್ಟೆ ನಿರ್ಮಿಸಲಾಗುವುದು. ಈ ಸಂಬಂಧ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲಾಗುತ್ತದೆ. ತಮಿಳುನಾಡಿನ ಆಕ್ಷೇಪದ ಹಿನ್ನೆಲೆಯಲ್ಲಿ ಯೋಜನೆ ಕಾರ್ಯಗತಕ್ಕೆ ಮುನ್ನ ಕಾನೂನು ತೊಡಕುಗಳನ್ನು ನಿವಾರಿಸಿಕೊಳ್ಳಲಾಗುವುದು ಎಂದು ಹೇಳಿದರು.
ಅಗತ್ಯವಿರುವ ಎಲ್ಲೆಡೆ ನದಿಗಳಿಂದ ಕೆರೆಕಟ್ಟೆಗಳಿಗೆ ನೀರು ತುಂಬಿಸುವ ಕಾರ್ಯ ಕೈಗೊಳ್ಳಲಾಗಿದೆ. ಇದು ಕುಡಿಯುವ ನೀರು ಮತ್ತು ಅಂತರ್ಜಲ ವೃದ್ಧಿಗೆ ಮಾತ್ರ. ಈ ನೀರನ್ನು ಕೃಷಿಗೆ ಬಳಸುವಂತಿಲ್ಲ. ಕಪಿಲಾ ನದಿಯಿಂದ ಚಾಮರಾಜನಗರ ಜಿಲ್ಲೆಯ 20 ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ.
ಹೇಮಾವತಿ ನದಿಯಿಂದ ತುಮಕೂರು ಜಿಲ್ಲೆಯ ಕೆರೆಕಟ್ಟೆಗಳನ್ನು ತುಂಬಿಸಲಾಗುತ್ತಿದೆ. ಎಂದು ತಿಳಿಸಿದರು. ಬೆಂಗಳೂರಿನ ಅರ್ಕಾವತಿ ಬಡಾವಣೆ ಡಿನೋಟಿಫಿಕೇಷನ್ ಪ್ರಕರಣದಲ್ಲಿ ಕಾಂಗ್ರೆಸ್ಸಿಗರ್ಯಾರೂ ದೂರು ನೀಡಿಲ್ಲ. ಬಿಜೆಪಿಯವರು ದೂರು ನೀಡಿಕೊಂಡು ಓಡಾಡುತ್ತಿದ್ದಾರೆ ಎಂದು ಗೇಲಿ ಮಾಡಿದರು.
Advertisement