ಬೆಂಗಳೂರು: ಚರ್ಚ್ ಸ್ಟ್ರೀಟ್ನಲ್ಲಿ ಸಂಭವಿಸಿದ ಬಾಂಬ್ ಸ್ಫೋಟದಿಂದ ಹೊಸ ವರ್ಷಾಚರಣೆ ಸಂದರ್ಭದಲ್ಲಿ ರೆಸ್ಟೋರೆಂಟ್ ಹಾಗೂ ಇತರೆ ವಾಣಿಜ್ಯ ವಹಿವಾಟಿಗೆ ಸುಮಾರು ರೂ.100 ಕೋಟಿ ನಷ್ಟ ಉಂಟಾಗುವ ಸಾಧ್ಯತೆಯಿದೆ.
ಸ್ಫೋಟ ಸಂಭವಿಸಿರುವುದರಿಂದ ಎಂ.ಜಿ.ರಸ್ತೆ, ಬ್ರಿಗೆಡ್ ರಸ್ತೆ, ಚರ್ಚ್ ಸ್ಟ್ರೀಟ್ ಸುತ್ತಮುತ್ತಲಿನ ವಾಣಿಜ್ಯ ಕೇಂದ್ರಗಳಿಗೆ ಬರುವವರ ಸಂಖ್ಯೆ ಈಗಾಗಲೇ ಇಳಿಮುಖವಾಗಿದೆ. ಅಲ್ಲದೇ ಚರ್ಚ್ ಸ್ಟ್ರೀಟ್ನಲ್ಲಿ 100 ಮೀಟರ್ ಮಾರ್ಗವನ್ನು ಮುಚ್ಚಲಾಗಿದೆ.
ಹೀಗಾಗಿ ಇಲ್ಲಿ ನಡೆಯಲಿದ್ದ ಪಾರ್ಟಿಗಳು ರದ್ದುಗೊಳ್ಳುವ ಸಾಧ್ಯತೆ ಇದೆ ಎಂದು ಹೊಟೇಲ್ ಮತ್ತು ರೆಸ್ಟೋರೆಂಟ್ ಮಾಲೀಕರು ಆತಂಕಗೊಂಡಿದ್ದಾರೆ. ಎಷ್ಟೇ ಸುರಕ್ಷತೆ ಇದೆ ಎಂದರೂ ಸಾರ್ವಜನಿಕರಲ್ಲಿ ಆತಂಕ ಇದ್ದೇ ಇರುತ್ತದೆ.
ಹೀಗಾಗಿ, ಗ್ರಾಹಕರು ಬಾರದೆ ಇದ್ದಾಗ ವಹಿವಾಟಿನ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುವುದರಲ್ಲಿ ಸಂಶಯವಿಲ್ಲ. ಸಾರ್ವಜನಿಕರು ಎಂ.ಜಿ.ರಸ್ತೆ ಬದಲು ಬೇಕೆ ಕಡೆ ಹೋಗಲು ತಮ್ಮ ಮನಸ್ಸು ಬದಲಿಸಬಹುದು ಎಂಬುದು ವ್ಯಾಪಾರಿಗಳ ಅನಿಸಿಕೆ.
ಅಲ್ಲದೇ, ಪೊಲೀಸರು ವರ್ಷಾಚರಣೆಗಾಗಿ ಮಿತಿಯನ್ನು 1 ಗಂಟೆ ಕಡಿತಗೊಳಿಸಿರುವುದರಿಂದ ರೆಸ್ಟೋರೆಂಟ್ ಸೇರಿ ಇತರ ವಾಣಿಜ್ಯ ಕೇಂದ್ರಗಳ ಆದಾಯ ಕುಂಠಿತವಾಗಲಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.
Advertisement