ಬೆಂಗಳೂರು: ಕೆಲ ದಿನಗಳ ಹಿಂದೆ ರಾಜರಾಜೇಶ್ವರಿನಗರದಲ್ಲಿ ಸ್ಥಾಪನೆಯಾಗಬೇಕಿದ್ದ ಖ್ಯಾತ ನಟ, ದಿವಂಗತ ಡಾ. ರಾಜ್ ಕುಮಾರ್ ವಿಗ್ರಹಕ್ಕೆ ಬೆಂಕಿ ಹಚ್ಚಿ ವಿರೂಪಗೊಳಿಸಿದ್ದ ಪ್ರಕರಣ ರಾಜ್ ಬೆಂಬಲಿಗರು ಮತ್ತು ಕನ್ನಡ ಹೋರಾಟಗಾರರನ್ನು ಕೆರಳಿಸಿತ್ತು. ಈಗ ಈ ಪ್ರಕರಣದಲ್ಲಿ ಐವರು ಆಟೋ ಚಾಲಕರನ್ನು ಪೊಲೀಸರು ಬಂಧಿಸಿದ್ದಾರೆ.
ಸ್ಥಳೀಯರ ವದಂತಿಯಂತೆ, ರಾಜ್ ಕುಮಾರ್ ಅವರ ಈ ಪ್ರತಿಮೆ ಸ್ಥಾಪಿಸಬೇಕೆಂದಿದ್ದ ಜಾಗದಲ್ಲಿ, ಈ ಹಿಂದೆ ಕನ್ನಡದ ಇನ್ನೊಬ್ಬ ಪ್ರತಿಭಾವಂತ ನಟ ನಿರ್ದೇಶಕ ಶಂಕರ್ ನಾಗ್ ಅವರ ಪ್ರತಿಮೆಯನ್ನು ಸ್ಥಾಪಿಸಲು ನಿರ್ಧರಿಸಲಾಗಿತ್ತು, ಆದರೆ ಇದ್ದಕ್ಕಿದ್ದಂತೆ ರಾಜ್ ಅವರ ಪ್ರತಿಮೆ ಸ್ಥಾಪಿಸಲು ಮುಂದಾದ್ದರಿಂದ, ಶಂಕರ್ ನಾಗ್ ಅಭಿಮಾನಿಗಳು ಈ ಕೆಲಸ ಮಾಡಿದ್ದಾರೆ ಎನ್ನಲಾಗಿತ್ತು. ಈ ವದಂತಿಯ ಜಾಡು ಹಿಡಿದು ತನಿಖೆ ನಡೆಸಿದ ಪೊಲೀಸರು ಶಂಕರ್ ನಾಗ್ ಅಭಿಮಾನಿಗಳು ಎಂದು ಹೇಳಿಕೊಳ್ಳುವ ಐವರು ಆಟೊ ಚಾಲಕರನ್ನು ಬಂಧಿಸಿ ತನಿಖೆ ನಡೆಸಿದ್ದಾರೆ. ಸತ್ಯಾಸತ್ಯತೆ ಇನ್ನೂ ಹೊರಬೀಳಬೇಕಾಗಿದೆ.
Advertisement