ಸೃಜನಶೀಲ ಕಲ್ಪನೆಯಿಂದ ಪುರಾಣ ಕಥೆಗಳು ಹುಟ್ಟುತ್ತವೆ
ಬೆಂಗಳೂರು: ಇತಿಹಾಸವನ್ನು ಬೋಧಿಸುವಾಗ ಸಂದರ್ಭ-ಸನ್ನಿವೇಶಗಳನ್ನು ಅರಿತು ಪಾಠ ಮಾಡಬೇಕು ಎಂದು ಕರ್ನಾಟಕ ನಾಟಕ ಅಕಾಡೆಮಿಯ ಮಾಜಿ ಅಧ್ಯಕ್ಷ ಮರುಳಸಿದ್ಧಪ್ಪ ಹೇಳಿದ್ದಾರೆ.
ಭಾನುವಾರ ನಗರದಲ್ಲಿ ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ (ಎ ಐ ಎಸ್ ಇ ಸಿ), ಕೇಂದ್ರ ಸರ್ಕಾರ ಪಠ್ಯ ಪುಸ್ತಕಗಳಲ್ಲಿ ತರ್ಕರಹಿತ ಮತ್ತಿ ತಿರುಚಿದ ಇತಿಹಾಸವನ್ನು ಸೇರಿಸುತ್ತಿದೆ ಎಂದು ಆಪಾದಿಸಿ, ಇದರ ವಿರುದ್ಧದ ಆಯೋಜಿಸಿದ್ದ ಪ್ರತಿಭಟನಾ ಸಮಾವೇಶದಲ್ಲಿ ಅವರು ಮಾತನಾಡಿದರು.
"ಉದಾಹರಣೆಗೆ, ವಸಾಹುತುಶಾಹಿಯಿಂದ ಆತ್ಮವಿಶ್ವಾಸ ಕಳೆದುಕೊಂಡು ನರಳುತ್ತಿದ್ದ ಭಾರತೀಯರಿಗೆ ವಿಶ್ವಾಸ ತುಂಬಲಷ್ಟೆ ವಿವೇಕಾನಂದರು ಭಾರತದ ಪ್ರಾಚೀನ ಸಾಧನೆಗಳನ್ನು ವೈಭವೀಕರಿಸಿದ್ದು. ಆದರೆ ಇಂದು ಸಾಕಷ್ಟು ಬದಲಾವಣೆಗಳಾಗಿವೆ. ಪುರಾಣ ಕಥೆಗಳನ್ನು ಹೇಳಿ ಇತಿಹಾಸವನ್ನು ವೈಭವೀಕರಿಸುವುದು ಸ್ವಪ್ರತಿಷ್ಟೆಯಲ್ಲಿ ಮುಳುಗಿದಂತೆ" ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಇತಿಹಾಸ ಮತ್ತು ಪುರಾಣದ ನಡುವಿನ ವ್ಯತ್ಯಾಸವನ್ನು ವಿಶದವಾಗಿ ಬಿಚ್ಚಿಟ್ಟ ಬರಹಗಾರ ಪ್ರೊ ಪಿ ವಿ ನಾರಾಯಣ್ "ಕವಿಗಳ ಸೃಜನಶೀಲ ಕಲ್ಪನೆಯೇ ಪುರಾಣ. ಇವುಗಳು ಯಾವಾಗಲೂ ಅತಿಶಯೋಕ್ತಿಯಾಗಿಯೆ ಬಳಕೆಯಾಗಿವೆ. ಆದುದರಿಂದಲೆ ಪ್ರಾಚೀನ ಕವಿಗಳು ವೈಭವಯುತ ಮಹಾ ಕಾವ್ಯಗಳನ್ನು ರಚಿಸಿದ್ದು ಇತಿಹಾಸ ಬೋಧಿಸುವಾಗ, ತನ್ನ ನಂಬಿಕೆಗಳನ್ನು ಬದಿಗಿಟ್ಟು, ತರ್ಕ ಮತ್ತು ವಿಚಾರಪರತೆಗೆ ಬದ್ಧರಾಗಿರಬೇಕು" ಎಂದಿದ್ದಾರೆ.
ಸಮಾವೇಶದಲ್ಲಿ ಪಠ್ಯ ಸಮಿತಿಯ ಮಾಜಿ ಮುಖ್ಯಸ್ಥ ಎಸ್ ಬಾಲಚಂದ್ರ ರಾವ್, ಎ ಐ ಎಸ್ ಇ ಸಿ ನ ಅಧ್ಯಕ್ಷ ಅಲ್ಲಮ ಪ್ರಭು ಬೆಟ್ಟದೂರು ಮತ್ತಿತರು ಉಪಸ್ಥಿತರಿದ್ದರು.