ಪ್ರಿಂಟಿಂಗ್ ಗುತ್ತಿಗೆದಾರ ಕೊಲೆ

ಬನಶಂಕರಿ 17ನೇ ಮುಖ್ಯರಸ್ತೆಯಲ್ಲಿ ಪ್ರಿಂಟಿಂಗ್ ಗುತ್ತಿಗೆದಾರ ಕಿರಣ್ ಕುಮಾರ್(35) ಎಂಬುವರು...
ಪ್ರಿಂಟಿಂಗ್ ಗುತ್ತಿಗೆದಾರ ಕೊಲೆ

ಬೆಂಗಳೂರು: ಬನಶಂಕರಿ 17ನೇ ಮುಖ್ಯರಸ್ತೆಯಲ್ಲಿ ಪ್ರಿಂಟಿಂಗ್ ಗುತ್ತಿಗೆದಾರ ಕಿರಣ್ ಕುಮಾರ್(35) ಎಂಬುವರು ತಮ್ಮ ಮನೆಯಲ್ಲೇ ಅನುಮಾನಾಸ್ಪದವಾಗಿ ಕೊಲೆಯಾಗಿದ್ದಾರೆ.

ಪತ್ನಿ ಹಾಗೂ ಭಾವಮೈದುನೊಂದಿಗೆ ವಾಸವಿದ್ದ ಕಿರಣ್, ಪ್ರಿಂಟಿಂಗ್ ಗುತ್ತಿಗೆ ಜತೆಗೆ ಬಡ್ಡಿ ವ್ಯವಹಾರ ನಡೆಸುತ್ತಿದ್ದರು. ಬುಧವಾರ ಬೆಳಗ್ಗೆ 8.45ರ ಸುಮಾರಿಗೆ ಅಪರಿಚಿತ ದುಷ್ಕರ್ಮಿಗಳು ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ ಎಂದು ಆತನ ಪತ್ನಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಪೊಲೀಸರ ವಿಚಾರಣೆ ವೇಳೆ ಪತ್ನಿ ಹೇಳಿಕೆ ಅನುಮಾನಾಸ್ಪದವಾಗಿದೆ. ತಾನು ಮನೆಯಲ್ಲಿ ಸ್ನಾನ ಮಾಡುತ್ತಿದ್ದು, ಸಹೋದರ ಮನೆಯಲ್ಲಿ ಮಲಗಿದ್ದ ವೇಳೆ ದುಷ್ಕರ್ಮಿಗಳು ಬಂದು ಕೊಲೆ ಮಾಡಿ ಹೋಗಿದ್ದಾರೆ ಎಂದು ಹೇಳಿದ್ದಾರೆ. ಸ್ನಾನ ಮುಗಿಸಿಕೊಂಡು ಹೊರಗೆ ಬಂದಾಗ ಕಿರಣ್ ರಕ್ತದ ಮಡುವಿನಲ್ಲಿ ಬಿದ್ದಿದ್ದರು ಎಂದು ಹೇಳಿಕೆ ನೀಡಿದ್ದಾರೆ.

ಆದರೆ, ಎಷ್ಟು ಜನ ಬಂದಿದ್ದರೂ ಯಾವುದರಿಂದ ಹಲ್ಲೆ ನಡೆಸಿದ್ದಾರೆ? ಕಿರುಚಾಟ ಕೇಳಲಿಲ್ಲವೇ ಎನ್ನುವ ಪೊಲೀಸರು ಪ್ರಶ್ನೆಗೆ ಉತ್ತರಿಸಿಲ್ಲ. ಮನೆಯಲ್ಲೇ ಮಲಗಿದ್ದ ಸಹೋದರನಿಗೂ ಹಲ್ಲೆ ವೇಳೆ ಕಿರುಚಾಟ ಕೇಳಿಲ್ಲ ಎಂದು ಹೇಳಿದ್ದಾರೆ.

ಹೀಗಾಗಿ ಪ್ರಕರಣ ಅನುಮಾನಾಸ್ಪದವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಅಂತ್ಯಕ್ರಿಯೆ ಮುಗಿದ ಬಳಿಕ ಕುಟುಂಬ ಸದಸ್ಯರನ್ನು ಸೂಕ್ತವಾಗಿ ವಿಚಾರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com