ಬೆಳಗಾವಿಯಲ್ಲಿ 2 ಕಚ್ಚಾ ಬಾಂಬ್ ಪತ್ತೆ
ಬೆಳಗಾವಿ: ಮಡಿಗುಂಜಿ ವ್ಯಾಪ್ತಿಯ ರೈಲ್ವೆ ಹಳಿಯಲ್ಲಿ ಇಂದು 2 ಕಚ್ಚಾ ಬಾಂಬ್ಗಳು ಪತ್ತೆಯಾಗಿವೆ. ಕಚ್ಚಾ ಬಾಂಬ್ ಪತ್ತೆಯಾದ ಸುದ್ದಿ ತಿಳಿದೊಡನೆ ಸ್ಥಳಕ್ಕೆ ಧಾವಿಸಿದ, ಬಾಂಬ್ ನಿಷ್ಕ್ರಿಯ ದಳ ಸಿಬ್ಬಂದಿ ಕಚ್ಚಾ ಬಾಂಬ್ಗಳನ್ನು ನಿಷ್ಕೃಯಗೊಳಿಸಿದರು. 2 ಕಚ್ಚಾ ಬಾಂಬ್ಗಳ ಪೈಕಿ ಒಂದು ಜೀವಂತಾ ಕಚ್ಚಾ ಬಾಂಬ್ಆಗಿದ್ದು, ಅದನ್ನು ನಿಷ್ಕ್ರಿಯಗೊಳಿಸುವಲ್ಲಿ ಯಶಸ್ವಿಯಾದರು.
ಈ ಮಾರ್ಗವು ಕೊಂಕಣ ರೈಲ್ವೆ ವಲಯಕ್ಕೆ ಸೇರಿದ್ದಾಗಿದ್ದು, ಗೋವಾ-ಕರ್ನಾಟಕ-ಮಹಾರಾಷ್ಟ್ರ ಜಂಕ್ಷನ್ ಇದಾಗಿದೆ. ಎಂದಿನಂತೆ ಕೆಲಸಕ್ಕೆ ಹಾಜರಾಗುತ್ತಿದ್ದ ಗೇಟ್ ಕೀಪರ್ ಹನುಮಂತಗೌಡ ಇಂದು ಬೆಳಿಗ್ಗೆ ರೈಲ್ವೆ ಹಳಿ ಬಳಿ 2 ಕಚ್ಚಾ ಬಾಂಬ್ಗಳು ಇರುವುದನ್ನು ಪತ್ತೆಹಚ್ಚಿದರು. ದೂರದ ರೈಲ್ವೆ ಗಾರ್ಡ್ ರೂಂಗೆ ಅರ್ಧತಾಸಿನೊಳಗಾಗಿ ತೆರಳಿದ ಹನುಮಂತಗೌಡ ಬಾಂಬ್ಗಳು ಇರುವ ಸುದ್ದಿಯನ್ನು ರೈಲ್ವೆ ಅಧಿಕಾರಿಗಳಿಗೆ ಮುಟ್ಟಿಸಿದರು.
ಹನುಮಂತಗೌಡನ ಸಮಯಪ್ರಜ್ಞೆಯಿಂದಾಗಿ ಆ ಮಾರ್ಗವಾಗಿ ಸಂಚರಿಸಬೇಕಾಗಿದ್ದ 2 ರೈಲುಗಳನ್ನು ಕೂಡಲೇ ಸ್ಥಗಿತಗೊಳಿಸಲಾಯಿತು. ಇದೇ ಸಂದರ್ಭದಲ್ಲಿ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿಗೆ ವಿಷಯ ಮುಟ್ಟಿಸಲಾಯಿತು. ಏಥೇನ್ ಮಧ್ಯೆ ಕೆಜೆ ಜಾರ್ಜ್ ಅವರ ಖಾಸಗಿ ಕಾರ್ಯಕ್ರಮವೊಂದಕ್ಕಾಗಿ ಬಾಂಬ್ ನಿಷ್ಕ್ರಿಯ ಸಿಬ್ಬಂದಿಯನ್ನು ನೇಮಿಸಲಾಗಿತ್ತು. ಈ ಕಾರ್ಯಕ್ರಮವನ್ನು ಮೊಟಕುಗೊಳಿಸಿ ಸ್ಥಳಕ್ಕೆ ಧಾವಿಸಿದ ಬಾಂಬ್ ನಿಷ್ಕ್ರಿಯ ದಳ ಸಿಬ್ಬಂದಿ, ಸಜೀವ ಬಾಂಬ್ಗಳನ್ನು ನಿಷ್ಕ್ರಿಯಗೊಳಿಸುವಲ್ಲಿ ಯಶಸ್ವಿಯಾದರು.
ಈ ಕುರಿತು ಬೆಳಗಾವಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಹಿರಿಯ ಪೊಲೀಸ್ ಅಧಿಕಾರಿಗಳು, ಇದೊಂದು ಪೂರ್ವಯೋಜಿತ ಸಂಚಾಗಿದ್ದು, ಇದು ಭಯೋತ್ಪಾದಕರ ಕೈವಾಡವೇ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಕಚ್ಚಾ ಬಾಂಬ್ ಪತ್ತೆ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಬೆಳಗಾವಿ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಗೇಟ್ ಕೀಪರ್ ಹನುಮಂತಗೌಡನ ಸಮಯಪ್ರಜ್ಞೆಯಿಂದಾಗಿ ಸಂಭವಿಸಬಹುದಾದ ದೊಡ್ಡ ಅನಾಹುತ ತಪ್ಪಿದಂತಾಗಿದೆ ಎಂದು ಹನುಮಂತಗೌಡರನ್ನು ಶ್ಲಾಘಿಸಿದರಲ್ಲದೆ, ಅವರ ಹೆಸರನ್ನು ಪ್ರಶಸ್ತಿಗೆ ಶಿಫಾರಸು ಮಾಡಲಾಗುವುದು ಎಂದು ವಿವರಿಸಿದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ