ಬೆಂಗಳೂರು: ಸಮಾಜದ ಶಾಂತಿ ಮತ್ತು ನೆಮ್ಮದಿಗೆ ಬಹುದೊಡ್ಡ ಸವಾಲಾಗಿರುವ `ಆತಂಕವಾದ' ಮಟ್ಟಹಾಕಲು ಜೈನ ಧರ್ಮ ಸೇರಿದಂತೆ ಎಲ್ಲ ಧರ್ಮಗಳು ಪ್ರತಿಪಾದಿಸಿದ ಶಾಂತಿ ಮತ್ತು ಅಹಿಂಸೆಯ ಆಚರಣೆಯೇ ಪರಿಹಾರ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅಭಿಪ್ರಾಯಪಟ್ಟರು.
ಭಗವಾನ್ ಮಹಾವೀರರ ಜಯಂತಿ ಅಂಗವಾಗಿ ಗುರುವಾರ ಜೈನ ಯುವ ಸಂಘಟನೆ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಆಯೋಜಿಸಿದ್ದ ಮಹಾವೀರರ ಜನ್ಮ ಕಲ್ಯಾಣ ಮಹೋತ್ಸವದಲ್ಲಿ ಭಾಗವಿಹಿಸಿ ಮಾತನಾಡಿದರು. ಭಾರತ ಮಾತ್ರವಲ್ಲ ವಿಶ್ವ ಸಮುದಾಯವೇ ಇಂದು ಆತಂಕವಾದದ ವಿರುದ್ಧನಿಂತಿದೆ. ಆದರೆ, ಇದನ್ನು ಸೈನ್ಯ ಮತ್ತು ಬಂದೂಕಿನ ಮೂಲಕ ಮಟ್ಟ ಹಾಕುವ ಕ್ರಮ ತಾತ್ಕಾಲಿಕ. ಶಾಸ್ವತವಾಗಿ ಇದನ್ನು ಬುಡ ಸಮೇತ ನಾಶ ಮಾಡಬೇಕಾದರೆ, ಜೈನ ಧರ್ಮ ಪ್ರತಿಪಾದಿಸಿದಂತೆ ಅಹಿಂಸೆಯ ಆಚರಣೆಯ ಮನೋಧರ್ಮವೇ ಪರಿಹಾರ ಎಂದರು.
ಸಮಾರಂಭ ಉದ್ಘಾಟಿಸಿ ಮಾತನಾಡಿದ ಮುಖ್ಯಮಂರ್ತಿ ಸಿದ್ಧರಾಮಯ್ಯ, ರಾಜಕಾರಣದ ಮೂಲಕ ಸಮಾಜವನ್ನು ಒಡೆಯುವ ಕೆಲಸ ಬೇಡ. ಬದಲಿಗೆ, ಸಮಾಜವನ್ನು ಬೆಸೆಯುವ ಕೆಲಸ ಆಗಬೇಕು. ನಕ್ಸಲ್ವಾದ, ಉಗ್ರವಾದ ಗಳಿಂದ ಸಮಾಜದಲ್ಲಿ ಶಾಂತಿ, ನೆಮ್ಮದಿ ತರಲು ಅಸಾಧ್ಯ. ಎಲ್ಲ ಧರ್ಮಗಳು ಹೇಳಿದಂತೆ ಪರಸ್ಪರ ಪ್ರೀತಿ, ಸ್ನೇಹ, ವಿಶ್ವಾಸ ಸಹಬಾಳ್ವೆ ಮತ್ತು ಅಹಿಂಸೆಯ ಆಚರಣೆಯ ಮೂಲಕವೇ ಸಮಾಜದಲ್ಲಿ ಶಾಂತಿ, ನೆಮ್ಮದಿ ತರಲ ಸಾಧ್ಯ. ಜೈನರ ರಕ್ಷಣೆ ಮತ್ತು ಅಭಿವೃದ್ಧಿಗೆ ತಮ್ಮ ಸರ್ಕಾರ ಎಲ್ಲ ರೀತಿಯ ನೆರವು ನೀಡಲಿದೆ. ಸೂಕ್ತ ಪ್ರಸ್ತಾವ ಸಲ್ಲಿಸಿದರೆ, ಜೈನ ಯುವ ಸಂಘಟನೆಗೆ ಸರ್ಕಾರದಿಂದ ತ್ವರಿತವಾಗಿ ಬಿಡಿಎ ಮೂಲಕ ನಿವೇಶನ ಮಂಜೂರು ಮಾಡಲಾಗುವುದು. ಜತೆಗೆ, ತಮ್ಮ ಸಂಘಟನೆಯ ಎಲ್ಲ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದರು.
ವೇದಿಕೆಯಲ್ಲಿ ಕೇಂದ್ರ ಸಚಿವ ಅನಂತಕುಮಾರ್, ಸಚಿವರಾದ ದಿನೇಶ್ ಗುಂಡೂರಾವ್ ಹಾಗೂ ಅಭಯಚಂದ್ರ ಜೈನ್, ರಾಜಸ್ತಾನ ಮಾಜಿ ಗೃಹ ಸಚಿವ ಗುಲಾಬ್ ಚಾಂದ್ ಜೈನ್, ರಾಜಸ್ತಾನ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸಚಿನ್ ಪೈಲಟ್, ಸಂಸದ ಪಿ.ಸಿ.ಮೋಹನ್, ವಿಧಾನ ಪರಿಷತ್ ಸದಸ್ಯ ಲೆಹರ್ ಸಿಂಗ್, ಜೈನ ಯುವ ಸಂಘಟನೆಯ ಅಧ್ಯಕ್ಷ ರಮೇಶ್ ದೋಕಾ, ಕಾರ್ಯದರ್ಶಿ ಸುರೇಶ್ ಮಾಂಡೋತ್, ಸಾಮಾಜಿಕ ಕಾರ್ಯಕರ್ತ ಉತ್ತಮ್ ಚಂದ್, ತೇರಾಪಂತ್ ಸಭಾದ ಅಧ್ಯಕ್ಷ ಗೌತಮ್ ಕೊಠಾರಿ ಹಾಜರಿದ್ದರು. ಅಶೋಕರತ್ನ ಸುರೀಶ್ವರ್ಜಿ ಮಹಾರಾಜ್, ಚಂದ್ರಯಶ್ ಸುರೀಶ್ವರ್ಜಿ ಮಹಾರಾಜ್, ಡಾ.ಅರುಣ್ ವಿಜಯ್ ಮಹಾರಾಜ್, ಹನ್ಸ್ ರಾಜ್ಜಿ ಮಹಾರಾಜ್, ಸಾಧ್ವಿ ಕಂಚನ್ ಪ್ರಭಾಜೀ ಸೇರಿದಂತೆ ಅನೇಕ ಜೈನಮುನಿಗಳು ಸಮಾರಂಭದಲ್ಲಿ ಸಾನಿಧ್ಯ ವಹಿಸಿದ್ದರು.
Advertisement