ತುಮಕೂರು: ರಾಜ್ಯ ಲೋಕಾಯುಕ್ತರು ತುಮಕೂರಿನಲ್ಲಿ ಮಂಗಳವಾರ ಸಾರ್ವಜನಿಕರ ಅಹವಾಲು ಸ್ವೀಕರಿಸುವ ವೇಳೆ ಲೋಕಸಭೆ ಮಾಜಿ ಉಪಸಭಾಧ್ಯಕ್ಷ ದಿ.ಎಸ್.ಮಲ್ಲಿಕಾರ್ಜುನಯ್ಯ ಅವರ ಕುಟುಂಬದವರ ಆಸ್ತಿ ವಿವಾದ ಗಮನ ಸೆಳೆಯಿತು.
ಮಲ್ಲಿಕಾರ್ಜುನಯ್ಯ ಅವರ ಪತ್ನಿ ಜಯದೇವಮ್ಮ ತಮ್ಮ ಇಬ್ಬರು ಅಂಧ ಮಕ್ಕಳು, ಮತ್ತೋರ್ವ ಮಗಳು, ಅಳಿಯ ಟೂಡಾ ಸದಸ್ಯ ನಿರಂಜನ್ ಅವರೊಂದಿಗೆ ಕಲಾಕ್ಷೇತ್ರಕ್ಕೆ ಆಗಮಿಸಿ, `ತಮ್ಮ ಪತಿ ನಿಧನರಾಗಿ ಒಂದು ವರ್ಷ ಕಳೆದಿದೆ. ನನ್ನ ಮತ್ತು ನನ್ನ ಮಕ್ಕಳ ಸುಪರ್ದಿಗೆ ಸೇರಿದ ಜಮೀನಿನ ಸುಪರ್ದಿಗೆ ಸೊಸೆ ಭಾರತಿ ಅವಕಾಶ ಮಾಡಿಕೊಡುತ್ತಿಲ್ಲ. ಪ್ರಶ್ನಿಸಿದರೆ ದೌರ್ಜನ್ಯವೆಸಗುತ್ತಿದ್ದಾರೆ. ಹೆಬ್ಬೂರು, ಕ್ಯಾತ್ಸಂದ್ರ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದರೂ ನ್ಯಾಯ ಸಿಕ್ಕಿಲ್ಲ' ಎಂದು ತಮ್ಮ ಅಳಲು ತೋಡಿಕೊಂಡರು.
ಮಲ್ಲಿಕಾರ್ಜುನಯ್ಯನವರ ಅಳಿಯ ಹಾಗೂ ವಕೀಲ ಟಿ.ಎಸ್. ನಿರಂಜನ್ ಮಾತನಾಡಿ, ಮಲ್ಲಿಕಾರ್ಜುನಯ್ಯ ಬದುಕಿದ್ದಾಗಲೇ ಅವರ ಪತ್ನಿ, ಮಕ್ಕಳಾದ ವಿದ್ಯಾ, ನಾಗವೇಣಿ ಹೆಸರಲ್ಲಿ ಜಮೀನು ಮಾಡಿದ್ದು, ಅವರ ಜಮೀನಿಗೆ ಅವರೇ ಕಾಲಿಡದಂತೆ ಮಾಡಲಾಗಿದೆ ಎಂದರು. ವಿವಾದ ಕೋರ್ಟ್ ನಲ್ಲಿ ಇತ್ಯರ್ಥವಾಗುವ ತನಕ . ಮಲ್ಲಿಕಾರ್ಜುನಯ್ಯ ಅವರ ಪತ್ನಿ ಮಕ್ಕಳಾಗಲೀ, ಸೊಸೆಯಾಗಲೀ ಯಾರೂ ಯಾರ ಪ್ರವೇಶಕ್ಕೂ ಅಡ್ಡಿ ಮಾಡಬಾರದು ಎಂದು ಲೋಕಾಯುಕ್ತರು ಸೂಚಿಸಿದರು. ಸೊಸೆ ಭಾರತಿ ಹೇಳಿಕೆ ನೀಡಲು ಮುಂದಾದಾಗ ಲೋಕಾಯುಕ್ತರು ನೀವು ದೂರುದಾರರಲ್ಲ. ನ್ಯಾಯಾಲಯದಲ್ಲಿ ಆಸ್ತಿ ವಿವಾದ ಇತ್ಯರ್ಥ ಮಾಡಿಕೊಳ್ಳಿ ಎಂದು ಸೂಚಿಸಿದರು.
Advertisement