ಕೋಲಾರ: ಇದನ್ನೇ ನೋಡಿ ಅಭಿಮಾನ ಎನ್ನೋದು. ಪ್ರಾಮಾಣಿಕತೆಗೆ ಹೆಸರಾಗಿದ್ದ ಐಎಎಸ್ ಅಧಿಕಾರಿ ಡಿ.ಕೆ ರವಿ ನಿಗೂಢವಾಗಿ ಸಾವನ್ನಪ್ಪಿ 40 ದಿನ ಕಳೆದಿವೆ. ಆದರೆ ಕೋಲಾರ ಜನತೆ ಪಾಲಿಗೆ ಸಾಕ್ಷಾತ್ ದೇವರಾಗಿದ್ದ ರವಿ ಅವರಿಗಾಗಿ ವೆಲಬಗುರ್ರೆ ಗ್ರಾಮದಲ್ಲಿ ದೇವಾಲಯ ನಿರ್ಮಿಸಲಾಗಿದೆ.
ಕೋಲಾರ ಜಿಲ್ಲೆಯಲ್ಲಿ ಹದಿನಾಲ್ಕು ತಿಂಗಳ ಕಾಲ ಜನ ಮೆಚ್ಚಿದ ಜಿಲ್ಲಾಧಿಕಾರಿಯಾಗಿ ಭ್ರಷ್ಟಾಚಾರ ರಹಿತ ಸೇವೆ ನೀಡಿದ ಡಿ.ಕೆ ರವಿ ಅವರು ಮಾಡಿದ ಕೆಲಸಗಳು ಅಲ್ಲಿನ ಜನತೆಯ ಮನದಲ್ಲಿ ಶಾಶ್ವತವಾಗಿ ಉಳಿದಿವೆ. ಇದಕ್ಕೆ ಸಾಕ್ಷಿ ಎಂಬಂತೆ ದೇವಾಲಯ ನಿರ್ಮಾಣ ಮಾಡಿ ಪೂಜೆ ಸಲ್ಲಿಸುವುದರ ಜೊತೆಗೆ ಡಿ.ಕೆ ರವಿ ಅವರು ಕೈಗೊಂಡ ಜನಹಿತ ಸೇವೆಗಳ ಪೋಸ್ಟರ್ ಗಳನ್ನು ಹಾಕಿದ್ದಾರೆ. ಇದು ರವಿ ಅವರ ಬಗ್ಗೆ ಗ್ರಾಮಸ್ಥರಿಗಿರುವ ಅಭಿಮಾನವನ್ನು ಎತ್ತಿ ತೋರಿಸುತ್ತೆ.
ಐಎಎಸ್ ಅಧಿಕಾರಿ ಡಿ.ಕೆ ರವಿ ಒಬ್ಬ ಆದರ್ಶ ವ್ಯಕ್ತಿಯಾಗಿದ್ದು, ರಾಜ್ಯದ ಪ್ರತಿಯೊಬ್ಬ ಅಧಿಕಾರಿಗೂ ಸ್ಫೂರ್ತಿಯಾಗಿ ಕಾರ್ಯ ನಿರ್ವಹಿಸಲಿ ಎಂಬ ಆಶಯದಲ್ಲಿ ಈ ದೇವಾಲಯ ನಿರ್ಮಿಸಲಾಗಿದೆ ಎಂಬುದು ಗ್ರಾಮಸ್ಥರ ಆಶಯವಾಗಿದೆ. ಅವರು ಹಾಕಿಕೊಟ್ಟ ಹಾದಿಯಲ್ಲಿ ನಡೆಯಬೇಕು ಎಂಬ ಕಾರಣಕ್ಕೆ ಈ ದೇವಾಲಯ ನಿರ್ಮಿಸಲಾಗಿದೆ.