ಬೆಂಗಳೂರು: ಕನ್ನಡ ಚಿತ್ರರಂಗದ ಮರೆಯಲಾಗದ ವರನಟ, ಪದ್ಮಭೂಷಣ ಡಾ.ರಾಜ್ಕುಮಾರ್ ಅವರ 87ನೆ ಹುಟ್ಟುಹಬ್ಬವನ್ನು ರಾಜ್ಯಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ.
ಡಾ.ರಾಜ್ ಕುಮಾರ್ ಅಭಿಮಾನಿಗಳು ಸಿಹಿ ಹಂಚಿ, ರಕ್ತದಾನ ಮಾಡಿ ತಮ್ಮ ನೆಚ್ಚಿನ ಅಣ್ಣಾವ್ರಿಗೆ ಅಭಿಮಾನವನ್ನು ತೋರಿದ್ದಾರೆ.
ವಿಶೇಷವಾಗಿ ಪರಿಸರ ಸಂರಕ್ಷಣೆಯ ಧ್ಯೇಯದೊಂದಿಗೆ ವಿಶಿಷ್ಟ ರೀತಿಯಲ್ಲಿ ಡಾ.ರಾಜ್ ಕುಮಾರ್ ಅವರಿಗೆ ನಮನ ಸಲ್ಲಿಸಲಾಯಿತು. ಇಂದು ಬೆಳಗ್ಗೆ ಹೆಜ್ಜಾಲದ ಬಳಿ ಇರುವ ಪುನೀತ್ಫಾರಂನಲ್ಲಿ ಡಾ.ರಾಜ್ ಅವರ ಸಮಾಧಿಯ ಮಣ್ಣನ್ನು ತೆಗೆದುಕೊಂಡು ಬೇವಿನ ಸಸಿಯೊಂದಿಗೆ ಕಂಠೀರವ ಸ್ಟುಡಿಯೋ ಆವರಣದಲ್ಲಿರುವ ಪುಣ್ಯ ಭೂಮಿಗೆ ತರಲಾಯಿತು.
ಶ್ರೀಮತಿ ಪಾರ್ವತಮ್ಮ ರಾಜ್ಕುಮಾರ್, ಶಿವರಾಜ್ಕುಮಾರ್, ರಾಘವೇಂದ್ರರಾಜ್ಕುಮಾರ್, ಪುನೀತ್ರಾಜ್ಕುಮಾರ್ ಸೇರಿದಂತೆ ಕುಟುಂಬ ಸದಸ್ಯರು, ಅಭಿಮಾನಿಗಳು ಸಸಿ ನೆಟ್ಟು ರಾಜ್ ಸಮಾಧಿಗೆ ಪೂಜೆ ಸಲ್ಲಿಸಿದರು. ಅಲ್ಲದೇ ದೂರದೂರುಗಳಿಂದ ಸಾವಿರಾರು ಸಂಖ್ಯೆಯಲ್ಲಿ ರಾಜ್ ಅಭಿಮಾನಿಗಳು ನೆರೆದು ಜೈಕಾರ ಕೂಗಿದರು.
ಜನಸಾಗರವನ್ನು ತಡೆಯುವ ಸಲುವಾಗಿಯೇ ಹೆಚ್ಚಿನ ಪೊಲೀಸ್ ಭದ್ರತೆಯನ್ನು ಕೂಡ ಸ್ಥಳದಲ್ಲಿ ಮಾಡಲಾಗಿತ್ತು. ರಾಜ್ ಕಟೌಟ್ಗಳು ರಾರಾಜಿಸುತ್ತಿದ್ದವು. ಪುಣ್ಯ ಭೂಮಿ ಪುಷ್ಪಾಲಂಕಾರದಿಂದ ಕಂಗೊಳಿಸುತ್ತಿತ್ತು. ಬೆಂಗಳೂರಿನ ನಾನಾ ಭಾಗಗಳಲ್ಲಿ ರಾಜ್ ಪ್ರತಿಮೆ ಮುಂಭಾಗ ಕನ್ನಡ ಪರ ಸಂಘಟನೆಗಳು ಹಾಗೂ ಅಭಿಮಾನಿ ಸಂಘದವರು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು. ನಾಡ ಧ್ವಜಗಳಿಂದ ಸಿಂಗರಿಸಿ ರಾಜ್ ನಟನೆಯ ಚಿತ್ರಗಳ ಪೋಸ್ಟರ್ಗಳನ್ನು ವಿಶೇಷವಾಗಿ ಪ್ರದರ್ಶಿಸಲಾಯಿತು. ಮೈಸೂರು, ತುಮಕೂರು, ಕೋಲಾರ, ರಾಮನಗರ ಸೇರಿದಂತೆ ಹಳೆ ಮೈಸೂರು ಭಾಗ ವ್ಯಾಪ್ತಿಯಲ್ಲಿ ಇಂದು ಹಬ್ಬದ ರೀತಿಯಲ್ಲಿ ರಾಜ್ ಹುಟ್ಟುಹಬ್ಬವನ್ನು ಆಚರಿಸಲಾಯಿತು.
Advertisement