ಬೆಂಗಳೂರು: ಅಪ್ಪ ಮೆಚ್ಚಿದ ಬೇವಿನ ಗಿಡ ಮಕ್ಕಳು ನೆಟ್ಟರು!ಅದು ನಟಸಾರ್ವಭೌಮ ದಿವಂಗತ ಡಾ.ರಾಜ್ಕುಮಾರ್ ಹುಟ್ಟುಹಬ್ಬಕ್ಕೆ ನೆನಪಿನ ಕಾರ್ಯಕ್ರಮ. ರಾಜ್ ಸಮಾಧಿ ಎದುರು ರಾಜ್ ಕುಟುಂಬಸ್ಥರು ಶುಕ್ರವಾರ ಬೇವಿನ ಗಿಡ ನೆಡುವ ಮೂಲಕ ಚಿರನಿದ್ರೆಯಲ್ಲಿರುವ ಮೇರುನಟನಿಗೆ ಗೌರವ ಸಮರ್ಪಿಸಿ, ಅಸಂಖ್ಯಾತ ಅಭಿಮಾನಿಗಳಿಗೆ `ಆಮ್ಲ ಜನಕ'ದ ಮಹತ್ವ ಸಾರಿದರು. ಬೆಂಗಳೂರಿನಲ್ಲಿರುವ ಡಾ. ರಾಜ್ ಸ್ಮಾರಕ ಭವನ (ಪುಣ್ಯ ಭೂಮಿ)ದಲ್ಲಿ ಶುಕ್ರವಾರ ಏರ್ಪಡಿಸಿದ್ದ ಡಾ.ರಾಜ್ ರಥಯಾತ್ರೆ ಹಾಗೂ ನೆನಪಿಗೆ ಸಸಿ ನೆಡುವ ಕಾರ್ಯಕ್ರಮಕ್ಕೆ ಡಾ. ಪಾರ್ವತಮ್ಮ ರಾಜ್ ಕುಮಾರ್ ನೇತೃತ್ವದಲ್ಲಿ ಕುಟುಂಬಸ್ಥರಿಂದ ಚಾಲನೆ ದೊರೆಯಿತು. 10.30ಕ್ಕೆ ರಾಜ್ ಕುಟುಂಬದವರು ಸಮಾಧಿ ಗೆ ಪುಷ್ಪನಮನ ಸಲ್ಲಿಸುತ್ತಿದ್ದಂತೆ ಮೇಲೆ ಹೆಲಿಕಾಪ್ಟರ್ ಹಾರಾಟದ ಸದ್ದು, ನೋಡನೋಡುತ್ತಿದ್ದಂತೆಯೇ ಪುಷ್ಪ ವೃಷ್ಟಿ! ಮೇಲಿಂದ ಪುಷ್ಪಗಳ ರಾಶಿ ಇಳೆ ಸ್ಪರ್ಶಿಸುತ್ತಿದ್ದರೆ, ಸೇರಿದ್ದ ಸಾವಿರಾರು ಅಭಿಮಾನಿಗಳು ಒಮ್ಮೆ ಮೂಕ ಪ್ರೇಕ್ಷಕರಾದರು. ಬಳಿಕ ಇದು ರಾಜ್ಗೆ ಸಲ್ಲಿಸುತ್ತಿರುವ ಪುಷ್ಪ ನಮನ ಎಂದು ತಿಳಿದಿದ್ದೇ `ಡಾ.ರಾಜ್ಕುಮಾರ್ಗೆ ಜಯ ವಾಗಲಿ' ಎಂಬ ಘೋಷಣೆ ಮೊಳಗಿತು. ಬಾನೆತ್ತರಕ್ಕೆ ಕೇಳಿಸುವ ಜೈಕಾರಗಳು ಮೊಳಗಿದವು.
ಬೇವಿನ ಗಿಡ ನೆಟ್ಟರು
ನಂತರ ಪತಿಯ ಆಶಯದಂತೆ ಪಾರ್ವತಮ್ಮ, ಮಕ್ಕಳಾದ ಶಿವರಾಜ್ಕುಮಾರ್, ರಾಘವೇಂದ್ರ ರಾಜಕುಮಾರ್, ಪುನೀತ್ ರಾಜಕುಮಾರ್, ಕುಟುಂಬಸ್ಥರು ಹಾಗೂ
ಕಂಠೀರವ ಸ್ಟುಡಿಯೋ ಅಧ್ಯಕ್ಷ ವಿಜಯಲಕ್ಷ್ಮಿ ಅರಸ್ ಸೇರಿ ಸಾವಿರಾರು ಅಭಿಮಾನಿಗಳ ಮಧ್ಯೆ ಬೇವಿನ ಗಿಡ ನೆಡುವ ಮೂಲಕ ಆಮ್ಲಜನಕದ ಮಹತ್ವ ಸಾರಿದರು.
ಕಾಪ್ಟರ್ನಿಂದ ಪುಷ್ಪವೃಷ್ಟಿ
ರಾಜ್ ಹುಟ್ಟುಹಬ್ಬಕ್ಕೆ ಪ್ರತಿ ವರ್ಷ ವಿಶಿಷ್ಟವಾಗಿ ಕಾರ್ಯ ಕ್ರಮ ಹಮ್ಮಿಕೊಳ್ಳುತ್ತಿದ್ದ ಕಟ್ಟಾ ಅಭಿಮಾನಿ, ಕನ್ನಡ ಕದಂಬ ಯುವಕರ ಸಂಘದ ಅಧ್ಯಕ್ಷ ರಂಗಸ್ವಾಮಿ ಈ ಬಾರಿ
ಹೆಲಿಕಾಪ್ಟರ್ ಮೂಲಕ ಸಮಾಧಿಗೆ ಪುಷ್ಪವೃಷ್ಟಿ ಮಾಡಿಸುವ ಮೂಲಕ ಅಭಿಮಾನ ಮೆರೆದರು. ಇದಕ್ಕಾಗಿ ಪೂರ್ವ ತಯಾರಿ ಮಾಡಿಕೊಂಡಿದ್ದ ಅವರು, ಎಚ್ಎಎಲ್ನಿಂದ
ಕಾಪ್ಟರ್ ಬಾಡಿಗೆಗೆ ಪಡೆದಿದ್ದರು. ಬಳಿಕ ತಾವು ಸಮಾಧಿ ಬಳಿ ಇದ್ದು, ತಮ್ಮ ಪತ್ನಿಯನ್ನು ಎಚ್ಎಎಲ್ ಏರ್ಪೋರ್ಟ್ಗೆ ಕಳುಹಿಸಿಕೊಟ್ಟರು. ಸರಿಯಾ ಗಿ 10.30ರ ಹೊತ್ತಿಗೆ ಕಾಪ್ಟರ್ ನಲ್ಲಿ ಅವರ ಪತ್ನಿ ಪುಷ್ಪ ಸುರಿಯುವ ಮೂಲಕ ರಾಜ್ಗೆ ನಮನ ಸಲ್ಲಿಸಿದರು. ಇದಕ್ಕಾಗಿ ರು. 5-6 ಲಕ್ಷ ವ್ಯಯಿಸಿದರು.
ರಕ್ತದಾನ ಶಿಬಿರ
ರಾಜ್ ಅಭಿ ಮಾನಿಗಳಿಂದ ಹಮ್ಮಿಕೊಂಡಿದ್ದ ರಕ್ತದಾನ, ನೇತ್ರದಾನ ಶಿಬಿರಕ್ಕೆ ಉತ್ತಮ ಪ್ರತಿಕ್ರಿಯೆ ದೊರೆಯಿತು. ಬೆಳಗ್ಗೆ 8ರಿಂದ ಆರಂಭವಾದ ಶಿಬಿರದಲ್ಲಿ ರಾಘವೇಂದ್ರ
ರಾಜಕುಮಾರ್ ಮಕ್ಕಳಾದ ವಿನಯ್ ಹಾಗೂ ಗುರುರಾಜ ಕುಮಾರ್ ಸೇರಿ ಸಂಜೆವರೆಗೆ 400ಕ್ಕೂ ಹೆಚ್ಚು ಮಂದಿ ರಕ್ತ ದಾನ ಮಾಡಿದರು.300ಕ್ಕೂ ಹೆಚ್ಚು ಮಂದಿ ನೇತ್ರದಾನಕ್ಕೆ ಹೆಸರು ನೋಂದಾಯಿಸಿದ್ದಾರೆ.ಡಾ. ರಾಜ್ ಸಮಾಧಿ ಮುಂದೆ ಬೇವಿನ ಗಿಡ ನೆಟ್ಟ ಡಾ. ಪಾರ್ವತಮ್ಮ ರಾಜ್ಕುಮಾರ್,ಶಿವರಾಜ್ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಪುನೀತ್ ರಾಜ್ಕುಮಾರ್, ಕಂಠೀರವ ಸ್ಟುಡಿಯೋ ಅಧ್ಯಕ್ಷ ವಿಜಯಲಕ್ಷ್ಮಿ ಅರಸ್.
ಗುರುವಾರ ರಾತ್ರಿ ಭರ್ಜರಿ ಮಳೆ ಸುರಿವ ಮೂಲಕ ಜಲನಮನವಾದರೆ, ಶುಕ್ರವಾರ ಬೆಳಗ್ಗೆ ಕಾಪ್ಟರ್ನಲ್ಲಿ ಪುಷ್ಪವೃಷ್ಟಿಯಾಯಿತು.
ಇದು ಅಪ್ಪಾಜಿಯವರ ಮೇಲಿನಪ್ರೀತಿಯಿಂದಲೇ ಆಗಿದೆ ಎಂದು ನಾನು ಭಾವಿಸುತ್ತೇನೆ. ಅಪ್ಪಾಜಿ ತಮ್ಮ ವಿನಯವಂತಿಕೆ ಹಾಗೂ ಸರಳತೆಯಿಂದ ಜೀವನದಲ್ಲಿ ಸಮತೋಲನವನ್ನು ಕಾಯ್ದುಕೊಂಡಿದ್ದಾರೆ. ಅವರ ಇಚ್ಛೆಯಂತೆ ಮುಂದೆ ಸಮಾಜ ಸೇವೆ ಮಾಡುವ ಹಂಬಲವಿದೆ.
- ಶಿವರಾಜಕುಮಾರ್
ಕಾರ್ಯಕ್ರಮವನ್ನು ಚಂದಗಾಣಿಕೊಟ್ಟ ಅಭಿಮಾನಿಗಳಿಗೆ ಧನ್ಯವಾದಗಳು. ಅಪ್ಪಾಜಿ ಹುಟ್ಟುಹಬ್ಬವನ್ನು ಅಭಿಮಾನಿಗಳು ತಮ್ಮ ಹುಟ್ಟುಹಬ್ಬದಂತೆ
ಆಚರಿಸುತ್ತಿದ್ದಾರೆ. ಅವರಿಗೆ ನಾನು ಎಂದೂ ಚಿರಖುಣಿ. ರಾಘವೇಂದ್ರ ರಾಜ್ಕುಮಾರ್ ಅವರ ಅಪ್ಪಾಜಿಗೆ ಇಷ್ಟವಾದ ಬೇವಿನಮರ ನೆಡುವ ಮೂಲಕ ಉತ್ತಮ ಕಾರ್ಯ ಮಾಡಿದ್ದಾರೆ.
- ಪುನೀತ್ ರಾಜಕುಮಾರ್
ಬೃಹತ್ ಕನ್ನಡ ಧ್ವಜ
ಚಾಮರಾಜಪೇಟೆಯ ವಂದೇ ಮಾತರಂ ಟ್ರಸ್ಟ್ ತಯಾರಿಸಿದ 100x150 ಅಡಿಯ ಕನ್ನಡ ಧ್ವಜ ವನ್ನು ಡಾ.ಶಿವರಾಜ್ ಕುಮಾರ್ ಅವರು ಅನಾವರಣ ಗೊಳಿಸಿದರು. ಕನ್ನಡ ನಾಡಿಗೆ ಕಲಾವಿದರಾಗಿ ದುಡಿ ದ, ಸಾಕಷ್ಟು ಕೊಡುಗೆ ನೀಡಿದ ಅಣ್ಣಾವ್ರ ನೆನಪಿ ಗಾಗಿ ಈ ಧ್ವಜವನ್ನು ತಯಾರಿಸಿದ್ದು, ಇದನ್ನು ಅವರ ಹುಟ್ಟುಹಬ್ಬದಂದು ಅನಾವರಣ ಗೊಳಿಸಬೇಕೆಂಬ ಹಂಬಲ ನನಸಾಯಿತು. ಅಲ್ಲದೆ, 1000x1500 ಅಡಿಯ ತ್ರಿವರ್ಣ ಧ್ವಜವನ್ನು ವಿಶ್ವದಾಖಲೆಗಾಗಿ ನಿರ್ಮಿಸಿದ್ದು, ಅ.2ರಂದು ದೆಹಲಿಯಲ್ಲಿ ಅನಾವರಣಗೊಳಿಸಲಾಗುವುದು ಎಂದು ಟ್ರಸ್ಟನ ಸದಸ್ಯರು ತಿಳಿಸಿದ್ದಾರೆ.
ಡಾ.ರಾಜ್ ಅವರ ಜನ್ಮದಿನ ಕಾರ್ಯಕ್ರಮವನ್ನು ಸರ್ಕಾರ ಎರಡು ವರ್ಷದಿಂದ ನಡೆಸಿಕೊಂಡು ಬರುತ್ತಿರುವುದು ಸಂತಸ ವಿಷಯ. ಕುವೆಂಪು ಹೇಗೆ ಸಾಹಿತ್ಯದ ಮೂಲಕ ಸಾಹಿತ್ಯವನ್ನು ಮೀರಿದರೋ ಹಾಗೆಯೇ ಡಾ. ರಾಜ್ ಅವರು ಸಿನಿಮಾ ದಿಂದ ಸಿನಿಮಾ ಕ್ಷೇತ್ರವನ್ನು ಮೀರಿದ್ದಾರೆ.
- ಬರಗೂರು ರಾಮಚಂದ್ರಪ್ಪ
Advertisement