ಪಾಲಿಕೆ ಚುನಾವಣೆ: ಶೇ.65 ರಷ್ಟು ಮತದಾನದ ಗುರಿ

ಈ ಬಾರಿ ಬಿಬಿಎಂಪಿ ಚುನಾವಣೆಯಲ್ಲಿ ಮತದಾನದಿಂದ ದೂರ ಉಳಿಯುವ ಐಟಿ-ಬಿಟಿ ಕ್ಷೇತ್ರದ ಮತದಾರರನ್ನು ಹೇಗಾದರೂ ಮತಗಟ್ಟೆಗೆ ಕರೆತರಲು ಚುನಾವಣಾ ಆಯೋಗ ಸಿದ್ಧತೆ ನಡೆಸಿದೆ.
ಮತದಾನ(ಸಾಂಕೇತಿಕ ಚಿತ್ರ)
ಮತದಾನ(ಸಾಂಕೇತಿಕ ಚಿತ್ರ)
Updated on

ಬೆಂಗಳೂರು: ಈ ಬಾರಿ ಬಿಬಿಎಂಪಿ ಚುನಾವಣೆಯಲ್ಲಿ ಮತದಾನದಿಂದ ದೂರ ಉಳಿಯುವ ಐಟಿ-ಬಿಟಿ ಕ್ಷೇತ್ರದ ಮತದಾರರನ್ನು ಹೇಗಾದರೂ ಮತಗಟ್ಟೆಗೆ ಕರೆತರಲು ಚುನಾವಣಾ ಆಯೋಗ ಸಿದ್ಧತೆ ನಡೆಸಿದೆ.

ಚುನಾವಣೆ ಕಾವು ದಿಢೀರ್ ಏರುತ್ತಿದ್ದಂತೆ ಆಯೋಗದ ಅಂಗಸಂಸ್ಥೆಯಂತೆ ಕೆಲಸ ಮಾಡಬೇಕಿರುವ ಬಿಬಿಎಂಪಿ ವಿವಿಧ ರೀತಿಯ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಪ್ರತಿ ಬಾರಿಯೂ ಬೆಂಗಳೂರಿನಲ್ಲಿ ನಡೆಯುವ ಚುನಾವಣೆಯಲ್ಲಿ ಕೊಳಗೇರಿ ನಿವಾಸಿಗಳು ಮತ್ತು ಇತರೆ ಪ್ರದೇಶಗಳ ಮಧ್ಯಮ ವರ್ಗದವರು ಮಾತ್ರ ಮತದಾನದಲ್ಲಿ ಭಾಗವಹಿಸುತ್ತಿದ್ದಾರೆ. ಆದರೆ ಸುಶಿಕ್ಷಿತರು ಎನ್ನಿಸಿಕೊಳ್ಳುವವರೇ ಮತದಾನದಲ್ಲಿ ಭಾವಹಿಸದೇ ಇರುವುದರಿಂದ ಪ್ರತಿ ಚುನಾವಣೆಯಲ್ಲೂ ಬೆಂಗಳೂರು ಶೇ.46 ರಷ್ಟು ಮತದಾನವನ್ನು ದಾಟುತ್ತಿಲ್ಲ.

ಹೀಗಾಗಿ ಬಿಬಿಎಂಪಿ ಈ ಬಾರಿ ಹೇಗಾದರೂ ಮಾಡಿ ನಗರದಲ್ಲಿ ಶೇ.40 ರಷ್ಟು ಮತದಾನ ದಾಖಲಾಗುವಂತೆ ಮಾಡಬೇಕೆಂದು ಪಣ ತೊಟ್ಟಿದೆ. ಇದಕ್ಕಾಗಿ ಸಾಮಾಜಿಕ ಜಾಲ, ಬೀದಿ ನಾಟಕ, ಮೆರವಣಿಗೆ ಸೇರಿದಂತೆ ವಿವಿಧ ರೀತಿಯ ಕಾರ್ಯಕ್ರಮಗಳನ್ನು ನಡೆಸಲು ತೀರ್ಮಾನಿಸಿದೆ. ಮತದಾನ ಜಾಗೃತಿ ಕುರಿತ ಮೊದಲ ಕಾರ್ಯಕ್ರಮ ಮಂಗಳವಾರ ಎಂ.ಜಿ ರಸ್ತೆಯ ಗಾಂಧಿ ಪ್ರತಿಮೆ ಬಳಿ ನಡೆಯಲಿದ್ದು, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಕೆ ಮುಖರ್ಜಿ ಚಾಲನೆ ನೀಡಲಿದ್ದಾರೆ. ಅದೇ ರೀತಿ ಆ.5 ರಂದು ಬಿಬಿಎಂಪಿ ಕಚೇರಿ ಆವರಣದಲ್ಲೂ ಮತ್ತು ಇತರ ವಲಯಗಳಲ್ಲೂ ಜಾಗೃತಿ ಕಾರ್ಯಕ್ರಮ ಏರ್ಪಡಿಸಲಾಗಿದೆ. ಯುವಜನಾಂಗವನ್ನು ಗಮನದಲ್ಲಿಟ್ಟುಕೊಂಡು ಕಾರ್ಯಕ್ರಮಗಳನ್ನು ರೂಪಿಸಲಾಗಿದ್ದು ಪದವಿ ಕಾಲೇಜುಗಳಲ್ಲಿ, ಸಂಘ ಸಂಸ್ಥೆಗಳಲ್ಲಿ ಮತ್ತು ಸ್ಲಂ ಪ್ರದೇಶಗಳಲ್ಲಿ ಹೆಚ್ಚಿನ ಪ್ರಚಾರ ನಡೆಸಲು ನಿರ್ಧರಿಸಲಾಗಿದೆ.

ರಂಗೋಲಿ ಜಾಗೃತಿ: ಈ ಬಾರಿ ಚುನಾವಣೆಯಲ್ಲಿ ನಡೆಸುವ ಮತ್ತೊಂದು ವಿನೂತನ ಕಾರ್ಯಕ್ರಮವೆಂದರೆ ಪ್ರತಿ ದಿನ ಮುಂಜಾನೆ ಮನೆ ಮನೆ ಮುಂದೆ ರಂಗೋಲಿ ಹಾಕಲಾಗುತ್ತಿದೆ. ಈ ಮೂಲಕ ಮಹಿಳೆಯರಿಗೆ ತಮ್ಮ ಹಕ್ಕು ಚಲಾವಣೆಗೆ ಮುಂದಾಗಲು ಜಾಗೃತಿ ಮೂಡಿಸಲಾಗುತ್ತಿದೆ. ಮಹಿಳೆ ಮತ ನೀಡಲು ಮುಂದಾದರೆ ಕುಟುಂಬದ ಸದಸ್ಯರು ಜಾಗೃತರಾಗಲಿದ್ದಾರೆ ಎಂಬುದು ಇದರ ಹಿಂದಿನ ಉದ್ದೇಶ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com