ತುಮಕೂರು: ರಾಷ್ಟ್ರೀಯ ಹೂಡಿಕೆ ಯೋಜನೆಯಡಿಯಲ್ಲಿ ತುಮಕೂರಿನ ವಸಂತ ನರಸಾಪುರ ಕೈಗಾರಿಕಾ ಪ್ರದೇಶವನ್ನು ಜಾಗತಿಕ ಮಟ್ಟಕ್ಕೆ ಏರಿಸುವ ನಿಟ್ಟಿನಲ್ಲಿ ಜಪಾನ್ ಜೊತೆ ಮಾತುಕತೆ ನಡೆಸಿದ್ದು ರೂ 18 ,000 ಕೋಟಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಕೈಗಾರಿಕಾ ಇಲಾಖೆ ಅಪಾರ ಕಾರ್ಯದರ್ಶಿ ರತ್ನಪ್ರಭಾ ತಿಳಿಸಿದ್ದಾರೆ.
ನಗರದ ಕೈಗಾರಿಕಾ ಪ್ರದೇಶಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮಾತನಾಡಿದ ಅವರು, ತುಮಕೂರಿನಲ್ಲಿ ಹೂಡಿಕೆ ಜಪಾನ್ ಆಸಕ್ತಿ ಹೊಂದಿದೆ. ಇಲ್ಲಿನ ಮೂಲ ಸೌಕರ್ಯ, ರಸ್ತೆ, ಚರಂಡಿ, ವಿದ್ಯುತ್ ಮುಂತಾದ ಅಭಿವೃದ್ಧಿ ಕಾರ್ಯಗಳಲ್ಲಿ ಹೂಡಿಕೆ ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅಂತಿಮ ಹಂತದಲ್ಲಿದೆ ಎಂದರು.
ಹಣ ಮೀಸಲಾತಿ: ಕೈಗಾರಿಕಾ ವಲಯದ ಅಭಿವೃದ್ಧಿ ಆರು ಹಂತಗಳಲ್ಲಿ ನಡೆಯಲಿದ್ದು ಈಗಾಗಲೇ ಮೂರು ಹಂತಗಳಲ್ಲಿ ಕೈಗಾರಿಕೆಗಳು ಸ್ಥಾಪನೆಯಾಗಿವೆ. ಇಂಡಿಯನ್ ಮ್ಯಾನುಫ್ಯಾಕ್ಚರಿಂಗ್ ಮೆಷಿನ್ ಟೂಲ್ ವತಿಯಿಂದ ರೂ 7000 - ರೂ 8000 ಕೋಟಿ ಬಂಡವಾಳ ಹರಿದು ಬರಲಿದೆ. ಕರ್ನಾಟಕ ಕೈಗಾರಿಕಾ ವಲಯ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರದ ಜೊತೆ ಈಗಾಗಲೇ ಚರ್ಚೆ ನಡೆಸಲಾಗಿದೆ. ಇದರಲ್ಲಿಯೂ ಅಭಿವೃದ್ಧಿಗಾಗಿ ಹಣ ಮೀಸಲಿಡುವಂತೆ ಮನವಿ ಮಾಡಲಾಗಿದೆ.
ರಾಷ್ಟ್ರೀಯ ಉತ್ಪಾದನೆ ಮತ್ತು ಹೂಡಿಕೆ ವಲಯ ಅಡಿ ಐನೂರು ಎಕರೆ ಜಾಗಕ್ಕೆ ಜಪಾನ್ ಮನವಿ ಸಲ್ಲಿಸಿದೆ. ಅಲ್ಲದೆ, ಫ್ರಾನ್ಸ್, ಜರ್ಮನಿ, ಥೈಲ್ಯಾಂಡ್, ಕೊರಿಯಾ ಸಹ ಹೂಡಿಕೆಗೆ ಆಸಕ್ತಿ ತೋರಿದ್ದು ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದರು.
ಅವಲೋಕನ: ನವೆಂಬರ್ 23ರಿಂದ ೨೫ ರವರೆಗೆ ನಡೆಯಲಿರುವ ಜಾಗತಿಕ ಮಟ್ಟದ ಕೈಗಾರಿಕಾ ಸಮಾವೇಶದಲ್ಲಿ ಹಲವು ದೇಶಗಳು ಭಾಗವಹಿಸಲಿದ್ದು ಇಲ್ಲಿನ ಕೈಗಾರಿಕಾ ಪ್ರದೇಶದ ಸ್ಥಿತಿಗತಿಗಳನ್ನು ಅವಲೋಕಿಸುವ ಸಾಧ್ಯತೆಗಳಿವೆ. ಭೂಸ್ವಾಧೀಕ ಪ್ರಕ್ರಿಒಯೆಯಡಿ ರೂ 45 ಕೋಟಿ ರೈತರಿಗೆ ಪರಿಹಾರವಾಗಿ ವಿತರಿಸಲಾಗಿದೆ ಎಂದರು. ನವೀನ್ ರಾಜ್ ಸಿಂಗ್, ಜಿ.ಎಸ್ ಓಂಕಾರ ಮೂರ್ತಿ ಇದ್ದರು.
Advertisement