ಶ್ರೀರಂಗಪಟ್ಟಣ: ಅಸ್ಥಿ ವಿಸರ್ಜನೆಗೆ ಎಂದು ತೆರಳಿದ್ದ ಯುವಕರು ನೀರು ಪಾಲು ಆಗಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಗುರುವಾರ ನಡೆದಿದೆ.
ಶ್ರೀರಂಗಪಟ್ಟಣದ ಗಂಜಾಂ ಬಳಿ ಕಾವೇರಿ ನದಿ ಸಂಗಮದಲ್ಲಿ ಯುವಕರು ನೀರು ಪಾಲಾಗಿದ್ದಾರೆ. ಬೆಂಗಳೂರಿನ ಕತ್ರಿಗುಪ್ಪೆಯ ನಿವಾಸಿಗಳಾದ ಕಾರ್ತಿಕ್ (17), ಭರತ್(19) ನೀರು ಪಾಲಾದ ಯುವಕರು. ಮತ್ತೊಬ್ಬ ಯುವಕ ಮಣಿ ಎಂಬುವವನ್ನು ಸ್ಥಳಿಯರು ರಕ್ಷಿಸಿದ್ದಾರೆ.
ಸುಮಾರು 30 ಜನರ ತಂಡ ಈ ಅಸ್ಥಿ ವಿಸರ್ಜನೆಗೆಂದು ಸಂಗಮಕ್ಕೆ ಆಗಮಿಸಿತ್ತು. ಅದರಲ್ಲಿ ಕಾರ್ತಿಕ್, ಭರತ್ ಮತ್ತು ಮಣಿ ಎಂಬುವವರು ಅಸ್ತಿ ವಿಸರ್ಜನೆಗಾಗಿ ಸ್ನಾನ ಮಾಡಲು ನದಿಯಲ್ಲಿ ಇಳಿದಾಗ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ.
ಕೆಆರ್ ಎಸ್ ನಲ್ಲಿ ಹೊರ ಹರಿವು ಹೆಚ್ಚಾಗಿದ್ದು, ತಮಿಳುನಾಡಿಗೆ ಹೆಚ್ಚಿನ ಪ್ರಮಾಣ ನೀರು ಹರಿಯುತ್ತಿದೆ. ಈ ಹಿನ್ನಲೆಯಲ್ಲಿ ಸಂಗಮದಲ್ಲಿ ಹೆಚ್ಚು ನೀರು ಬರುತ್ತಿದೆ. ಅಲ್ಲದೇ ನದಿಯ ಆಳದ ಅರಿವಿಲ್ಲದೇ ಈ ದುರಂತ ಸಂಭವಿಸಿದೆ ಎಂದು ಹೇಳಲಾಗಿದೆ.
ವಿಚಾರಣೆ ತಿಳಿಯುತ್ತಿದ್ದಂತೆ ಶ್ರೀರಂಗಪಟ್ಟಣ ಪೊಲೀಸರು ಮತ್ತು ಅಗ್ನಿ ಶಾಮಕದಳದವರು ನೀರುಪಾಲಾದ ಯುವಕರ ಪತ್ತೆಗಾಗಿ ಕಾರ್ಯಾಚರಣೆ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
Advertisement