ಸಚಿವ ಅಂಬಿ ವೈದ್ಯಕೀಯ ವೆಚ್ಚ ವಸೂಲಿ: ಅರ್ಜಿ ವಜಾ
ಬೆಂಗಳೂರು: ವಸತಿ ಸಚಿವ ಅಂಬರೀಶ್ ಅವರ ಚಿಕಿತ್ಸೆಗೆ ತಗುಲಿದ್ದ ಕೋಟ್ಯಂತರ ರು.ಗಳ ವೆಚ್ಚ ಸಚಿವರಿಂದಲೇ ವಸೂಲಿ ಮಾಡಬೇಕೆಂದು ಕೋರಿ ಸಲ್ಲಿಕೆಯಾಗಿದ್ದ ಪಿಐಎಲ್ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಅನಾರೋಗ್ಯ ನಿಮಿತ್ತ ವಸತಿ ಸಚಿವ ಅಂಬರೀಶ್ 2014ರ ಫೆ.28ರಂದು ಸಿಂಗಾಪುರದ ಮೌಂಟ್ ಎಲಿಝಬತ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ನಂತರ ಚಿಕಿತ್ಸೆ ವೆಚ್ಚವೆಂದು ರು.1.24ಕೋಟಿ ಮರು ಪಾವತಿಗೆ ಕೋರಿದ್ದರು. ಅದರಂತೆ ರಾಜ್ಯ ಸರ್ಕಾರ 2014ರ ಜು.11 ರಂದು ರು.1.16ಕೋಟಿ ಹಾಗೂ 2014ರ ಜು.17ರಂದು ರು.5.92ಲಕ್ಷವನ್ನು ವಿಕ್ರಂ ಆಸ್ಪತ್ರೆ ವೆಚ್ಚವನ್ನು ಮರುಪಾವತಿಸಲು ಆದೇಶ ಹೊರಡಿಸಿತ್ತು. ಈ ಆದೇಶ ಪ್ರಶ್ನಿಸಿ ವಿನೋದ್ ಎಂಬುವರು ಪಿಐಎಲ್ ದಾಖಲಿಸಿದ್ದರು.
ಇದರ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾ.ಎಸ್.ಕೆ. ಮುಖರ್ಜಿ ಮತ್ತು ನ್ಯಾ.ಬಿ.ವಿ. ನಾಗರತ್ನ ಅವರಿದ್ದ ವಿಭಾಗೀಯ ಪೀಠ ಅರ್ಜಿ ವಜಾಗೊಳಿಸಿದೆ. ಕರ್ನಾಟಕ ಸಚಿವರು, ರಾಜ್ಯ
ಸಚಿವರು ಮತ್ತು ಉಪ ಸಚಿವರ ವೈದ್ಯಕೀಯ ಹಾಜರಾತಿ 1958ರ ನಿಯಮ 10ರ ಪ್ರಕಾರ ಸಚಿವರ ವೈದ್ಯಕೀಯ ಚಿಕಿತ್ಸೆಗೆ ತಗಲುವ ವೆಚ್ಚವನ್ನು ಮರು ಪಾವತಿಸಲು ಅವಕಾಶವಿದೆ ಎಂದು ಪೀಠ ಅರ್ಜಿ ವಜಾಗೊಳಿಸಿ ಆದೇಶಿಸಿದೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ