ಬೆಂಗಳೂರು: ನಗರದಲ್ಲಿನ ಕಸ ಎಲ್ಲ ತಂದು ನಮ್ಮ ಮನೆ ಮುಂದೆ ಸುರಿಯುತ್ತಿದ್ದಾರೆ. ಸಾಂಕ್ರಾಮಿಕ ರೋಗಗಳಿಗೆ ತುತ್ತಾಗಿ, ಬದುಕು ನರಕವಾಗಿದ್ದು, ಸಾಧ್ಯವಾದಲ್ಲಿ ನಮ್ಮನ್ನು ಬೇರೆಡೆಗೆ ಸ್ಥಳಾಂತರಿಸಿ...
ಹೀಗೆಂದು ಮಾವಳ್ಳಿಪುರ ಮತ್ತು ರಾಮಗೊಂಡನಹಳ್ಳಿಯ ಗ್ರಾಮಸ್ಥರು ತಮ್ಮ ವಾಸ ಸ್ಥಳದ ವಸ್ತು ಸ್ಥಿತಿಯನ್ನು ನ್ಯಾಯಾಲಯದ ಮುಂದೆ ಬಿಚ್ಚಿಟ್ಟ ಪರಿಯಿದು. ನಗರದಲ್ಲಿ ಕಸದ ಸಮಸ್ಯೆಯನ್ನು ಪ್ರಶ್ನಿಸಿ ವಕೀಲ ಜಿ.ಆರ್. ಮೋಹನ್ ಮತ್ತಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾ.ಎನ್.ಕುಮಾರ್ ಮತ್ತು ನ್ಯಾ.ಬಿ.ವಿ. ನಾಗರತ್ನ ಅವರಿದ್ದ ನ್ಯಾಯಪೀಠಕ್ಕೆ, ತಮ್ಮ ಕಷ್ಟಗಳಿಗೆ ಪರಿಹಾರ ಹುಡುಕಿಸಿ ಕೊಡಬೇಕು ಎಂದು ಪರಿಪರಿಯಾಗಿ ಮನವಿ ಮಾಡಿದರು.
ಮಾವಳ್ಳಿಪುರದ ಸುತ್ತಮುತ್ತ ಗ್ರಾಮಗಳಲ್ಲಿ ವೈದ್ಯ ಕೀಯ ಪರೀಕ್ಷೆ ಮತ್ತು ಪರಿಸರ ಸಮೀಕ್ಷೆ ನಡೆಸಬೇಕು ಎಂದು ಈ ಹಿಂದೆ ಹೈಕೋರ್ಟ್ ಆದೇಶಿಸಿದೆ. ಆದರೆ, ಅಧಿಕಾರಿಗಳು ಮಾತ್ರ ಕ್ರಮಕ್ಕೆ ಮುಂದಾಗುತ್ತಿಲ್ಲ. ಕಳೆದ ಮೂರು ತಿಂಗಳಿಂದ 12 ಜನ ಸಾವನ್ನಪ್ಪಿದ್ದಾರೆ. ಯಾರೊಬ್ಬರಿಗೂ ಪರಿಹಾರ ನೀಡಿಲ್ಲ ಎಂದು ಮಾವಳ್ಳಿಪುರ ನಿವಾಸಿ ಶ್ರೀನಿವಾಸ್ ನ್ಯಾಯಪೀಠದ ಮುಂದೆ ತಮ್ಮ ಸಮಸ್ಯೆ ತೋಡಿಕೊಂಡರು.
ಸಮಯ ನಿಗದಿ ಮಾಡಿ: ಪ್ರತಿದಿನ ಬೆಳಗ್ಗೆ ಕಸ ಸಂಗ್ರಹ ವಾಹನ ರಸ್ತೆಗೆ ಬರುವುದಕ್ಕೆ ಸಮಯ ನಿಗದಿ ಮಾಡಬೇಕು. ಕೆಲ ಸಲ ರಸ್ತೆ ಬದಿಯಲ್ಲಿಯೇ ಕಸವನ್ನು ಸುರಿಯುತ್ತಾರೆ ಎಂದು ಸಿವಿಕ್ ಸಂಸ್ಥೆ ಪರ ಅರ್ಜಿದಾರರು ನ್ಯಾಯಪೀಠಕ್ಕೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಒಮ್ಮೆ ಆಟೋಗಳಲ್ಲಿ ಸಂಗ್ರಹ ಮಾಡಿದ ಕಸವನ್ನು ನಗರದಲ್ಲಿಯೇ ಒಂದು ಕಡೆ ಶೇಖರಣೆ ಮಾಡಿ ಬಳಿಕ ಮತ್ತೊಂದು ಸುತ್ತು ಹಾಕುವ ಮೂಲಕ ಸಾರ್ವಜನಿಕರಿಂದ ಕಸ ಸಂಗ್ರಹ ಮಾಡುವುದಕ್ಕೆ ವ್ಯವಸ್ಥೆ ಕಲ್ಪಿಸುವುದಕ್ಕೆ ಚಿಂತನೆ ನಡೆಸುವಂತೆ ಪಾಲಿಕೆಗೆ ಸೂಚನೆ ನೀಡಿತು.
ನಗರದಲ್ಲಿ ಪ್ರತಿದಿನ ಉತ್ಪತ್ತಿ ಮಾಡುತ್ತಿರುವ ಒಟ್ಟು 3500 ಮೆಟ್ರಿಕ್ ಟನ್ ಕಸದಲ್ಲಿ 1500 ಮೆಟ್ರಿಕ್ ಟನ್ ಸಂಸ್ಕರಣ ಮಾಡಲಾಗುತ್ತಿದೆ. ಇನ್ನು ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಎಲ್ಲ ಕಸ ಸಂಸ್ಕರಣೆ ಮಾಡುವುದಕ್ಕೆ ಚಿಂತನೆ ನಡೆಸಲಾಗುತ್ತಿದೆ. ಅಲ್ಲದೆ, ಈಗಾಗಲೆ 95 ವಾರ್ಡ್ಗಳಲ್ಲಿ ಅಲ್ಲಿನ ಕಸವನ್ನು ಅಲ್ಲಿಯೇ ಸಂಸ್ಕರಣೆ ಮಾಡುವುದಕ್ಕೆ ವ್ಯವಸ್ಥೆ ಕಲ್ಪಿಸಲಾಗಿದ್ದು, ಇನ್ನುಳಿದ ವಾರ್ಡ್ಗಳಲ್ಲಿ ಹಂತ ಹಂತವಾಗಿ ಕಸ ಸಂಸ್ಕರಣೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ನ್ಯಾಯಾಲಯಕ್ಕೆ ಬಿಬಿಎಂಪಿ ಪರ ವಕೀಲರು ಪ್ರಮಾಣ ಪತ್ರ ಸಲ್ಲಿಸಿದರು.
ಕಾಯಂ ಪೌರ ಕಾರ್ಮಿಕರು ಇರುವ ಕಡೆ ಸ್ವಚ್ಛತೆ ಮರೀಚಿಕೆಯಾಗಿದೆ. ನಿಜವಾಗಿ ಕೆಲಸ ಮಾಡುವ ಕಾರ್ಮಿಕರಿಗೆ ಹಣ ಸಿಗುತ್ತಿಲ್ಲ. ಇವರ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕು ಎಂದು ನ್ಯಾಯಪೀಠ ಸೂಚನೆ ನೀಡಿತು.
ನಮ್ಮನ್ನು ಸ್ಥಳಾಂತರಿಸಿ
ಕಳೆದ ಒಂದು ತಿಂಗಳಿಂದ ಸತತ ಸುರಿದ ಮಳೆಯಿಂದಾಗಿ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ನಮ್ಮ ಗ್ರಾಮಗಳಲ್ಲಿ ಸಂಗ್ರಹ ಮಾಡಿರುವ ಕಸವನ್ನು ಸಂಸ್ಕರಣೆ ಮಾಡಿ ಎಂದು ಕೋರ್ಟ್ ಆದೇಶಿಸಿದೆ. ಆದರೂ ಇತ್ತ ಗಮನಿಸದ ಅಧಿಕಾರಿಗಳು ಕಸವನ್ನು ವಿಲೇವಾರಿ ಮಾಡುವುದಕ್ಕೆ ಮತ್ತೊಂದು ಕಡೆ ಸ್ಥಳ ಹುಡುಕುತ್ತಿದ್ದಾರೆ.
ಮಾವಳ್ಳಿಪುರ ಸುತ್ತಮುತ್ತಲ ಗ್ರಾಮಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸುವಂತೆ ಸರ್ಕಾರ ಹಣ ಬಿಡುಗಡೆ ಮಾಡಿದೆ. ಕೊಳಚೆ ಪ್ರದೇಶಗಳನ್ನು ಸ್ವಚ್ಛಗೊಳಿಸಬೇಕಾದ ಅಧಿಕಾರಿಗಳು ಈ ಹಣದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಖಾಸಗಿ ಬಡಾವಣೆಗಳಿಗೆ ರಸ್ತೆಗಳನ್ನು ಮಾಡಿಕೊಡುವ ಮೂಲಕ ಲೂಟಿ ಮಾಡಲಾಗುತ್ತಿದೆ.
ಸತ್ತ ಕುಟುಂಬಸ್ಥರಿಗೆ ಪರಿಹಾರ ಕಲ್ಪಿಸುವುದಾಗಿ ಘೋಷಣೆ ಮಾಡಿದರೂ ಪರಿಹಾರ ನೀಡುತ್ತಿಲ್ಲ. ಎಲ್ಲ ಸಮಸ್ಯೆಗಳಿಗೆ ತುರ್ತಾಗಿ ಪರಿಹಾರ ಕಂಡುಕೊಳ್ಳಲು ಸೂಚನೆ ನೀಡಬೇಕು. ಇಲ್ಲವಾದರೆ ನಮ್ಮನ್ನು ಬೇರೊಂದು ಕಡೆ ಸ್ಥಳಾಂತರಿಸಬೇಕು ಎಂದು ರಾಮಗೊಂಡನಹಳ್ಳಿಯ ವಾಸಿ ರಮೇಶ್ ಎಂಬುವರು ನ್ಯಾಯಪೀಠಕ್ಕೆ ಮನವಿ ಮಾಡಿದರು. ನಗರದಲ್ಲಿ ಒಣ, ಹಸಿ ತ್ಯಾಜ್ಯವನ್ನು ಕೆಳ ಹಂತದಲ್ಲಿ ವಿಂಗಡಣೆ ಮಾಡುವುದಕ್ಕೆ ಮುಂದಾಗುತ್ತಿಲ್ಲ. ಕೆಲ ಪ್ರದೇಶಗಳಲ್ಲಿ ಮನೆಗಳಿಂದ ವಿಂಗಡಿಸಿ ನೀಡಿದರೂ ಪೌರ ಕಾರ್ಮಿಕರು ಮಿಶ್ರಣ ಮಾಡಿ ತೆಗೆದುಕೊಳ್ಳುತ್ತಿದ್ದಾರೆ. ಇದರಿಂದಾಗಿ ಸಂಸ್ಕರಣೆ ಮಾಡುವುದಕ್ಕೆ ಕಷ್ಟವಾಗುತ್ತಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳವುದಕ್ಕೆ ಬಿಬಿಎಂಪಿ ಮುಂದಾಗಬೇಕು ಎಂದು ಪ್ರಕರಣ ಸಂಬಂಧ ಅರ್ಜಿ ಸಲ್ಲಿಸಿದ್ದ ಕವಿತಾ ಶಂಕರ್ ಪರ ವಕೀಲರು ನ್ಯಾಯಪೀಠಕ್ಕೆ ತಿಳಿಸಿದರು.
Advertisement