ಮೈಸೂರು: ವಿದ್ಯುತ್ ಉಳಿತಾಯ ಮತ್ತು ವಿದ್ಯುತ್ ಸ್ವಾವಲಂಬನೆ ಉದ್ದೇಶದಿಂದ ರಾಜ್ಯ ಸರ್ಕಾರ ಜಾರಿಗೆ ತಂದಿರುವ `ಹೊಸ ಬೆಳಕು' ಯೋಜನೆಯ ಎಲ್ಇಡಿ ಬಲ್ಬ್ ವಿತರಣೆ ಮತ್ತು ಜನಜಾಗೃತಿ ಅಭಿಯಾನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಇಲ್ಲಿ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ``ಕೆಲವೇ ವರ್ಷಗಳಲ್ಲಿ ಕರ್ನಾಟಕವನ್ನು ವಿದ್ಯುತ್ ಸ್ವಾವಲಂಬ ನೆಯ ರಾಜ್ಯವನ್ನಾಗಿಸಬೇಕು. ಈಗ ಸೌರವಿದ್ಯುತ್ಗೆ ಹೆಚ್ಚಿನ ಗಮನ ನೀಡಿದ್ದೇವೆ. ವಿದ್ಯುತ್ ದುರ್ಬಳಕೆ ಆಗದಂತೆ ನೋಡಿಕೊಳ್ಳಲು ಕ್ರಮ ಕೈಗೊಳ್ಳಲಾಗುತ್ತಿದೆ. ಇದಕ್ಕೆ ಸಾರ್ವಜನಿಕರ ಸಹಕಾರವೂ ಅಗತ್ಯ. ಮುಂದಿನ ಮೇ ಅಥವಾ ಜೂನ್ ವೇಳೆಗೆ ರಾಜ್ಯಕ್ಕೆ ಮತ್ತೆ 2,300 ಮೆಗಾವ್ಯಾಟ್ ವಿದ್ಯುತ್ ಸೇರ್ಪಡೆ ಆಗಲಿದೆ. ಎಲ್ಇಡಿ ಬಲ್ಬ್ ಬಳಕೆಯಿಂದ ರಾಜ್ಯಕ್ಕೆ ವಾರ್ಷಿಕ ರು.450 ರಿಂದ 500 ಕೋಟಿ ಉಳಿತಾಯವಾಗಲಿದೆ,'' ಎಂದು ತಿಳಿಸಿದರು. ಇಂಧನ ಸಚಿವ ಡಿ.ಕೆ. ಶಿವಕುಮಾರ್ ಮಾತನಾಡಿ, ರಾಜ್ಯಕ್ಕೆ 6.50 ಕೋಟಿ ಎಲ್ಇಡಿ ಬಲ್ಬ್ ಗಳಬೇಡಿಕೆಯನ್ನು ಅಂದಾಜಿಸಲಾಗಿದೆ. ಪ್ರತಿ ಮನೆಗೆ ರಿಯಾಯಿತಿ ಬಲ್ಬ್ ವಿತರಿಸಲಾಗುವುದು. ಮೀಟರ್ ರೀಡರ್ಗಳು ಅಥವಾ ಲೈನ್ಮನ್ಗಳು ಈ ಬಲ್ಪ್ ಗಳನ್ನು ಮನೆ ಮನೆಗೆ ವಿತರಿಸುತ್ತಾರೆ. ಗ್ರಾಹಕರು ನೇರವಾಗಿ ಖರೀದಿಸಲು ಅನುಕೂಲವಾಗುವಂತೆ ಮಾರಾಟ ಕೇಂದ್ರಗಳನ್ನೂ ತೆರೆಯಲಾಗುವುದು,'' ಎಂದು ಹೇಳಿದರು. ಪದ್ಮ ಪ್ರಶಸ್ತಿ ಶಿಫಾರಸು ಪಟ್ಟಿ ವಿಳಂಬವಾಗಿಲ್ಲ ``ಪದ್ಮ ಪ್ರಶಸ್ತಿಗಳಿಗೆ ರಾಜ್ಯ ಸರ್ಕಾರದಿಂದ ಗಣ್ಯರ ಹೆಸರು ಶಿಫಾರಸು ಮಾಡುವಲ್ಲಿ ಯಾವುದೇ ವಿಳಂಬವಾಗಿಲ್ಲ. ಸರ್ಕಾರದಿಂದ ಸಕಾಲದಲ್ಲಿ ಪಟ್ಟಿ ರವಾನಿಸಲಾಗಿದೆ. ಅಲ್ಲದೆ, ರಾಜ್ಯದ ಪಟ್ಟಿಯನ್ನು ಕೇಂದ್ರ ಪರಿಗಣಿಸುವ ವಿಶ್ವಾಸವಿದೆ,'' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.