ಬೆಂಗಳೂರು: ಅರ್ಜೆಂಟಾಗಿ ರೈಲ್ವೆ ಟಿಕೆಟ್ ಕೊಳ್ಳಬೇಕಿದೆ. ನಿಲ್ದಾಣದಲ್ಲಿ ನೋಡಿದರೆ ಉದ್ದುದ್ದ ಸರತಿ ಸಾಲು. ಟಿಕೇಟ್ ಕೊಳ್ಳಲು ಸ್ವಯಂಚಾಲಿತ ಯಂತ್ರಗಳೇನೋ ಕಣ್ಮುಂದೆ ಕಾಣುತ್ತಿವೆ. ಆದರೆ ಅವುಗಳ ಬಳಕೆ ಹೇಗೋ ಏನೋ? ಪಕ್ಕದಲ್ಲಿರುವವರನ್ನು ಕೇಳಲು ಮುಜುಗರ...
ರೈಲ್ವೆ ನಿಲ್ದಾಣಕ್ಕೆ ಹೋಗಿರುವ ಪ್ರತಿಯೊಬ್ಬರಿಗೂ ಇಂಥ ಅನುಭವ ಆಗಿಯೇ ಆಗಿರುತ್ತದೆ.ಅಂಥ ಮುಜುಗರ ತಪ್ಪಿಸಲು ರೈಲು ಇಲಾಖೆ ಈಗ ಮುಂದಾಗಿದ್ದು, ರೈಲ್ವೆ ಟಿಕೆಟ್ ಖರೀದಿಸಲು ಸ್ವಯಂಚಾಲಿತ ಯಂತ್ರ' ಬಳಸುವ ಬಗ್ಗೆ ತಿಳಿಸಿಕೊಡಲು `ಮಾರ್ಗದರ್ಶಕರು' ನೇಮಕ ಮಾಡಿಕೊಳ್ಳಲು ಚಿಂತನೆ ನಡೆದಿದೆ.
ನೈಋತ್ಯ ರೈಲ್ವೆ ವಿಭಾಗದ ಅಧಿಕಾರಿಗಳು ಸಿಟಿ ರೈಲ್ವೆ ನಿಲ್ದಾಣದಲ್ಲಿ ಅಳವಡಿಸಿರುವ `ಸ್ವಯಂ ಚಾಲಿತ ಯಂತ್ರ'ಗಳಿಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಯಂತ್ರಗಳ ಮೂಲಕ ಸ್ಮಾರ್ಟ್ ಕಾರ್ಡ್' ಬೆರಳೆಣಿಕೆಯಷ್ಟು ಮಂದಿ ಮಾತ್ರ ಖರೀದಿಸುತ್ತಿದ್ದಾರೆ. ಹಾಗಾಗಿ ಪ್ರಯಾಣಿಕರು ಈ ಸ್ಮಾರ್ಟ್ ಕಾರ್ಡ್ ಹೇಗೆ ಬಳಸಬೇಕು ಎಂಬುದನ್ನು ತಿಳಿಸಿಕೊಡಲು `ಗೈಡ್ 'ಗಳನ್ನು ನೇಮಿಸಲಾಗುತ್ತದೆ. `ನಿವೃತ್ತ ಸಿಬ್ಬಂದಿ' ಗೈಡ್ ಗಳಾಗಿ ನೇಮಕವಾಗಲಿದ್ದು, ಈ ಸಂಬಂಧ ಮಾತುಕತೆ ನಡೆದಿದೆ. ಮಾತುಕತೆ ಅಂತಿಮವಾದ ನಂತರ ಎಲ್ಲ ನಿಲ್ದಾಣಗಳಲ್ಲೂ ಗೈಡ್ಗಳನ್ನು ನೇಮಕ ಮಾಡಲಾಗುವುದು ಎಂದು ನೈಋತ್ಯ ರೈಲ್ವೆ ವಿಭಾಗದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ನಿವೃತ್ತರೇ ಗೈಡ್: ಯಂತ್ರ ಅಳವಡಿಸಿ ತಿಂಗಳುಗಳೇ ಕಳೆದರೂ ಜನರಿಂದ ಉತ್ತಮ ಪ್ರತಿಕ್ರಿಯೆ ಬಂದಿಲ್ಲ. ಸಾಕಷ್ಟು ಮಂದಿಗೆ ಈ ಬಗ್ಗೆ ತಿಳಿದಿಲ್ಲ. ಒಂದು ವೇಳೆ ಕಾರ್ಡ್ ಖರೀದಿಸಿದರೂ ಬಳಕೆಗೆ ಕಷ್ಟಪಡುತ್ತಿದ್ದಾರೆ. ಅವರಿಗೆ ಮಾರ್ಗದರ್ಶನ ನೀಡಲು ಇಲಾಖೆ ಸಿಬ್ಬಂದಿ ಇಲ್ಲ.
ಏನಿದು ಕಾರ್ಡ್? ಇದು ಎಟಿಎಂ ಮಾದರಿಯ ಕಾರ್ಡ್. ಸಿಟಿ ರೈಲ್ವೆ ನಿಲ್ದಾಣದ 13ನೇ ಕೌಂಟರ್ನಲ್ಲಿ ಇದು ಸಿಗುತ್ತದೆ. ಒಂದು ಸ್ಮಾರ್ಟ್ ಕಾರ್ಡ್ಗೆ ಕನಿಷ್ಠ ಮೊತ್ತ 100 ರೂಪಾಯಿಯನ್ನು ಅದರಲ್ಲಿ 50 ರೂಪಾಯಿಯನ್ನು ಭದ್ರತಾ ಠೇವಣಿ ಹಾಗೂ 52 ರೂಪಾಯಿಯನ್ನು ಅನ್ನು ಟಿಕೆಟ್ ಖರೀದಿಗೆ ಬಳಸಬಹುದು (ರಿಚಾರ್ಜ್ ಮೊತ್ತ 50 ರೂಪಾಯಿಗೆ ಶೇ.5ರಷ್ಟು ಬೋನಸ್ ನೀಡಲಾಗುತ್ತದೆ. ಅದಕ್ಕೆ ಸಿಗುವ 2 ರೂಪಾಯಿ ಸೇರಿ 52 ರೂಪಾಯಿ ಆಗುತ್ತದೆ). ಹೀಗೆ 5 ಸಾವಿರ ರೂಪಾಯಿ ಮೊತ್ತದವರೆಗೂ ಸ್ಮಾರ್ಟ್ ಕಾರ್ಡ್ ಪಡೆಯಬಹುದು. ಕಾರ್ಡ್ ಖರೀದಿಸಿದ ನಂತರ 1 ವರ್ಷ ಅದು ಚಲಾವಣೆಯಲ್ಲಿರುತ್ತದೆ. ಸಾಮಾನ್ಯ, ಎಕ್ಸ್ ಪ್ರೆಸ್, ಸೂಪರ್ ಫಾಸ್ಟ್ ರೈಲಿನಲ್ಲಿ ಪ್ರಯಾಣಿಸಲು ಹಾಗೂ ಪ್ಲಾಟ್ ಫಾರಂ ಟಿಕೆಟ್ ಸಹ ಪಡೆಯಬಹುದು. ಕಾರ್ಡ್ ಪಡೆದು ವರ್ಷ ಮುಗಿಯುವ ಮುನ್ನ ಹಿಂತಿರುಗಿಸಿದಲ್ಲಿ ಪೂರ್ಣ ಹಣ ವಾಪಾಸ್ ನೀಡುತ್ತಾರೆ.
ಬಳಕೆ ಹೇಗೆ? ಕಾರ್ಡ್ ಅನ್ನು ಯಂತ್ರದ ಮೇಲಿಟ್ಟರೆ ಸ್ಕ್ರೀನ್ ಮೇಲೆ ಕನ್ನಡ, ಇಂಗ್ಲಿಷ್, ಹಿಂದಿ ಭಾಷೆಯ ಆಯ್ಕೆಗಳು ಬರುತ್ತವೆ. ನಿಲ್ದಾಣಗಳನ್ನೂ ತೋರಿಸುತ್ತದೆ. ಬೇಕಾದ ನಿಲ್ದಾಣದ ಮೇಲೆ ಒತ್ತಿದರೆ, ಯಾವ ರೈಲು ಎಂದು ಕೇಳುತ್ತದೆ. ಹೀಗೆ ಕೆಲ ಹಂತದಲ್ಲಿ ಯಂತ್ರದ ಗುಂಡಿ ಒತ್ತಿದರೆ ಟಿಕೆಟ್ ಕೈ ಸೇರುತ್ತದೆ.
ಕೆಲ ದಿನಗಳಿಂದ ಈ ಯಂತ್ರಗಳು ಕೆಟ್ಟು ನಿಂತಿದ್ದವು. ಅವುಗಳನ್ನು ಈಗ ಸರಿಪಡಿಸಲಾಗಿದೆ. ಆದರೂ ಸ್ವಯಂ ಚಾಲಿತ ಯಂತ್ರ ಬಳಸುವವರ ಸಂಖ್ಯೆ ವಿರಳವಾಗಿದೆ. ಹಾಗಾಗಿ ಈ ಬಗ್ಗೆ ಜನರಲ್ಲಿ ಅರಿವು ಮೂಡಿಸಿ, ಯಂತ್ರದಿಂದ ಟಿಕೆಟ್ ತೆಗೆದುಕೊಡಲು ಗೈಡ್ ಗಳನ್ನು ನೇಮಿಸಲು ಚಿಂತನೆ ನಡೆದಿದೆ.
● ಶ್ರೀಧರ ಮೂರ್ತಿ ಹಿರಿಯ ಮಂಡಲ ವಾಣಿಜ್ಯ
ವ್ಯವಸ್ಥಾಪಕ, ಬೆಂಗಳೂರು
Advertisement