ಮೈಸೂರು: ಎಡೆಸ್ನಾನ ಮಾಡುವುದೆಂದರೆ ದೇವರ ಪ್ರಸಾದದ ಮೇಲೆ ಉರುಳುವುದು ಎಂದರ್ಥ. ಅದರಲ್ಲಿ ತಪ್ಪೇನಿದೆ?ಎಡೆಸ್ನಾನ ಮಾಡಲು ತಾವು ಸಿದ್ಧ ಎಂದು ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀ ಹೇಳಿದ್ದಾರೆ.
ಮೊದಲು ಬ್ರಾಹ್ಮಣರ ಉಂಡು ಬಿಟ್ಟ ಎಂಜಲೆಲೆ ಮೇಲೆ ಉರುಳುವುದಕ್ಕೆ ವಿರೋಧ ವ್ಯಕ್ತಪಡಿಸಲಾಯಿತು. ಇದೊಂದು ಕೀಳು ಕೆಲಸ. ಜಾತಿ ತಾರತಮ್ಯವೆಸಲಾಗುತ್ತಿದೆ ಎಂದು ಆಕ್ಷೇಪ ವ್ಯಕ್ತವಾಯಿತು. ನಂತರ ದೇವರ ಪ್ರಸಾದದ ಮೇಲೆ ಉರುಳುವ ಎಡೆಸ್ನಾನಕ್ಕೆ ಸಲಹೆ ನೀಡಲಾಯಿತು. ಆದರೆ ಅದಕ್ಕೂ ಕೂಡ ವಿರೋಧ ವ್ಯಕ್ತಪಡಿಸಿದರೆ ಹೇಗೆ ಎಂದು ಶ್ರೀಗಳು ಪ್ರಶ್ನಿಸಿದ್ದಾರೆ.
ಎಡೆಸ್ನಾನ ಎಂದರೆ ದೇವರ ಪ್ರಸಾದವನ್ನು ಗೋವಿಗೆ ತಿನ್ನಿಸಿ ಬಳಿಕ ಎಲೆ ಮೇಲೆ ಹರಕೆ ಹೊತ್ತುಕೊಂಡವರು ಉರುಳು ಸೇವೆ ಮಾಡುತ್ತಾರೆ. ಈ ರೀತಿ ಮಾಡುವುದರಿಂದ ಪ್ರಸಾದಕ್ಕೆ ಅಗೌರವಕ್ಕೆ ತೋರಿಸಿದಂತಾಗುತ್ತದೆ ಎಂದು ಆಕ್ಷೇಪ ವ್ಯಕ್ತಪಡಿಸಲಾಗುತ್ತಿದೆ. ಇದು ಸರಿಯಲ್ಲ. ನಾವು ಪಾಪ ಪರಿಹಾರಕ್ಕಾಗಿ ಗಂಗಾನದಿಯಲ್ಲಿ ಮುಳುಗುತ್ತೇವೆ. ಅದು ತಪ್ಪೇ, ಗಂಗೆ ಅಪವಿತ್ರಳಾಗುತ್ತಾಳೆಯೇ ಎಂದು ಪ್ರಶ್ನಿಸಿದರು.
ಎಡೆಸ್ನಾನಕ್ಕೆ ನ್ಯಾಯಾಲಯ ಮತ್ತು ಸರ್ಕಾರವೇ ಒಪ್ಪಿಗೆ ಕೊಟ್ಟಿದೆ. ಜಾತಿ ತಾರತಮ್ಯ ಮತ್ತು ಜನರ ಭಾವನೆಗೆ ಧಕ್ಕೆ ಬಾರದಂತೆ ಎಡೆಸ್ನಾನ ನಡೆಸಲು ಒಪ್ಪಿಗೆ ಕೊಟ್ಟಿದೆ. ಹಾಗಿರುವಾಗ ಇನ್ನೂ ವಿರೋಧಿಸುವುದು ಸರಿಯಲ್ಲ ಎಂದರು. ತಾವು ತಮ್ಮದೇ ಆದ ನೀತಿ ನಿಯಮಗಳಿಂದಾಗಿ ಉಡುಪಿಯಲ್ಲಿ ಊಟ ಮಾಡುವುದಿಲ್ಲ ಎಂದರು.
ಮಧ್ವಾಚಾರ್ಯರು ಶೂದ್ರರನ್ನು, ದಲಿತರನ್ನು ಕೀಳರು ಎಂದು ಉಲ್ಲೇಖೀಸಿದ್ದರು ಎಂದು ವಿಶ್ಲೇಷಣೆಗಾರ ಕೆ.ಎಸ್. ಭಗವಾನ್ ಹೇಳಿದ್ದಾರೆ. ಅವರು ಈ ಬಗ್ಗೆ ಸೂಕ್ತ ದಾಖಲೆ ತೋರಿಸಬೇಕು. ಇಲ್ಲವೇ ಕ್ಷಮೆ ಕೋರಬೇಕೆಂದು ಆಗ್ರಹಿಸಿದರು.